ಜೂನ್ 30 ಭಾನುವಾರ, 2024ರ ಟಿ20 ವಿಶ್ವಕಪ್ನ ಫೈನಲ್ನಲ್ಲಿ ಭಾರತದ ಗೆಲುವನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸುತ್ತಿದೆ. ಫೈನಲ್ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆ ಕ್ಷಣಗಳನ್ನು ಭಾರತ ಮತ್ತು ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ.
ಇಡೀ ಪಂದ್ಯವನ್ನು ಭಾರತದತ್ತ ತಿರುಗಿಸಿದ ಸೂರ್ಯಕುಮಾರ್ ಯಾದವ್ ಕ್ಯಾಚ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಗೆಲುವಿನ ನಂತರ ಭಾರತದ ಫೀಲ್ಡಿಂಗ್ ಕೋಚ್ ಸ್ವತಃ ಪ್ರಾರಂಭಿಸಿದ ಸಂಪ್ರದಾಯದಂತೆ ಪಂದ್ಯದ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಯನ್ನು ನೀಡಿದರು.

ಕೊನೆಯ ಓವರ್ನಲ್ಲಿ ಡೇವಿಡ್ ಮಿಲ್ಲರ್ ಅವರ ಅದ್ಭುತ ಕ್ಯಾಚ್ ಪಡೆದ ಸೂರ್ಯಕುಮಾರ್ ಯಾದವ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು ಸೂರ್ಯಕುಮಾರ್ ಯಾದವ್ ಹೆಸರನ್ನು ಘೋಷಿಸಿದರು.
ಇದಾದ ಬಳಿಕ ಪದಕವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೀಡಿದರು. ಬಳಿಕ ಸೂರ್ಯಕುಮಾರ್ ಯಾದವ್ ಅವರನ್ನು ಅಪ್ಪಿಕೊಂಡು ಇಡೀ ತಂಡವನ್ನು ಹೊಗಳಿದರು.
ಈ ವೇಳೆ ಮಾತಾನಾಡಿದ ಸೂರ್ಯಕುಮಾರ್ ಯಾದವ್, ಈ ಪಂದ್ಯದಲ್ಲಿ ನಾವು ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದೇವೆ. ರಾಹುಲ್ ಭಾಯ್ ಮತ್ತು ರೋಹಿತ್ ಶರ್ಮಾ ಈ ಹಿಂದೆ ಹೇಳಿದಂತೆ, ಪ್ರತಿಯೊಬ್ಬ ಆಟಗಾರನೂ ತನ್ನ ಪಾತ್ರವನ್ನು ಚೆನ್ನಾಗಿ ತಿಳಿದಿದ್ದಾನೆ. ಆದರೆ ನಮ್ಮ ದಾರಿಯಲ್ಲಿ ಬಂದ ಪ್ರತಿಯೊಂದು ಸವಾಲನ್ನು ನಾವು ಸ್ವೀಕರಿಸಿದ್ದೇವೆ ಎಂದು ನಾನು ಹೇಳುತ್ತೇನೆ ಎಂದರು.
ಸೂರ್ಯಕುಮಾರ್ ಯಾದವ್ ಚೊಚ್ಚಲ ಐಸಿಸಿ ಟ್ರೋಫಿಯನ್ನು ಗೆದ್ದಿರುವ ಸಾಧನೆ ಮಾಡಿದ್ದಾರೆ. ಭಾರತ 11 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದಿದೆ.
ಕೋಚ್ ಟಿ ದಿಲೀಪ್ ಅವರು ಸೂರ್ಯ ಮತ್ತು ವಿರಾಟ್ ಕೊಹ್ಲಿಯನ್ನು ಬೌಂಡರಿ ಕಾವಲುಗಾರರು ಎಂದು ಬಣ್ಣಿಸಿದ್ದಾರೆ. ಈ ಇಬ್ಬರು ಆಟಗಾರರು ಔಟ್ಫೀಲ್ಡ್ನಲ್ಲಿ ಅತ್ಯುತ್ತಮವಾಗಿ ಚೆಂಡು ಬೌಂಡರಿ ಗೆರೆ ದಾಟದಂತೆ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.