ಮುಂಬೈ: ಬ್ಯಾಟರ್ಗಳು ಜವಾಬ್ದಾರಿ ಮರೆತು ಆಡಿದರೆ, ಬೌಲರ್ಸ್ಗಳು ಜವಾಬ್ದಾರಿ ಅರಿತು ಬೌಲಿಂಗ್ ಮಾಡಿದ್ದರಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್ನ "ಎ" ಗುಂಪಿನ ಪಂದ್ಯದಲ್ಲಿ 29 ರನ್ಗಳಿಂದ ಯುಎಸ್ಎ ತಂಡವನ್ನು ಮಣಿಸಿ ಗೆಲುವಿನ ಆರಂಭವನ್ನು ಮಾಡಿದೆ. ಭಾರತ ತಂಡದ ಪರ ಗೆಲುವಿನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಮಿಂಚಿದರು. ಇವರ 84 ರನ್ಗಳ ಇನಿಂಗ್ಸ್ ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತದ ಆರಂಭ ಕಳಪೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ಪವರ್ ಪ್ಲೇನಲ್ಲಿ ಶನಿವಾರ ನೀಡಿದಂತಹ ಪ್ರದರ್ಶನವನ್ನು ನೀಡಿರಲಿಲ್ಲ. ಸಾಮಾನ್ಯವಾಗಿ ಒಬ್ಬರು ಔಟ್ ಆದರೆ ಇನ್ನೊಬ್ಬರು ಕ್ರೀಸ್ಗೆ ಕಚ್ಚಿಕೊಂಡು ಬ್ಯಾಟ್ ಮಾಡುತ್ತಲೇ ಇದ್ದರು. ಆದರೆ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.

6ನೇ ವಿಕೆಟ್ಗೆ ರಿಂಕು ಸಿಂಗ್ (6) ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಕೊಂಚ ಅಮೆರಿಕ ತಂಡದ ಬೌಲರ್ಗಳನ್ನ ಕಾಡಿದರು. ಈ ಜೋಡಿ 26 ರನ್ ಸೇರಿಸಿತು. ಹಾರ್ದಿಕ್ ಪಾಂಡ್ಯ ಬಂದು ಹೋಗುವ ಸಂಪ್ರದಾಯ ಮುಗಿಸಿದರು. 7ನೇ ವಿಕೆಟ್ಗೆ ನಾಯಕ ಸೂರ್ಯ ಅವರನ್ನು ಸೇರಿಕೊಂಡು ಅಕ್ಷರ್ ಪಟೇಲ್ (14) ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ 41 ರನ್ ಜೊತೆಯಾಟದ ಕಾಣಿಕೆ ನೀಡಿದರು. ಕೆಳ ಕ್ರಮಾಂಕದ ಬ್ಯಾಟರ್ಗಳ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ.

ನಾಯಕ ಸೂರ್ಯಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲಿ ನೆಲಕಚ್ಚಿ ಬ್ಯಾಟ್ ಮಾಡಿದ ಸೂರ್ಯ ಬಳಿಕ ಬಿಗ್ ಹಿಟ್ ಬಾರಿಸುತ್ತಾ ಸಾಗಿದರು. ಪರಿಣಾಮ 49 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 84 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಭಾರತ 9 ವಿಕೆಟ್ಗೆ 161 ರನ್ ಸೇರಿಸಿತು.
ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಅಮೆರಿಕ ಆರಂಭ ಕಳಪೆಯಾಗಿತ್ತು. ಮೊದಲ ಆರು ಓವರ್ಗಳಲ್ಲಿ ಆಂಡ್ರೀಸ್ ಗೌಸ್, ಸಾಯಿತೇಜ ಮುಕ್ಕಮಲ್ಲ, ನಾಯಕ ಮೊನಾಂಕ್ ಪಟೇಲ್ ಪೆವಿಲಿಯನ್ ಸೇರಿದರು. 4ನೇ ವಿಕೆಟ್ಗೆ ಮಿಲಿಂದ್ ಕುಮಾರ್ ಹಾಗೂ ಕರ್ನಾಟಕ ಮೂಲದ ಸಂಜಯ್ ಕೃಷ್ಣಮೂರ್ತಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ 58 ರನ್ ಕಾಣಿಕೆ ನೀಡಿದರು. ಮಿಲಿಂದ್ ಕುಮಾರ್ 34 ರನ್ ಬಾರಿಸಿ ಔಟ್ ಆದರೆ, ಸಂಜಯ್ 37, ಶುಭಂ ರಂಜನೆ 37 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಅಮೆರಿಕ 20 ಓವರ್ಗಳಲ್ಲಿ 8 ವಿಕೆಟ್ಗೆ 132 ರನ್ ಸೇರಿಸಿ ಸೋಲು ಕಂಡಿತು. ಭಾರತದ ಪರ ಮೊಹಮ್ಮದ್ ಸಿರಾಜ್ 3, ಅರ್ಶದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಉರುಳಿಸಿದರು.