ಜೂನ್ 9 ಭಾನುವಾರ, ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳು ತಮ್ಮ ಭೌಗೋಳಿಕ ಸ್ಥಳದಿಂದ ಮಾತ್ರವಲ್ಲದೆ, ಕ್ರೀಡಾ ಚಟುವಟಿಕೆಗಳಲ್ಲಿಯೂ ಹಲವು ವರ್ಷಗಳಿಂದ ಉಭಯ ತಂಡಗಳು ಎದುರಾಳಿಗಳಾಗಿವೆ.
ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ವಿಶ್ವದಲ್ಲೆಡೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಇದರ ಮಧ್ಯೆ ಭಾರತ ತಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. .

ಹೀಗಾಗಿ ಈ ಇಬ್ಬರ ನಡುವೆ ಉತ್ತಮ ಬ್ಯಾಟರ್ ಯಾರು ಎಂಬ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಎರಡು ತಂಡಗಳ ನಡುವಿನ ಬಹು ನಿರೀಕ್ಷಿತ ಟಿ 20 ವಿಶ್ವಕಪ್ ಪಂದ್ಯಕ್ಕೂ ಮುನ್ನ ತಮ್ಮ ಪ್ರಕಾರ ಯಾರು ಉತ್ತಮ ಬ್ಯಾಟರ್ ಎಂಬುದನ್ನು ತಿಳಿಸಿದ್ದಾರೆ.
ಐಎಎನ್ಎಸ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ಬಾಬರ್ ಅಜಮ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಬಾಬರ್ ಅವರನ್ನು ಕೊಹ್ಲಿಯೊಂದಿಗೆ ಹೋಲಿಸಿದ್ದಕ್ಕೂ ಗರಂ ಆಗಿದ್ದಾರೆ.
ಬಾಬರ್ ಅಜಮ್ ಶತಕ ಬಾರಿಸಿದ ಮರುದಿನ ನೀವು ಅವರನ್ನು ವಿರಾಟ್ ಕೊಹ್ಲಿಯೊಂದಿಗೆ ಹೋಲಿಸಲು ಪ್ರಾರಂಭಿಸಿದ್ದೀರಿ. ವಿರಾಟ್ ಶೂಗಳು ಬಾಬರ್ಗೆ ಸಮನಾಗಿಲ್ಲ. ಕಳೆದ ಪಂದ್ಯದಲ್ಲಿ ಬಾಬರ್ ಅಜಮ್ ಅವರನ್ನು ಯುಎಸ್ಎ ಬೌಲರ್ಗಳು ಕಟ್ಟಿ ಹಾಕಿದ್ದಾರೆ.

ಬಾಬರ್ಗೆ ಬೌಲರ್ಗಳನ್ನು ಎದುರಿಸುವ ಧೈರ್ಯವಿಲ್ಲ. ಅವನು ತನ್ನ ಆಟವನ್ನು ನಿಲ್ಲಿಸಿ ತಂಡಕ್ಕಾಗಿ ಆಡಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಕುರಿತು ಮಾತನಾಡಿರುವ ಕನೇರಿಯಾ ಭವಿಷ್ಯ ನುಡಿದಿದ್ದಾರೆ. ಭಾರತವು ಪಾಕಿಸ್ತಾನವನ್ನು ಕೆಟ್ಟದಾಗಿ ಸೋಲಿಸುತ್ತದೆ. ಭಾರತವನ್ನು ಸೋಲಿಸುವ ಸಾಮರ್ಥ್ಯ ಪಾಕಿಸ್ತಾನಕ್ಕಿಲ್ಲ.
ಪಾಕಿಸ್ತಾನ ವಿಶ್ವಕಪ್ಗೆ ಬಂದಾಗಲೆಲ್ಲಾ, ತಮ್ಮ ಬೌಲಿಂಗ್ ಅನ್ನು ಹೊಗಳುತ್ತಾರೆ. ಜೊತೆಗೆ ಬೌಲಿಂಗ್ ಒಂದೆ ವಿಭಾಗ ಪಂದ್ಯವನ್ನು ಗೆಲ್ಲಿಸುತ್ತದೆ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಇದೇ ದುರ್ಬಲ ಬೌಲಿಂಗ್ನಿಂದ ಅವರು ಮೊದಲ ಪಂದ್ಯವನ್ನು ಕಳೆದುಕೊಳ್ಳಲು ಕಾರಣವಾಗಿತ್ತು ಎಂದಿದ್ದಾರೆ.
ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಸಹ-ಆತಿಥೇಯ ಯುಎಸ್ಎ ವಿರುದ್ಧ ಸೂಪರ್ ಓವರ್ನಲ್ಲಿ ಆಘಾತಕಾರಿ ಸೋಲು ಕಂಡಿತ್ತು. ಅನುಭವಿ ಬೌಲರ್ ಮೊಹಮ್ಮದ್ ಅಮೀರ್ ಸೂಪರ್ ಓವರ್ನಲ್ಲಿ 7 ಹೆಚ್ಚುವರಿ ರನ್ ಸೇರಿದಂತೆ 18 ರನ್ಗಳನ್ನು ನೀಡಿದರು. ಹೀಗಾಗಿ ಪಂದ್ಯ ಸೋತಿದೆ.