ವೆಸ್ಟ್ ಇಂಡೀಸ್ ಪ್ರವಾಸ ಮುಗಿದಿದೆ, ಪ್ರವಾಸದ ಮುನ್ನ ವೈಟ್ ವಾಶ್ ಕನಸು ಕಂಡಿದ್ದ ಟೀಮ್ ಇಂಡಿಯಾಕ್ಕೆ ಆತಿಥೇಯ ತಂಡ ಪೆಟ್ಟು ನೀಡಿದೆ. ಟೆಸ್ಟ್ ಹಾಗೂ ಏಕದಿನ ಸರಣಿ ವಶಕ್ಕೆ ಪಡೆದ ಟೀಮ್ ಇಂಡಿಯಾ, ಟಿ20 ಸರಣಿಯನ್ನು ಕೈ ಚೆಲ್ಲಿದೆ. ವಿದೇಶಿ ನೆಲದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಆದರೆ ಟೀಮ್ ಇಂಡಿಯಾ ಪಾಲಿಗೆ ಖುಷಿಯ ಸುದ್ದಿ ಈ ಪ್ರವಾಸದಿಂದ ಹೊರ ಬಂದಿದೆ.
ಟೀಮ್ ಇಂಡಿಯಾಕ್ಕೆ ಮೂವರು ಸ್ಟಾರ್ ಆಟಗಾರರು ಸಿಕ್ಕಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20 ಫಾರ್ಮೆಟ್ಗಳಲ್ಲಿ ಟೀಮ್ ಇಂಡಿಯಾಕ್ಕೆ ಒಬ್ಬೊಬ್ಬ ಸೂಪರ್ ಸ್ಟಾರ್ ಲಭಿಸಿದ್ದಾರೆ. ಆ ಮೂಲಕ ಟೀಮ್ ಇಂಡಿಯಾ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಟೀಮ್ ಇಂಡಿಯಾಗೆ ಏಕದಿನ ಸರಣಿಯಲ್ಲಿ ಸಿಕ್ಕ ಸ್ಟಾರ್ ಆಟಗಾರನೇ ಇಶಾನ್ ಕಿಶನ್..

ಐಪಿಎಲ್ನಲ್ಲಿ ಮೈಚಳಿ ಬಿಟ್ಟು ಬ್ಯಾಟಿಂಗ್ ಮಾಡಿ ಎಲ್ಲರ ಮನ ಗೆದ್ದಿದ್ದ ಇಶಾನ್, ಬ್ಲ್ಯೂ ಜರ್ಸಿಯಲ್ಲೂ ತಾನು ಬೆಸ್ಟ್ ಎಂದು ಸಾಬೀತು ಪಡಿಸಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈ ಗಳಿಂದ ಬಳಸಿಕೊಂಡಿರುವ ಇಶಾನ್, ರಿಷಭ್ ಪಂತ್ ಅವರ ಸ್ಥಾನವನ್ನು ತುಂಬಲು ನಾನು ರೆಡಿ ಎಂದು ತಿಳಿಸಿದ್ದಾರೆ. ರಿಷಭ್ ಎಡಗೈ ಆಕ್ರಮಣಕಾರಿ ಆಟಗಾರ.
ಪಂತ್ ರಂತೆ ಆಡುವ ಶೈಲಿಯನ್ನು ಮೈಗೂಡಿಸಿಕೊಂಡಿರುವ ಇಶಾನ್ ಏಕದಿನ ಕ್ರಿಕೆಟ್ನಲ್ಲಿ ಅಬ್ಬರಿಸಿದ್ದಾರೆ. ಇಶಾನ್ ಕಿಶನ್ ಮೂರು ಏಕದಿನ ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದು, 61.33ರ ಸರಾಸರಿಯಲ್ಲಿ 184 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಮೂರು ಅರ್ಧಶತಕ ಸಿಡಿಸಿದ್ದಾರೆ. ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಇವರಿಗೆ ಮೊದಲ ಸ್ಥಾನ.
ಇವರ ಬಳಿಕ ಎರಡನೇ ಸ್ಥಾನದಲ್ಲಿ ಶುಭಮನ್ ಗಿಲ್ (126 ರನ್) ಹಾಗೂ ಶಾಯ್ ಹೋಪ್ (111 ರನ್) ಕಾಣಿಸಿಕೊಳ್ಳುತ್ತಾರೆ. ಇಶಾನ್ ಕಿಶನ್ಗೆ ವಿಂಡೀಸ್ ಪ್ರವಾಸದಲ್ಲಿ ನೀಡಿದ ಪ್ರದರ್ಶನ ವಿಶ್ವಕಪ್ ಟಿಕೆಟ್ ನೀಡಿದರೂ ಅಚ್ಚರಿ ಇಲ್ಲ. ಟಿ20 ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಸಿಕ್ಕ ಸೂಪರ್ ಆಟಗಾರ ತಿಲಕ್ ವರ್ಮಾ. ಎಡಗೈ ಆಟಗಾರ ತಿಲಕ್ ಅಮೋಘ ಬ್ಯಾಟಿಂಗ್ ಕ್ಷಮತೆಯನ್ನು ಹೊಂದಿದ್ದಾರೆ.
ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವುದು ಇವರಿಗೆ ಸಲೀಸು. ಇದರ ಪರಿಣಾಮವೇ ಚುಟುಕು ಸರಣಿಯಲ್ಲಿ ತಿಲಕ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಭಾರತದ ಪರ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ತಿಲಕ್ ಆಡಿದ ಐದು ಇನಿಂಗ್ಸ್ಗಳಲ್ಲಿ 57.66ರ ಸರಾಸರಿಯಲ್ಲಿ 173 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಸೇರಿದೆ.
ಟೆಸ್ಟ್ ಕ್ರಿಕೆಟ್ನಲ್ಲೂ ಟೀಮ್ ಇಂಡಿಯಾಕ್ಕೆ ಸೂಪರ್ ಆಟಗಾರ ಸಿಕ್ಕಿದ್ದಾನೆ. ಆತನೇ ಯಶಸ್ವಿ ಜೈಸ್ವಾಲ್.. ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುತ್ತಿದ್ದಂತೆ ಬಿರುಸಿನ ಆಟ ಆಡಿ ಎಲ್ಲರ ಗಮನ ಸೆಳೆದರು. ಆಡಿದ ಮೂರು ಇನಿಂಗ್ಸ್ಗಳಲ್ಲಿ 88.66ರ ಸರಾಸರಿಯಲ್ಲಿ 266 ರನ್ ಸಿಡಿಸಿದ್ದಾರೆ.
ಇವರ ಬ್ಯಾಟಿಂಗ್ ಧಾಟಿಯನ್ನು ನೋಡಿದ ಮೇಲೆ ಸದ್ಯಕಂತೂ ಇವರನ್ನು ಟೆಸ್ಟ್ ತಂಡದಿಂದ ದೂರ ಇಡುವ ಪ್ರಶ್ನೆ ಇಲ್ಲ ಎಂಬಂತೆ ಕಾಣುತ್ತದೆ. ವಿಂಡೀಸ್ ಪ್ರವಾಸದಲ್ಲಿ ಯುವ ಆಟಗಾರರು ನೀಡಿದ ಪ್ರದರ್ಶನ ನಿಜಕ್ಕೂ ಮ್ಯಾನೇಜ್ಮೆಂಟ್ ಚಿಂತೆಯನ್ನು ಕೊಂಚ ನಿವಾರಿಸುತ್ತದೆ.