
"ಭಾರತ ಗೆಲುವಿನ ಸರಪಳಿಯನ್ನು ಮುಂದುವರೆಸಲಿದೆ"
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಹಣಾಹಣಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 12-0 ಪಂದ್ಯಗಳಿಂದ ಮುನ್ನಡೆಯನ್ನು ಸಾಧಿಸಿದೆ. ಇದುವರೆಗೂ ಯಾವುದೇ ವಿಶ್ವಕಪ್ ಪಂದ್ಯದಲ್ಲಿಯೂ ಪಾಕಿಸ್ತಾನ ಭಾರತ ತಂಡವನ್ನು ಸೋಲಿಸಿಯೇ ಇಲ್ಲ. ಇದೇ ವಿಷಯದ ಕುರಿತು ಸೌರವ್ ಗಂಗೂಲಿ ಕೂಡ ಮಾತನಾಡಿದ್ದು ಭಾರತ ಈ ಬಾರಿಯ ಪಂದ್ಯವನ್ನು ಕೂಡ ಗೆಲ್ಲುವ ಮೂಲಕ ಪಾಕಿಸ್ತಾನದ ವಿರುದ್ಧದ ಗೆಲುವಿನ ಸರಪಳಿಯನ್ನು 13-0 ಮಾಡಿಕೊಳ್ಳುವ ಮೂಲಕ ಮುಂದುವರೆಸುವ ಸಾಧ್ಯತೆಗಳು ಹೆಚ್ಚಿವೆ ಎಂದಿದ್ದಾರೆ. ಭಾರತ ತಂಡದಲ್ಲಿರುವ ಎಲ್ಲ ಆಟಗಾರರೂ ಸಹ ಉತ್ತಮ ಪ್ರದರ್ಶನ ನೀಡುವ ಆಟಗಾರರಾಗಿದ್ದರು ಈ ಬಾರಿ ಟ್ರೋಫಿ ಗೆಲ್ಲುವ ನಿರೀಕ್ಷೆಯಿದೆ ಎಂದು ಗಂಗೂಲಿ ಹೇಳಿದ್ದಾರೆ.

"ಪಾಕಿಸ್ತಾನದ ಒಂದಿಬ್ಬರು ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಏನು ಬೇಕಾದರೂ ಆಗಬಹುದು"
ಭಾರತ ಮತ್ತು ಪಾಕಿಸ್ತಾನದ ವಿಶ್ವಕಪ್ ಹಣಾಹಣಿಯ ಕುರಿತು ಮಾತನಾಡಿರುವ ಸೌರವ್ ಗಂಗೂಲಿ ಪಾಕಿಸ್ತಾನ ತಂಡ ಕೂಡ ಉತ್ತಮ ಆಟಗಾರರಿಂದ ಕೂಡಿದೆ, ಪಾಕಿಸ್ತಾನದ ಯಾರಾದರೂ ಒಂದಿಬ್ಬರು ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಯಾವ ರೀತಿಯ ಫಲಿತಾಂಶ ಬೇಕಾದರೂ ಹೊರಬೀಳಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒತ್ತಡವನ್ನು ಎದುರಿಸಿ ಮಾನಸಿಕ ಕದನವನ್ನು ಗೆಲ್ಲುವುದು ಇಲ್ಲಿ ಬಹುಮುಖ್ಯವಾಗಲಿದೆ, ಖಂಡಿತವಾಗಿಯೂ ಈ ಪಂದ್ಯ ಒಂದೊಳ್ಳೆ ಹಣಾಹಣಿಯಾಗಲಿದೆ ಎಂಬ ನಂಬಿಕೆಯಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

"ಪ್ರತಿ ಬಾರಿಯೂ ಭಾರತವೇ ಗೆಲ್ಲುತ್ತದೆ ಎಂದೇನಿಲ್ಲ"
"ಪ್ರತಿ ಬಾರಿಯೂ ಭಾರತ ತಂಡವೇ ಗೆಲ್ಲಬೇಕು ಎಂದೇನಿಲ್ಲ. 2007 ಮತ್ತು 2011ರಲ್ಲಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದ ಭಾರತ 2003 ಮತ್ತು 2014ರಲ್ಲಿ ಫೈನಲ್ ಹಂತ ತಲುಪಿ ಸೋಲುಂಡಿತು. ಅಷ್ಟೇ ಅಲ್ಲದೆ 2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ಸೋತಿತ್ತು. ಭಾರತ ಕ್ರಿಕೆಟ್ ತಂಡ ಬಲಿಷ್ಠವಾಗಿದೆ, ಹೀಗಾಗಿಯೇ ಹೆಚ್ಚು ಫೈನಲ್ ಪಂದ್ಯಗಳನ್ನು ಆಡುವ ಅವಕಾಶ ತಂಡಕ್ಕೆ ಲಭಿಸುತ್ತಿದೆ. ಈ ಬಾರಿಯೂ ಕೂಡ ಅದೇ ರೀತಿಯ ಪ್ರದರ್ಶನವನ್ನು ತಂಡ ನೀಡಲಿದೆ ಎಂಬ ನಂಬಿಕೆ ಇದ್ದು ಏನಾಗುತ್ತದೆಯೋ ನೋಡೋಣ" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.


Click it and Unblock the Notifications
