
ಸೂರ್ಯಕುಮಾರ್ ಬಗ್ಗೆ ಮೊಯೀನ್ ಅಲಿ ಹೊಗಳಿಕೆಯ ಮಾತು
ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೊಯೀನ್ ಅಲಿ ಹೊಗಳಿದ್ದು ಬೇರೆ ಯಾರನ್ನೂ ಅಲ್ಲ, ಭಾರತದ ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್ ಬಗ್ಗೆ. ಸೂರ್ಯ ಚುಟುಕು ಮಾದರಿಯಲ್ಲಿ ನೀಡುತ್ತಿರುವ ಅಮೋಘ ಪ್ರದರ್ಶನಕ್ಕೆ ಕ್ರಿಕೆಟ್ ಪಂಡಿತರು ಮಾಜಿ ಕ್ರಿಕೆಟಿಗರು ಕೂಡ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಸೂರ್ಯ ಈ ಟೂರ್ನಿಯಲ್ಲಿ ಭಾರತದ ಪರವಾಗಿ ಎರಡನೇ ಅತೀ ಹೆಚ್ಚು ರನ್ಗಳಿಸಿದ ಆಟಗಾರನಾಗಿಯೂ ಗುರುತಿಸಿಕೊಂಡಿದ್ದಾರೆ.

ಆತ ವಿಶ್ವದ ಅತ್ಯುತ್ತಮ ಆಟಗಾರ ಎಂದ ಅಲಿ
ಟೀಮ್ ಇಂಡಿಯಾದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್ ಬಗ್ಗೆ ಮಾತನಾಡಿದ ಮೊಯೀನ್ ಅಲಿ "ಆತನೋರ್ವ ಅದ್ಭುತ ಆಟಗಾರ. ಆತ ವಿಶ್ವದ ಅತ್ಯುತ್ತಮ ಆಟಗಾರ ಎಂದು ನನಗೆ ಭಾಸವಾಗುತ್ತಿದೆ. ಆತ ಟಿ20 ಕ್ರಿಕೆಟ್ ಮಾದರಿಯನ್ನು ಮತ್ತೊಂದು ಹಂತ ಮೇಲಕ್ಕೇರಿಸಿದ್ದಾನೆ. ಆತ ಅದ್ಭುತವಾಗಿ ಆಡುತ್ತಿರುವಾಗ ಆತನಿಗೆ ಬೌಲಿಂಗ್ ಮಾಡುವುದೇ ಸಾಧ್ಯವಿಲ್ಲ ಎಂಬಂತೆ ಮಾಡಿದ ಮೊದಲ ಆಟಗಾರ ಎನಿಸುತ್ತದೆ. ಆತನಿಗೆ ಬೌಲಿಂಗ್ ನಡೆಸುವುದು ಬಹಳ ಕಠಿಣ ಹಾಗೂ ಆತನ ದೌರ್ಬಲ್ಯವೇ ತಿಳಿಯುವುದಿಲ್ಲ" ಎಂದಿದ್ದಾರೆ ಮೊಯೀನ್ ಅಲಿ.

ಆತ ಅಕ್ಷರಶಃ ಕೊಂದೇ ಬಿಟ್ಟಿದ್ದ!
ಇನ್ನು ಈ ಹಿಂದೆ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ಪ್ರವಾಸ ಕೈಗೊಂಡು ಟಿ20 ಸರಣಿಯಲ್ಲಿ ಭಾಗಿಯಾಗಿದ್ದಾಗ ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ ಸಿಡಿಸಿ ಸಾಧನೆ ಮಾಡಿದ್ದರು. ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದಿದ್ದ ಪಂದ್ಯದಲ್ಲಿ 14 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದ್ದರು ಸೂರ್ಯಕುಮಾರ್ ಯಾದವ್. ಮೊಯೀನ್ ಅಲಿಗೆ ವಿಕೆಟ್ ನೀಡುವ ಮುನ್ನ ಸೂರ್ಯ ಭರ್ಜರಿ 117 ರನ್ಗಳನ್ನು ಸಿಡಿಸಿದ್ದರು. ಆ ಇನ್ನಿಂಗ್ಸ್ ನೆನಪಿಸಿಕೊಂಡ ಮೊಯೀನ್ ಅಲಿ ಆತನನ್ನು ಔಟ್ ಮಾಡುವ ಮುನ್ನ ನನ್ನನ್ನು ಆತ ಅಕ್ಷರಶಃ ಕೊಂದೇ ಬಿಟ್ಟಿದ್ದ. ಅಂದು ನೋಡಿದ ಕೆಲವು ಶಾಟ್ಗಳು ನಾನು ಕಂಡು ಅತ್ಯುತ್ತಮ ಹೊಡೆತಗಳು" ಎಂದಿದ್ದಾರೆ ಮೊಯೀನ್ ಅಲಿ.

ಗುರುವಾರ ನಡೆಯಲಿದೆ ಸೆಮಿಫೈನಲ್ ಪಂದ್ಯ
ಇನ್ನು ಈ ಬಾರಿಯ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾ ತಂಡಗಳು ಮುಖಾಮುಖಿಯಾಗಲಿದೆ. ಈ ಮಹತ್ವದ ಪಂದ್ಯಗಳು ಗುರುವಾರ ನಡೆಯಲಿದ್ದು ಅಡಿಲೇಡ್ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಇಂಗ್ಲೆಂಡ್ ತಂಡ ಸಾಕಷ್ಟು ಆಲ್ರೌಂಡರ್ಗಳಿಂದ ಕೂಡಿದ್ದು ಭಾರತ ತಂಡಕ್ಕೆ ತೀವ್ರ ಪೈಪೋಟಿ ಎದುರಾಗುವುದರಲ್ಲಿ ಅನುಮಾನವಿಲ್ಲ. ಜೋಸ್ ಬಟ್ಲರ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ ಸೂಪರ್ 12 ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು.


Click it and Unblock the Notifications
