ಟೀಮ್ ಇಂಡಿಯಾ ಟಿ20 ತಂಡದಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆ ಇದೆ. ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಭವಿಷ್ಯದ ದೃಷ್ಟಿಯಿಂದ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. 2028ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ಸ್ಗಾಗಿ ಬಿಸಿಸಿಐ ಈಗಾಗಲೇ ಬ್ಲ್ಯೂ ಪ್ರಿಂಟ್ ಸಿದ್ಧಪಡಿಸಿದಂತೆ ಕಾಣುತ್ತಿದೆ. ಟೀಮ್ ಇಂಡಿಯಾಕ್ಕೆ ಟಿ20 ವಿಶ್ವಕಪ್ ತೊಡಿಸಿದ ನಾಯಕ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವಕ್ಕೆ ಅಪಾಯ ಕಾದಿದೆ. ಈಗಾಗಲೇ ಬಿಸಿಸಿಐ ಸೂರ್ಯ ಅವರ ಸ್ಥಾನಕ್ಕೆ ಬೇರೆ ಆಟಗಾರರನ್ನು ಹುಡುಕಿದೆ.
ಟೀಮ್ ಇಂಡಿಯಾ ತವರಿನಲ್ಲಿ ಟಿ20 ವಿಶ್ವಕಪ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ತಂಡವನ್ನು ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್ ನಾಯಕರಾಗಿ ಸ್ಥಿರ ಪ್ರದರ್ಶನ ನೀಡಿದ್ದರು. ಆದರೆ ಬ್ಯಾಟರ್ ಆಗಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರನ್ನು ಬದಲಿಸುವ ಯೋಚನೆಯನ್ನು ಬಿಸಿಸಿಐ ಹೊಂದಿದೆ. ಇವರ ಬದಲಿಗೆ ಮುಂಬೈನವರೇ ಆದ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

ಸೂರ್ಯಕುಮಾರ್ ಯಾದವ್ ನಂತರ ಶ್ರೇಯಸ್ ಅಯ್ಯರ್ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಯ್ಯರ್ ಕೊನೆಯ ಬಾರಿಗೆ 2023 ರಲ್ಲಿ ಟಿ20 ಪಂದ್ಯವನ್ನು ಆಡಿದ್ದರು. ಅಲ್ಲಿಂದ ಈ ವರೆಗೆ ಅವರು ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ. ಅವರಿಗೆ ಬುಲಾವ್ ನೀಡಿ ತಂಡದ ಮಹತ್ವದ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟ ಪಡಿಸಿವೆ.

ಶ್ರೇಯಸ್ ಅಯ್ಯರ್ ಅವರಿಗೆ ಅಪಾರ ನಾಯಕತ್ವದ ಅನುಭವ ಇದೆ. ಇವರು 2018ರಿಂದ ಐಪಿಎಲ್ನಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ ತಂಡವನ್ನು 2020ರಲ್ಲಿ ಫೈನಲ್ಗೆ ಕೊಂಡೊಯ್ದ ಕೀರ್ತಿ ಸಹ ಇವರಿಗೆ ಸಲ್ಲುತ್ತದೆ. ಆ ಬಳಿಕ ಇವರು ಕೆಕೆಆರ್ ತಂಡದ ಭಾಗವಾದರು. ಕೆಕೆಆರ್ 2024ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈಗ ಇವರು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಪಂಜಾಬ್ 2014 ರಿಂದ ಎಂದಿಗೂ ಐಪಿಎಲ್ನ ಫೈನಲ್ ತಲುಪಿರಲಿಲ್ಲ. ಶ್ರೇಯಸ್ ಅಯ್ಯರ್, ತಮ್ಮ ಅತ್ಯುತ್ತಮ ನಾಯಕತ್ವ ಕೌಶಲ್ಯದಿಂದ, 11 ವರ್ಷಗಳ ನಂತರ ಅವರನ್ನು ಪಂಜಾಬ್ ತಂಡವನ್ನು ಫೈನಲ್ಗೆ ಕರೆದೊಯ್ದರು. ಈ ಬಾರಿಯ ಲೀಗ್ನಲ್ಲೂ ಶ್ರೇಯಸ್ ನಾಯಕರಾಗಿ ಭರ್ಜರಿ ಪ್ರದರ್ಶನ ನೀಡಿದ್ದು, ಇವರ ಮುಂದಾಳತ್ವದ ತಂಡ ಪ್ರಸಕ್ತ ಐಪಿಎಲ್ನಲ್ಲಿ ಅಜೇಯವಾಗಿದೆ. ಪಂಜಾಬ್ ಕಿಂಗ್ಸ್ ಈ ಲೀಗ್ನಲ್ಲಿ ಆಡಿದ 6 ಪಂದ್ಯಗಳಲ್ಲಿ 5 ಜಯ, 1 ಸೋಲು ಕಂಡಿದ್ದು, 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಹೊಂದಿದೆ. ಶ್ರೇಯಸ್ ಅಯ್ಯರ್ ಸಹ ಆಡಿದ 6 ಪಂದ್ಯಗಳಲ್ಲಿ 52ರ ಸರಾಸರಿಯಲ್ಲಿ 208 ರನ್ ಕಲೆ ಹಾಕಿದ್ದಾರೆ. ಈ ವೇಳೆ ಮೂರು ಅರ್ಧಶತಕಗಳ ಸೇರಿವೆ.