ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದು ಕೊಂಡಿದೆ. ರೋಚಕವಾಗಿ ನಡೆದ ಕಾದಾಟದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಮೂಲಕ ಸರಣಿ ತನ್ನದಾಗಿಸಿಕೊಂಡಿದೆ. ಕಟಕ್ನಲ್ಲಿ ನಡೆದ ಅಂತಿಮ ಪಂದ್ಯ ಸರಣಿ ಗೆಲ್ಲಲು ಎರಡೂ ತಂಡಗಳಿಗೂ ಮುಖ್ಯವಾಗಿತ್ತು. ಅಂತಿಮವಾಗಿ ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿದೆ.
ನಾಯಕ ವಿರಾಟ್ ಕೊಹ್ಲಿ ಭರ್ಜರಿ ಆಟ ಟೀಮ್ ಇಂಡಿಯಾದ ಗೆಲುವಿಗೆ ಕಾರಣವಾಯಿತು. ವಿರಾಟ್ ಕೊಹ್ಲಿ 85 ರನ್ ಬಾರಿಸಿ ಅಂತಿಮ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶಾರ್ದೂಲ್ ಠಾಕೂರ್ ರವೀಂದ್ರ ಜಡೇಜಾ ಜೊತೆ ಸೇರಿಕೊಂಡು ಗೆಲುವಿನ ದಡ ಮುಟ್ಟಿಸಿದರು.
ಅಂತಿಮ ಏಕದಿನ ಪಂದ್ಯ; 22 ವರ್ಷಗಳ ದಾಖಲೆ ಮುರಿದ ರೋಹಿತ್ ಶರ್ಮಾ
ಟೀಮ್ ಇಂಡಿಯಾದ ಆರಂಭ ಉತ್ತಮವಾಗಿತ್ತು. ರೋಹಿತ್ ಶರ್ಮಾ(63) ರಾಹುಲ್(77) ಜೋಡಿ ಮೊದಲ ವಿಕೆಟ್ಗೆ ಶತಕದ ಜೊತೆಯಾಟವನ್ನು ನೀಡಿತ್ತು. ಆದರೆ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಗಿ ತಂಡ ಸೋಲುವ ಭೀತಿಗೆ ಒಳಗಾಯಿತು. ಶ್ರೇಯಸ್ ಅಯ್ಯರ್(7), ರಿಷಬ್ ಪಂತ್(7), ಹಾಗೂ ಕೇಧಾರ್ ಜಾಧವ್(9) ಎರಡಂಕಿ ತಲುಪಲೂ ವಿಫಲರಾದರು. ಆದರೆ ಈ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ರವೀಂದ್ರ ಜಡೇಜಾ(39) ಬೆಂಬಲವಾಗಿ ನಿಂತರು.
ಗೆಲುವಿನ ಸಮೀಪಕ್ಕೆ ಬರುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಕೀಮೋ ಪೌಲ್ ಎಸೆತಕ್ಕೆ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಭರವಸೆಯನ್ನು ಒಂದು ಕ್ಷಣ ಅಭಿಮಾನಿಗಳು ಕಳೆದುಕೊಂಡರು. ಆದರೆ ಬಳಿಕ ಬಂದ ಶಾರ್ದೂಲ್ ಠಾಕೂರ್ ಮೊದಲ ಎಸೆತವನ್ನೇ ಬೌಂಡರಿಗಟ್ಟಿ ರೋಚಕತೆಯನ್ನು ಹೆಚ್ಚಿಸಿದರು. ಕೇವಲ 6 ಎಸೆತಗಳನ್ನು ಎದುರಿಸಿದ ಶಾರ್ದೂಲ್ 17 ರನ್ ಬಾರಿಸಿ ಗೆಲುವನ್ನು ವೆಸ್ಟ್ ಇಂಡೀಸ್ನಿಂದ ಕಸಿದುಕೊಂಡರು.
ನಾಯಕನ ಆಟವಾಗಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ನಾಯಕ ವಿರಾಟ್ ಕೊಹ್ಲಿ ಅರ್ಹವಾಗಿ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸರಣಿಯಲ್ಲಿ ಒಂದು ಭರ್ಜರಿ ಶತಕದೊಂದಿಗೆ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರೋಹಿತ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ದಶಕದ ಟಾಪ್-5 ಬ್ಯಾಟ್ಸ್ಮನ್ಗಳು ಯಾರು!
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಭಾರತಕ್ಕೆ ಭಾರೀ ಮೊತ್ತದ ಗುರಿಯನ್ನು ನೀಡಿತು. ನಿಗದಿತ 50 ಓವರ್ಗಳಲ್ಲಿ ವಿಂಡೀಸ್ ಆಟಗಾರರು 5 ವಿಕೆಟ್ ಕಳೆದುಕೊಂಡು 315 ರನ್ ಬಾರಿಸಿದರು. ವಿಂಡೀಸ್ ಪರವಾಗಿ ನಿಕೋಲಸ್ ಪೂರನ್ ಹಾಗೂ ನಾಯಕ ಕಿರಾನ್ ಪೊಲಾರ್ಡ್ ಅದ್ಭುತ ಆಟವನ್ನು ಪ್ರದರ್ಶಿಸಿದರು.
ಇಬ್ಬರೂ ಆಟಗಾರು ತಲಾ ಅರ್ಧ ಶತಕ ಬಾರಿಸಿ ಮಿಂಚಿದರು. ಪೂರನ್ 64 ಎಸೆತಗಳನ್ನು ಎದುರಿಸಿ 89 ರನ್ ಬಾರಿಸಿದರು. ಮೂರು ಸಿಕ್ಸರ್ ಹಾಗೂ 10 ಬೌಂಡರಿ ಪೂರನ್ ಇನ್ನಿಂಗ್ಸ್ನಲ್ಲಿತ್ತು. ನಾಯಕ ಪೊಲಾರ್ಡ್ 51 ಎಸೆತಗಳನ್ನು ಎದುರಿಸಿ 74 ರನ್ ಚಚ್ಚಿದರು. ಬರೊಬ್ಬರಿ 7 ಸಿಕ್ಸ್ ಹಾಗೂ 3 ಬೌಂಡರಿ ಬಾರಿಸಿದರು ಪೊಲಾರ್ಡ್. ನಿಧಾನಗತಿಯಲ್ಲಿದ್ದ ಸ್ಕೋರನ್ನು ಅಂತಿಮ ಹತ್ತು ಓವರ್ನಲ್ಲಿ ಪೊಲಾರ್ಡ್ ಮತ್ತು ಪೂರನ್ ಸೇರಿಕೊಂಡು ತಂಡದ ಸ್ಥಿತಿಯನ್ನೇ ಬದಲಾಯಿಸಿ ಬಿಡುವಲ್ಲಿ ಯಶಸ್ವಿಯಾದರು. ಆದರೆ ಟೀಮ್ ಇಂಡಿಯಾದ ಪ್ರದರ್ಶನದ ಮುಂದೆ ಕೆರೇಬಿಯನ್ನರು ತಲೆ ಬಾಗಲೇ ಬೇಕಾಯಿತು.