ದುಬೈ: ಟೀಮ್ ಇಂಡಿಯಾ ಹಾಗೂ ಯುಎಇ ನಡುವಣ ಏಷ್ಯಾ ಕಪ್ ಟೂರ್ನಿಯ "ಎ" ಗುಂಪಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ಭರ್ಜರಿ ಜಯ ಸಾಧಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ 9 ವಿಕೆಟ್ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಬ್ಲ್ಯೂ ಬಾಯ್ಸ್ ತಂಡದ ಸಂಘಟಿತ ಆಟ ಎಲ್ಲರ ಗಮನ ಸೆಳೆಯಿತು. ಆರಂಭದಲ್ಲಿ ಬೌಲರ್ಗಳು ಸ್ಥಿರ ಪ್ರದರ್ಶನ ನೀಡಿದರೆ, ಬಳಿಕ ಬ್ಯಾಟರ್ಗಳು ಅಬ್ಬರದ ಬ್ಯಾಟಿಂಗ್ ನಡೆಸಿ ತಂಡಕ್ಕೆ ದೊಡ್ಡ ಗೆಲುವಿನ ಮಾಲೆ ತೊಡಿಸಿದರು. ಈ ಮೂಲಕ ಭಾರತ ಪೂರ್ಣ ಎರಡು ಅಂಕವನ್ನು ಕಲೆ ಹಾಕಿ "ಎ" ಗುಂಪಿನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಅವರ ನಿರ್ಧಾರವನ್ನು ಬೌಲರ್ಗಳು ಸಮರ್ಥಿಸಿಕೊಂಡರು. ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ತಂಡದ ಪರ ಮೊದಲ ವಿಕೆಟ್ ಪಡೆದರು. ಇನ್ನು ಚೈನಾ ಮೆನ್ ಬೌಲರ್ ಕುಲ್ದೀಪ್ ಯಾದವ್ ಸಹ ತಮ್ಮ ಪಿರ್ಕಿ ಕಮಾಲ್ ಮಾಡಿದರು. ಅಲ್ಲದೆ ಸ್ಟಾರ್ ಆಲ್ರೌಂಡರ್ ಶಿವಂ ದುಬೆ ಸಹ 3 ವಿಕೆಟ್ ಕಬಳಿಸಿದರು. ಈ ಮೂಲಕ ಭಾರತ, ಯುಎಇ ತಂಡವನ್ನು 57 ರನ್ಗಳ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿತು.

ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಬ್ಯಾಟರ್ಗಳು ಭರ್ಜರಿ ಆರಂಭವನ್ನು ನೀಡಿದರು. ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಸ್ಫೋಟಕ ಆರಂಭವನ್ನು ನಿಡಿತು. ಅಭಿಷೇಕ್ 16 ಎಸೆತಗಳಲ್ಲಿ 30 ರನ್ ಗಳಿಸಿದರು, ಇದರಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿಗಳು ಸೇರಿವೆ. ಗಿಲ್ 9 ಎಸೆತಗಳಲ್ಲಿ ಅಜೇಯ 20 ರನ್ ಸಿಡಿಸಿದರು. ಇನ್ನು ಸೂರ್ಯ 2 ಎಸೆತಗಳಲ್ಲಿ ಅಜೇಯ 7 ರನ್ ಗಳಿಸಿದರು. ಇವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ಕೇವಲ 4.3 ಓವರ್ಗಳಲ್ಲಿ 1 ವಿಕೆಟ್ಗಳಿಂದ 60 ರನ್ ಸಿಡಿಸಿ ಜಯ ಸಾಧಿಸಿತು. ಏಕದಿನ ಹಾಗೂ ಟಿ20 ವಿಶ್ವಕಪ್ ಇತಿಹಾಸದಲ್ಲಿ 5 ಓವರ್ಗಳಿಗಿಂತ ಕಡಿಮೆ ಅವಧಿಯಲ್ಲಿ ಗುರಿಯನ್ನು ಬೆನ್ನಟ್ಟಿದ ಮೊದಲ ಪಂದ್ಯ ಇದಾಗಿದೆ.
ಭಾರತೀಯ ಕ್ರಿಕೆಟ್ ತಂಡವು ಯುಎಇ ವಿರುದ್ಧದ ಪಂದ್ಯವನ್ನು 93 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಬೀಗಿತು. ಬಾಕಿ ಉಳಿದಿರುವ ಚೆಂಡುಗಳ ಲೆಕ್ಕಾಚಾರದಲ್ಲಿ ಭಾರತ ಸಾಧಿಸಿದ ಅತಿ ದೊಡ್ಡ ಗೆಲುವು ಇದಾಗಿದೆ. ಇದಕ್ಕಿಂತ ಮೊದಲು ಭಾರತ ಸ್ಕಾಟ್ಲೆಂಡ್ ವಿರುದ್ಧ 2021ರಲ್ಲಿ 81 ಎಸೆತಗಳು ಬಾಕಿ ಇರುವಾಗ ಗೆದ್ದಿತು.
ಯುಎಇ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಕುಲ್ದೀಪ್ ಯಾದವ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಇವರು ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿ 7 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು.