ಸೆಪ್ಟಂಬರ್ 9 ರಂದು ಯುಎಇನಲ್ಲಿ ಏಷ್ಯಾಕಪ್ ಟಿ20 ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಈ ಟೂರ್ನಿ ಭಾರತದ ಆತಿಥ್ಯದಲ್ಲಿ ನಡೆಯಲಿದ್ದು, ತಟಸ್ಥ ಸ್ಥಳದಲ್ಲಿ ಟುರ್ನಿಯನ್ನು ನಡೆಸಲಾಗುತ್ತಿದೆ. ಒಟ್ಟು 8 ದೇಶಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಎರಡು ಗುಂಪುಗಳಲ್ಲಿ ಪ್ರತ್ಯೇಕವಾಗಿ ವಿಂಗಡಿಸಲಾಗಿದೆ. ಭಾರತ ಹಾಗೂ ಪಾಕ್ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಹೀಗಾಗಿ ಟೀಮ್ ಇಂಡಿಯಾ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಈ ಬಾರಿ ಏಷ್ಯಾಕಪ್ ಗೆಲ್ಲುವ ಫೆವರೀಟ್ ತಂಡ ಎಂದು ಟೀಮ್ ಇಂಡಿಯಾವನ್ನು ಗುರುತಿಸಲಾಗುತ್ತಿದೆ. ಹಾಗಿದ್ದರೆ ಟೀಮ್ ಇಂಡಿಯಾ ಕಪ್ ಗೆಲ್ಲಲು ಕಾರಣವಾಗಬಹುದಾದ ಮೂರು ಅಂಶಗಳ ಬಗ್ಗೆ ವರದಿ ಇಲ್ಲಿದೆ.
2024ರ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಸ್ಥಾನದಿಂದ ಕೆಳಗಿಳಿದ್ರೆ, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಚುಟುಕು ಫಾರ್ಮೆಟ್ಗೆ ವಿದಾಯ ಹೇಳಿದ್ರು. ನೂತನ ಕೋಚ್ ಆಗಿ ಗಂಭೀರ್ ಮುಂದಿನ ವಿಶ್ವಕಪ್ಗೆ ಭರದ ತಯಾರಿ ನಡೆಸಿದರು. ರೋಹಿತ್ ಶರ್ಮಾ ಅವರಿಂದ ತೆರವಾದ ಟಿ20 ತಂಡದ ನಾಯಕತ್ವವನ್ನು, ಸೂರ್ಯಕುಮಾರ್ ಯಾದವ್ಗೆ ನೀಡಲಾಯಿತು. ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಸತತವಾಗಿ 5 ಟಿ20 ಸರಣಿಗಳನ್ನು ಗೆದ್ದಿದೆ. 2024ರ ಜಿಂಬಾಬ್ವೆ ಪ್ರವಾಸದಿಂದ ಹಿಡಿದು ಈ ವರೆಗೆ ಕೇವಲ ಮೂರು ಟಿ20 ಪಂದ್ಯಗಳನ್ನು ಮಾತ್ರ ಸೋತಿದೆ. ಇದೇ ಲಯ ಟೀಮ್ ಇಂಡಿಯಾ ಚಾಂಪಿಯನ್ ಆಗಲು ನೆರವಾಗಬಹುದಾಗಿದೆ.

ಟಿ20 ಶ್ರೇಯಾಂಕದಲ್ಲಿ ಭಾರತ ಸದ್ಯ ನಂಬರ್ 1 ಸ್ಥಾನದಲ್ಲಿದೆ. ಕಳೆದ ವರ್ಷ ವಿಶ್ವ ಕಪ್ ಟಿ20 ಗೆದ್ದಿರುವ ಭಾರತ, ಏಷ್ಯಾ ಕಪ್ ಮಾಜಿ ಚಾಂಪಿಯನ್ ಆಗಿದೆ. ಟೀಮ್ ಇಂಡಿಯಾದಲ್ಲಿ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಏಷ್ಯಾ ಕಪ್ನ ನಂಬರ್ 1 ಬೌಲರ್. ಇನ್ನು ಬ್ಯಾಟಿಂಗ್ನಲ್ಲಿ ಅಭಿಷೇಕ್ ಶರ್ಮಾ ವಿಶ್ವದ ನಂಬರ್ ಟಿ20 ಬ್ಯಾಟರ್. ಇನ್ನು ಹಾರ್ದಿಕ್ ಪಾಂಡ್ಯ ನಂಬರ್ ಆಲ್ರೌಂಡರ್ ಆಗಿದ್ದಾರೆ. ಇನ್ನು ತಂಡದಲ್ಲಿ ಇಷ್ಟೆಲ್ಲಾ ಟಿ20 ಸ್ಪೆಷಲಿಸ್ಟ್ಗಳು ಇದ್ದಾಗ ಕಪ್ ಗೆಲ್ಲುವ ಆಸೆ ಚಿಗುರುತ್ತದೆ.
ಟೀಮ್ ಇಂಡಿಯಾದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ಅವರಂತಹ ಸ್ಟಾರ್ ಆಟಗಾರರು ಇಲ್ಲದೇ ಇದ್ದರೂ ಸಹ ತಂಡ ಬಲಿಷ್ಠವಾಗಿದೆ. ಆಯ್ಕೆ ಸಮಿತಿ ಪ್ರಕಟಿಸಿರುವ ತಂಡದಲ್ಲೇ ಶ್ರೇಷ್ಠ ಪ್ಲೇಯಿಂಗ್ ಇಲೆವೆನ್ ಕಣಕ್ಕೆ ಇಳಿಸಬಹುದಾಗಿದೆ. ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕೆ ಇಳಿದ್ರೆ, ತಿಲಕ್ ವರ್ಮಾ, ಸೂರ್ಯ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬವ ಆಟಗಾರರು. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೇ ಆಲ್ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ವೇಗದ ಬೌಲಿಂಗ್ನಲ್ಲಿ ಕಾಣಿಸಿಕೊಂಡರೆ, ನುರಿತ ಸ್ಪಿನ್ ಬೌಲರ್ಗಳಾಗಿ ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ಇದ್ದಾರೆ.