
ಬೆನ್ನು ನೋವಿನಿಂದ ಬೂಮ್ರಾ ಅಲಭ್ಯ
ಟೀಮ್ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಜಸ್ಪ್ರೀತ್ ಬೂಮ್ರಾ ಬೆನ್ನು ನೋವಿನ ಕಾರಣದಿಂದಾಗಿ ಈ ಟಿ20 ವಿಶ್ವಕಪ್ಗೆ ಅಲಭ್ಯವಾಗುತ್ತಿದ್ದಾರೆ. ಕಳೆದ ಏಷ್ಯಾ ಕಪ್ನಿಂದ ವಿಶ್ರಾಂತಿ ಪಡೆದುಕೊಂಡಿದ್ದ ಬೂಮ್ರಾ ಬಳಿಕ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರು. ಆದರೆ ಬಳಿಕ ಮತ್ತೆ ಗಾಯಕ್ಕೊಳಗಾದ ಬೂಮ್ರಾ ಅವರನ್ನು ಬಿಸಿಸಿಐನ ವೈದ್ಯಕೀಯ ತಂಡ ಸಂಪೈರ್ಣ ಪರೀಕ್ಷಿಸಿದ್ದು ವಿಶ್ವಕಪ್ಗೆ ಅಲಭ್ಯವಾಗುವುದನ್ನು ಖಚಿತಪಡಿಸಿದ್ದಾರೆ. ಆದರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಜಸ್ಪ್ರೀತ್ ಬೂಮ್ರಾಗೆ ಇನ್ನೂ ಬದಲಿ ಆಟಗಾರನನ್ನು ಘೋಷಣೆ ಮಾಡಿಲ್ಲ.

ಮೊಹಮ್ಮದ್ ಸಿರಾಜ್ ಬದಲಿ ಆಟಗಾರನಾಗಲಿ ಎಂದ ಗವಾಸ್ಕರ್
ಆದರೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದು ಟೀಮ್ ಇಂಡಿಯಾದಲ್ಲಿ ಬೂಮ್ರಾಗೆ ಯಾರು ಸೂಕ್ತ ಬದಲಿ ಆಟಗಾರ ಎಂಬುದನ್ನು ಹೇಳಿದ್ದಾರೆ. ವಿಶ್ವಕಪ್ಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿರುವ ಮೊಹಮ್ಮದ್ ಶಮಿ ಹಾಗೂ ದೀಪಕ್ ಚಹರ್ ಬದಲಿಗೆ ಗವಾಸ್ಕರ್ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಸಿರಾಜ್ ಬೂಮ್ರಾ ಬದಲಿಗೆ ಸೇರ್ಪಡೆಯಾಗಿದ್ದರು.

ಕಾರಣ ನೀಡಿದ ಗವಾಸ್ಕರ್
ಈ ಸಂದರ್ಭದಲ್ಲಿ ಶಮಿ ಬದಲಿಗೆ ಸಿರಾಜ್ ಅವರನ್ನು ತಾನು ಆಯ್ಕೆ ಮಾಡಲು ಕಾರಣ ಏನು ಎಂಬುದನ್ನು ಕೂಡ ಸುನಿಲ್ ಗವಾಸ್ಕರ್ ಹೇಳಿಕೊಂಡಿದ್ದಾರೆ. "ನಾನು ಸಿರಾಜ್ ಅವರನ್ನು ಆಯ್ಕೆ ಮಾಡಲು ಬಯಸುತ್ತೇನೆ. ಯಾಕೆಂದರೆ ಶಮಿ ಇತ್ತೀಚೆಗೆ ಆಡಿಲ್ಲ. ಶಮಿಯವರನ್ನು ಆಯ್ಕೆ ಮಾಡಿದರೆ ಅವರು ನೇರವಾಗಿ ವಿಶ್ವಕಪ್ನಲ್ಲಿಯೇ ಆಡಿದಂತಾಗುತ್ತದೆ. ಈವರೆಗೆ 15ರ ಬಳಗಕ್ಕೆ ಇವರು ಸೇರ್ಪಡೆಯಾಗಿಲ್ಲ. ಅವರು ಹೆಚ್ಚು ಕ್ರಿಕೆಟ್ ಆಡದಿರುವುದೇ ಕಳವಳಕಾರಿ ಅಂಶ" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಆತನ ಸಾಮರ್ಥ್ಯದ ಮೇಲೆ ಅನುಮಾನವಿಲ್ಲ
ಇನ್ನು ಇದೇ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಅವರ ಸಾಮರ್ಥ್ಯದ ಬಗ್ಗೆ ತನಗೆ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ ಸುನಿಲ್ ಗವಾಸ್ಕರ್. "ಆತನ ಸಾಮರ್ಥ್ದ ಮೇಲೆ ನನಗೆ ಯಾವುದೇ ಅನುಮಾನವಿಲ್ಲ. ಅವರು ಇತ್ತೀಚೆಗೆ ಹೆಚ್ಚಿನ ಕ್ರಿಕೆಟ್ ಆಡಿಲ್ಲ ಎಂಬುದು ಕಾರಣವಾಗಿದೆ. ಕೊರೊನಾವೈರಸ್ನ ಬಳಿಕ ಕಮ್ಬ್ಯಾಕ್ ಮಾಡುವುದು ಸುಲಭವಲ್ಲ. ನಿಮ್ಮ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ಇದು ಕೇವಲ 4 ಓವರ್ಗಳ ಆಟವಾಗಿದೆ ಎಂಬುದು ಗೊತ್ತಿದೆ. ಆದರೆ ಸಿರಾಜ್ ಬೌಲಿಂಗ್ ದಾಳಿ ನಡೆಸುತ್ತಿರುವ ರೀತಿಯನ್ನೊಮ್ಮೆ ನೋಡಿ. ಅದ್ಭುತವಾಗಿ ನಡೆಸುತ್ತಿದ್ದಾರೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.


Click it and Unblock the Notifications












