ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ನಂತರ ಒಂದು ತಿಂಗಳ ವಿರಾಮದ ಅವಧಿ ಹೊಂದಿದ್ದ ಟೀಮ್ ಇಂಡಿಯಾ ನಂತರ ಸತತ ಕ್ರಿಕೆಟ್ ಸರಣಿಗಳನ್ನು ಹೊಂದಿದೆ. ಪ್ರಸ್ತುತ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು ಮೂರು ಮಾದರಿಯಲ್ಲಿಯೂ ವಿಂಡೀಸ್ ವಿರುದ್ಧ ಸರಣಿಯನ್ನಾಡಲಿದೆ. ಮೊದಲಿಗೆ ಎರಡು ಪಂದ್ಯಗಳ ಟೆಸ್ಟ್ ನಂತರ ಮೂರು ಪಂದ್ಯಗಳ ಏಕದಿನ ಹಾಗೂ ಐದ ಪಂದ್ಯಗಳ ಟಿ20 ಸರಣಿಯಲ್ಲಿ ವಿಂಡೀಸ್ ತಂಡವನ್ನು ಎದುರಿಸಲಿದೆ. ರೋಹಿತ್ ಶರ್ಮಾ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದರೆ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
2022ರ ಟಿ20 ವಿಶ್ವಕಪ್ನ ಬಳಿಕ ಟೀಮ್ ಇಂಡಿಯಾದ ಟಿ20 ಬಳಗವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದು ರೋಹಿತ್ ಶರ್ಮಾಗೆ ಟಿ20 ಮಾದರಿಯಿಂದ ವಿಶ್ರಾಂತಿ ನೀಡಲಾಗುತ್ತಿದೆ. ಹಾಗಿದ್ದರೂ ಮುಂಬರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಮತ್ತೆ ಹೊಸ ನಾಯಕನ ಅಡಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಪಿಟಿಐ ವರದಿಯ ಪ್ರಕಾರ ಮುಂಬರುವ ಐರ್ಲೆಂಡ್ ಪ್ರವಾಸಕ್ಕೆ ಹಾರ್ದಿಕ್ ಪಾಂಡ್ಯ ಹಾಗೂ ಶುಬ್ಮನ್ ಗಿಲ್ಗೆ ವಿಶ್ರಾಂತಿ ನೀಡುವ ಸಾಧ್ಯತಯಿದೆ. ಮುಂಬರುವ ತಿಂಗಳುಗಳಲ್ಲಿ ಸತತವಾದ ಕ್ರಿಕೆಟ್ ಇರುವ ಕಾರಣದಿಂದಾಗಿ ವರ್ಕ್ಲೋಡ್ ಮ್ಯಾನೇಜ್ಮೆಂಟ್ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಿಸಿಸಿಐ ಬಂದಿದೆ ಎನ್ನಲಾಗಿದೆ. ಆದರೆ ಇದು ಇನ್ನು ಕೂಡ ಅಂತಿಮವಾಗಿಲ್ಲ ಎನ್ನಲಾಗಿದ್ದು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯ ಬಳಿಕ ಹಾರ್ದಿಕ್ ಪಾಂಡ್ಯ ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಇನ್ನು ಕೆಎಲ್ ರಾಹುಲ್ ಇತ್ತೀಚಿನ ದಿನಗಳಲ್ಲಿ ವೈಫಲ್ಯ ಕಾಣುತ್ತಿರುವ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯಗೆ ಏಕದಿನ ತಂಡದ ಉಪನಾಯಕನ ಹೊಣೆಗಾರಿಕೆಯನ್ನು ಕೂಡ ನೀಡಲಾಗಿದೆ. 2023ರ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯ ನಂತರ ರೋಹಿತ್ ಶರ್ಮಾ ಅವರಿಗೆ ಉಪನಾಯಕನಾಗಿ ಸಾಥ್ ನೀಡುತ್ತಿದ್ದಾರೆ. ವಿಶ್ವಕಪ್ನಲ್ಲಿಯೂ ಇದೇ ಜವಾಬ್ಧಾರಿಯನ್ನು ಹಾರ್ದಿಕ್ ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.
ಇನ್ನು ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಆಗಸ್ಟ್ 18ರಿಂದ ಆಗಸ್ಟ್ 23ರ ವರೆಗೆ ಈ ಸರಣಿ ನಡೆಯಲಿದೆ. ಅದಾದ ಬಳಿಕ ಆಗಸ್ಟ್ 30ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದೆ. ಹೀಗಾಗಿ ಪ್ರಮುಖ ಆಟಗಾರರಿಗೆ ಈ ಐರಿಶ್ ಸರಣಿಯಿಂದ ವಿಶ್ರಾಂತಿ ನೀಡಿದರೆ ಅಚ್ಚರಿಯಿಲ್ಲ.
ಇನ್ನು ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲು ನಿರ್ಧರಿಸಿದರೆ ಅದರರ್ಥ ಟೀಮ್ ಇಂಡಿಯಾ ಈ ಸರಣಿಯನ್ನು ಹೊಸ ನಾಯಕತ್ವದಲ್ಲಿ ಆಡಲಿದೆ. ಹಾರ್ದಿಕ್ ಪಾಂಡ್ಯ ಹೊರತಾಗಿ ಮತ್ತೋರ್ವನಿಗೆ ತಂಡವನ್ನು ಮುನ್ನಡೆಸುವ ಅವಕಾಶ ದೊರೆಯಲಿದೆ. ಈ ಮಧ್ಯೆ ಕೆಎಲ್ ರಾಹುಲ್ ಐರ್ಲೆಂಡ್ ಹಾಗೂ ಏಷ್ಯಾ ಕಪ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದ್ದು ಬೂಮ್ರಾ ಕೂಡ ಆಡುವುದು ಕೂಡ ಖಚಿತವಿಲ್ಲ.
ಏಷ್ಯಾ ಕಪ್ ಹಾಗೂ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಈ ಸರಣಿಗೆ ರೊಹಿತ್ ಶರ್ಮಾ ಅವರನ್ನು ಆಡಿಸುವ ನಿರ್ಧಾರ ತೆಗೆದುಕೊಳ್ಳುವುದು ಅಸಂಭವ. ಹೀಗಾಗಿ ಯಾವ ಯುವ ಆಟಗಾರ ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.