ಜೂನ್ 27 ಗುರುವಾರ, 2024ರ ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ಗಳಿಂದ ಸೋತಿದೆ. ಇದರೊಂದಿಗೆ ಟಿ0 ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ಪಯಣ ಅಂತ್ಯಗೊಂಡಿದ್ದು, ಆಫ್ರಿಕಾ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಈ ಮೆಗಾ ಟೂರ್ನಿಗೂ ಮೊದಲು ಅಫ್ಘಾನಿಸ್ತಾನ ಸೆಮಿಫೈನಲ್ ಸನಿಹ ಬರುತ್ತೆ ಎಂದು ಕೊಂಡಿರಲಿಲ್ಲ. ಆದರೆ ಈ ಎಲ್ಲ ನಂಬಿಕೆಗಳನ್ನು ಹುಸಿ ಮಾಡಿದ ರಶೀದ್ ಖಾನ್ ನಾಯಕತ್ವದ ಅಫ್ಘಾನಿಸ್ತಾನ ಬಲಿಷ್ಠ ತಂಡಗಳ ಎದುರು ಗೆದ್ದು ಮೊಟ್ಟ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ ಐತಿಹಾಸ ಸಾಧನೆಯನ್ನು ಮಾಡಿತ್ತು.

ಆಸ್ಟ್ರೇಲಿಯಾ ವಿರುದ್ಧ ಗೆದ್ದ ನಂತರ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಪ್ರೇಮಿಗಳು ಅದ್ಧೂರಿ ಸಂಭ್ರಮಾಚರಣೆ ಮಾಡಿದ್ದರು. ಆ ಬಳಿಕ ಅಫ್ಘಾನಿಸ್ತಾನ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ಗೆ ಅರ್ಹತೆ ಪಡೆದಾಗ ಅಫ್ಘಾನಿಸ್ತಾನ ತಂಡಕ್ಕೆ ಅಲ್ಲಿ ತಾಲಿಬಾನ್ ಸರ್ಕಾರ ಅಭಿನಂದನೆ ಸಲ್ಲಿಸಿತ್ತು.
ಅಫ್ಘಾನ್ ಕ್ರಿಕೆಟ್ ಅಭಿಮಾನಿಗಳು ಬಹಿರಂಗವಾಗಿ ಸಂಭ್ರಮಿಸಿದ್ದು ಇದೇ ಮೊದಲು. ಇದೀಗ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ನಂತರ ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ನೋವಿನಲ್ಲೂ ಅದ್ಭುತ ಮಾತುಗಳನ್ನಾಡಿದ್ದಾರೆ.
ಪಂದ್ಯದ ನಂತರ ಮಾತನಾಡಿರುವ ರಶೀದ್ ಖಾನ್ ಅವರ ಮುಖದಲ್ಲಿ ನಗು ಇತ್ತು. ಅವರ ನಗುವಿನಲ್ಲಿ ಹೃದಯಾಘಾತ ಮತ್ತು ನೋವನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ. ಅದರೂ ಇದನ್ನು ವ್ಯಕ್ತಪಡಿಸದ ರಶೀದ್ ಖಾನ್ ಧೈರ್ಯವಾಗಿ ತಮ್ಮ ತಂಡ ಟಿ20 ವಿಶ್ವಕಪ್ನಲ್ಲಿ ಪಯಣ ಬೆಳೆಸಿದರ ಬಗ್ಗೆ ಹೇಳದ್ದಾರೆ.
'ಇದು ನಮಗೆ ಒಂದು ಆರಂಭವಷ್ಟೇ, ಯಾವುದೇ ತಂಡವನ್ನು ಸೋಲಿಸುವ ವಿಶ್ವಾಸ ಮತ್ತು ನಂಬಿಕೆಯನ್ನು ನಾವು ಹೊಂದಿದ್ದೇವೆ. ನಾವು ನಮ್ಮ ಪ್ರಕ್ರಿಯೆಯನ್ನು ಮುಂದುವರಿಸಿ ಅದನ್ನು ಕಲಿಕೆಯ ಅನುಭವವಾಗಿ ತೆಗೆದುಕೊಳ್ಳಬೇಕು.
ಈ ಟೂರ್ನಿಯಲ್ಲಿ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ. ಇದು ನಮಗೆ ಉತ್ತಮ ಟೂರ್ನಿಯಾಗಿದೆ. ಆದರೆ ನಾವು ಕಷ್ಟಪಟ್ಟು ಆಡಿ ಮುಂದಿನ ಸಲ ಇನ್ನು ಬಲಿಷ್ಠವಾಗಿ ಮರಳುತ್ತೇವೆ ಎಂದು ಉತ್ಸಾಹದಿಂದ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಕ್ರಿಕೆಟ್ ಅಭಿಮಾನಿಗಳು ಅಫ್ಘಾನಿಸ್ತಾನದ ಹೋರಾಟಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಸೋಲಿನ ಬಳಿಕವೂ ಅಫ್ಘಾನಿಸ್ತಾನಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಮುನಾಫ್ ಪಟೇಲ್ ಅವರು ಕೂಡ ಟಿ20 ವಿಶ್ವಕಪ್ 2024ರಲ್ಲಿ ಅಫ್ಘಾನಿಸ್ತಾನ ನೀಡಿದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮುನಾಫ್ ಪಟೇಲ್ ಪೋಸ್ಟ್ ಮಾಡಿದ್ದಾರೆ.
ಧೈರ್ಯವಾಗಿರಿ ಸ್ನೇಹಿತರೇ, ಇಂದು ನಿಮ್ಮ ದಿನವಲ್ಲ. ನಿಮ್ಮ ತಪ್ಪುಗಳಿಂದ ಕಲಿಯಿರಿ ಮತ್ತು ಮುಂದಿನ ಬಾರಿ ಬಲವಾಗಿ ಹಿಂತಿರುಗಿ. ನೀವು ನೆನಪಿಟ್ಟುಕೊಳ್ಳಲು ಇದು ಉತ್ತಮ ವಿಶ್ವಕಪ್ ಆಗಿತ್ತು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ನೀನು ಹೋರಾಡಿದ ರೀತಿ ನನಗೆ ಇಷ್ಟವಾಯಿತು ಎಂದು ಬರೆದುಕೊಂಡಿದ್ದಾರೆ.