
ಎರಡು ಪಂದ್ಯಗಳಲ್ಲಿ ಸೋತ ನಂತರ ಪಾಕಿಸ್ತಾನ ಕೊನೆಗೂ ಟಿ20 ವಿಶ್ವಕಪ್ 2022ರಲ್ಲಿ ಮೊದಲ ಜಯ ದಾಖಲಿಸಿದೆ. ಭಾನುವಾರ ಪರ್ತ್ನಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 6 ವಿಕೆಟ್ಗಳ ಜಯ ಸಾಧಿಸಿ ನಿಟ್ಟುಸಿರು ಬಿಟ್ಟಿತು. ಈ ಗೆಲುವಿನ ಮೂಲಕ ಪಾಕಿಸ್ತಾನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 91 ರನ್ ಗಳಿಸಿತು. 92 ರನ್ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ತಂಡ 13.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.
ಪಂದ್ಯದ ನಂತರ ಮಾತನಾಡಿದ ಬಾಬರ್ ಅಜಂ ತಂಡದ ಬೌಲಿಂಗ್ ಪ್ರದರ್ಶನದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಆದರೆ, 92 ರನ್ ಬೆನ್ನಟ್ಟಲು 13.5 ಓವರ್ ತೆಗೆದುಕೊಂಡಿದ್ದಲ್ಲದೆ, 4 ವಿಕೆಟ್ ಕಳೆದುಕೊಂಡ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದು, ಇನ್ನೂ ಉತ್ತಮವಾಗಿ ಚೇಸಿಂಗ್ ಮಾಡಬಹುದಿತ್ತು ಎಂದು ಹೇಳಿದ್ದಾರೆ.
ಬೌಲಿಂಗ್ ಬಗ್ಗೆ ಮಾತನಾಡಿದ ಬಾಬರ್, "ನನಗೆ ತುಂಬಾ ಸಂತೋಷವಾಗಿದೆ. ತಂಡವು ಬೌಲಿಂಗ್ನಲ್ಲಿ ಮತ್ತು ಬ್ಯಾಟಿಂಗ್ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿತು. ಬೌಲಿಂಗ್ ಲೆಂಗ್ತ್ ನಿರ್ಣಾಯಕವಾಗಿದೆ ಎಂದು ನಾನು ಭಾವಿಸುತ್ತೇನೆ. ಪಿಚ್ನಲ್ಲಿ ಬೌನ್ಸ್ ಇದ್ದ ಕಾರಣ ಉತ್ತಮ ಲೆಂಗ್ತ್ನಲ್ಲಿ ಬೌಲಿಂಗ್ ಮಾಡಬೇಕಾಗಿತ್ತು. ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಿದರು" ಎಂದು ಹೇಳಿದರು.

ಇನ್ನೂ ಉತ್ತಮವಾಗಿ ಚೇಸ್ ಮಾಡಬಹುದಿತ್ತು
"ನನ್ನ ಅಭಿಪ್ರಾಯದಲ್ಲಿ ನಾವು ಇದಕ್ಕಿಂತ ಉತ್ತಮವಾಗಿ ಚೇಸ್ ಮಾಡಬಹುದು. ಆದರೆ ಗೆಲುವು ಯಾವಾಗಲೂ ನಿಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ನಾವು ಮುಂದಿನ ಪಂದ್ಯಕ್ಕಾಗಿ ಆತ್ಮವಿಶ್ವಾಸದಿಂದ ತೆರಳುತ್ತೇವೆ." ಎಂದು ಹೇಳಿದರು.
ಪಾಕಿಸ್ತಾನದ ಬೌಲರ್ಗಳ ದಾಳಿಗೆ ಮಣಿದ ನೆದರ್ಲೆಂಡ್ನ ನಾಯಕ ಸ್ಕಾಟ್ ಎಡ್ವರ್ಡ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಸಮರ್ಥಿಸಿಕೊಂಡರು.
"ಅದು ಸರಿಯಾದ ನಿರ್ಧಾರವಾಗಿತ್ತು. ನಾವು ಎಲ್ಲಾ ಪಂದ್ಯಾವಳಿಗಳಲ್ಲಿ ಮೊದಲು ಬ್ಯಾಟ್ ಮಾಡಿಲ್ಲ, ಈ ದಿನ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಪವರ್ಪ್ಲೇಯಲ್ಲಿ ನಾವು ಉತ್ತಮವಾಗಿ ಆಡಲಿಲ್ಲ, ನಂತರ ಬೌಂಡರಿ ಹೊಡೆಯುವಲ್ಲಿ ಎಡವಿದೆವು" ಎಂದು ಹೇಳಿದರು.
"ಬೌಲರ್ಗಳು ತಮ್ಮ ಪ್ರಯತ್ನ ಮಾಡಿದರು, ಆದರೆ 90 ರನ್ ರಕ್ಷಿಸುವುದು ಯಾವ ತಂಡಕ್ಕೂ ಸುಲಭವಲ್ಲ, ನಾವು ಇನ್ನೂ ರನ್ ಗಳಿಸಿದ್ದರೆ ಅವಕಾಶ ಇರುತ್ತಿತ್ತು" ಎಂದು ಹೇಳಿದರು.
ಕೌಂಟಿ ಕ್ರಿಕೆಟ್ನಲ್ಲಿ ಕೆಲವು ಡಚ್ ಆಟಗಾರರ ವಿರುದ್ಧ ಆಡಿದ ಅನುಭವವು ಸಹಾಯ ಮಾಡಿತು ಎಂದು ಮೂರು ವಿಕೆಟ್ ಸಾಧನೆಗಾಗಿ ಪಂದ್ಯದ ಆಟಗಾರ ಎಂದು ಪ್ರಶಸ್ತಿ ಪಡೆದ ಶಾದಾಬ್ ಖಾನ್ ಹೇಳಿದರು.
"ನಮ್ಮ ಬೌಲರ್ಗಳು ಪವರ್ಪ್ಲೇನಲ್ಲಿ ಒತ್ತಡ ಹೇರಿದ್ದರಿಂದ ಮತ್ತು ನಾನು ಉತ್ತಮ ಬೌಲಿಂಗ್ ಮಾಡುವ ಮೂಲಕ ವಿಕೆಟ್ ಪಡೆಯಲು ಸಾಧ್ಯವಾಯಿತು. ಇದು ತಂಡದ ಆಟವಾಗಿದೆ." ಎಂದು ಹೇಳಿದರು.