
ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿದೆ. ಆದರೆ ಟೀಮ್ ಇಂಡಿಯಾದ ಗಾಯದ ಸಮಸ್ಯೆಗಳು ಈಗಾಗಲೇ ಕಾಡುತ್ತಿದ್ದು ಪ್ರಮುಖ ಆಟಗಾರರ ಲಭ್ಯತೆಯ ಬಗ್ಗೆ ಪ್ರಶ್ನೆಗಳು ಇವೆ. ಅದರಲ್ಲೂ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಬೆನ್ನುನೋವಿನ ಗಾಯಕ್ಕೆ ತುತ್ತಾಗಿದ್ದು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಹೀಗಾಗಿ ಸುದೀರ್ಘ ಕಾಲದ ವಿಶ್ರಾಂತಿಯ ಅಗತ್ಯ ಬೂಮ್ರಾಗಿದೆ. ಹೀಗಾಗಿ ಜಸ್ಪ್ರೀತ್ ಬೂಮ್ರಾ ವಿಶ್ವಕಪ್ನಲ್ಲಿ ಭಾಗಿಯಾಗುವುದು ದೃಢಪಟ್ಟಿಲ್ಲ.
ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಮಾಜಿ ವೇಗದ ಬೌಲರ್ ದಿಲ್ಹರ ಫೆರ್ನಾಂಡೋ ಮಾತನಾಡಿದ್ದು ರೋಹಿತ್ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಅವರ ಸೇವೆಯ ಅಗತ್ಯ ಬಹಳ ಅಗತ್ಯವಾಗಿ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಸ್ಸಪ್ರೀತ್ ಬೂಮ್ರಾ ಕಳೆದ ವರ್ಷಾಂತ್ಯದಲ್ಲಿ ನಡೆದ ಟಿ20 ವಿಶ್ವಕಪ್ನಿಂದಲೂ ಗಾಯದ ಕಾರಣದಿಂದಾಗಿ ಹೊರಗುಳಿದಿದ್ದರು. ಇತ್ತೀಚೆಗಷ್ಟೇ ನ್ಯೂಜಿಲೆಂಡ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಬೂಮ್ರಾ ಮುಂದಿನ ಐಪಿಎಲ್ ಟೂರ್ನಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಿಂದ ಹೊರಗುಳಿಯುವುದು ಈಗಾಗಲೇ ಖಚಿತವಾಗಿದೆ. ಆದರ ವಿಶ್ವಕಪ್ನಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
"ಬೂಮ್ರಾ ಅದ್ಭುತವಾದ ಬೌಲರ್. ಕಳೆದ ಐದು ವರ್ಷಗಳಲ್ಲಿ ಅವರು ನೀಡಿರುವ ಪ್ರದರ್ಶನ ಅಮೋಘವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಪ್ರದರ್ಶನದಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿರುವುದು. ಅವರು ವೇಗದ ಬೌಲಿಂಗ್ ವಿಭಾಗದಲ್ಲಿ ನಿಜಕ್ಕೂ ಅದ್ಭತವಾಗಿ ಮುನ್ನಡೆಸಿದ್ದಾರೆ. ಆತ ನಿಜಕ್ಕೂ ಗೇಮ್ ಚೇಂಜರ್ ಆಗಿದ್ದು ಅವರ ಗಾಯದ ಬಗ್ಗೆಗಿನ ಇತ್ತೀಚಿನ ಮಾಹಿತಿ ನನಗಿಲ್ಲ. ಆದರೆ ಏಕದಿನ ವಿಶ್ವಕಪ್ನಲ್ಲಿ ಅವರು ಭಾರತ ತಂಡ ಪ್ರಮುಖವಾದ ಆಟಗಾರ" ಎಂದಿದ್ದಾರೆ ಶ್ರೀಲಂಕಾದ ಮಾಜಿ ವೇಗಿ ದಿಲ್ಹರ ಫರ್ನಾಂಡೋ.
"ಜಸ್ಪ್ರೀತ್ ಬೂಮ್ರಾ ಅವರನ್ನು ರೋಹಿತ್ ಶರ್ಮಾ ಖಂಡಿತವಾಗಿಯೂ ಬಯಸುತ್ತಾರೆ. ರೋಹಿತ್ ಶರ್ಮಾ ಜೊತೆಗೆ ಭಾರತ ತಂಡ ಕೂಡ ಅವರ ಸೇವೆಯನ್ನು ಬಯಸುತ್ತದೆ. ಭಾರತದ ಪರಿಸ್ಥಿತಿಯಲ್ಲಿ ಬೂಮ್ರಾ ಪಾತ್ರ ಅತ್ಯಂತ ದೊಡ್ಡ ಪಾತ್ರವಹಿಸಲಿದೆ. ಆತ ಎದುರಾಳಿಗಳಿಗೆ ದುಸ್ವಪ್ನ. ಭಾರತದ ವೇಗದ ಬೌಲಿಂಗ್ ವಿಭಾಗ ಉತ್ತಮವಾಗಿ ಕಾಣಿಸುತ್ತಿದ್ದು ವಿಶ್ವಕಪ್ನಲ್ಲಿ ಪ್ರಮುಖ ಸ್ಪರ್ಧಿ ಭಾರತ" ಎಂದಿದ್ದಾರೆ ಲಂಕಾದ ಮಾಜಿ ಆಟಗಾರ.
ಜಸ್ಪ್ರೀತ್ ಬೂಮ್ರಾ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದು ರೋಹಿತ್ ಶರ್ಮಾ ಅವರೊಂದಿಗೆ ಉತ್ತಮವಾದ ಹೊಂದಾಣಿಕೆಯಿದೆ ಎಂದಿರುವ ಫರ್ನಾಂಡೋ ಬೂಮ್ರಾ ಬೆಳವಣಿಗೆಯಲ್ಲಿ ಐಪಿಎಲ್ನ ಪಾತ್ರ ಬಹಳ ದೊಡ್ಡದಿದೆ ಎಂದಿದ್ದಾರೆ.