
ಸಿಡ್ನಿ: ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ವೈಯಕ್ತಿಕ ರನ್ ವಿಶ್ವದಾಖಲೆ ಹೊಂದಿರುವ ಭಾರತದ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಮತ್ತು ಟಿ20ಐ ಸರಣಿಯಲ್ಲಿ ಆಡುತ್ತಿಲ್ಲ. ಗಾಯ ಮತ್ತು ಫಿಟ್ನೆಸ್ ಕಾರಣ ನೀಡಿ ಭಾರತ ತಂಡ ನಿರ್ವಹಣಾ ಸಮಿತಿ ರೋಹಿತ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ನಿಯಮಿತ ಓವರ್ಗಳ ಸರಣಿಗೆ ಸೇರಿಸಿಕೊಂಡಿಲ್ಲ.
ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಬಲ ಟೀಮ್ ಇಂಡಿಯಾಕ್ಕೆ ಇಲ್ಲದ್ದು ಸದ್ಯ ಎದ್ದು ಕಾಣುತ್ತಿದೆ. ಯಾಕೆಂದರೆ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಎರಡೂ ಪಂದ್ಯಗಳನ್ನು ಭಾರತ ಹೀನಾಯವಾಗಿ ಸೋತಿದೆ. ಟೀಮ್ ಇಂಡಿಯಾ ಜೊತೆಗೆ ಇಂಥ ಹೊತ್ತಿನಲ್ಲಿ ರೋಹಿತ್ ಬಲ ಇರಬೇಕಿತ್ತು ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ.
ಭಾರತದ ಮಾಜಿ ಬೌಲರ್, ಕನ್ನಡಿಗ ದೊಡ್ಡ ಗಣೇಶ್ ಕೂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವೇಳೆ ರೋಹಿತ್ ಶರ್ಮಾ ಇರಬೇಕಿತ್ತು ಎಂದಿದ್ದಾರೆ. ಟೀಮ್ ಇಂಡಿಯಾ ರೋಹಿತ್ ಅವರನ್ನು ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತಿದೆ ಎಂದು ಗಣೇಶ್ ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ದೊಡ್ಡ ಗಣೇಶ್, 'ಆಯ್ಕೆ ಸಮಿತಿ ತಂಡ ಆರಿಸುವಾಗ ಏಕದಿನ ಸಾಧನೆ ಗಮನಿಸಿ ಆರಿಸಬೇಕಿತ್ತೇ ಹೊರತು, ಟಿ20ಯನ್ನಲ್ಲ. ಟೀಮ್ ಇಂಡಿಯಾ ರೋಹಿತ್ ಶರ್ಮಾ ಅವರನ್ನು ನಿಜಕ್ಕೂ ತುಂಬಾ ಕೆಟ್ಟದಾಗಿ ಮಿಸ್ ಮಾಡಿಕೊಳ್ಳುತ್ತಿದೆ. ರೋಹಿತ್ ಶ್ರೇಷ್ಠ ಕ್ರಿಕೆಟಿಗ, ಗೇಮ್ ಚೇಂಜರ್ ಮತ್ತು ಅತ್ಯುತ್ತಮ ಓಪನರ್,' ಎಂದಿದ್ದಾರೆ.