ನವದೆಹಲಿ, ಆಗಸ್ಟ್ 8: ಎಜ್ ಬಾಸ್ಟನ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ ಕೊಹ್ಲಿಯ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತ 31 ರನ್ ಗಳಿಂದ ಸೋತಿತ್ತು. ಪಂದ್ಯದ ಸೋಲಿನಿಂದ ಹೊರಬರಲು, ಗೆಲುವಿನೆಡೆಗೆ ಮಾನಸಿಕವಾಗಿ ತಯಾರಾಗಲು ಸಚಿನ್ ತೆಂಡೂಲ್ಕರ್, ಕೊಹ್ಲಿಗೆ ಅಪೂರ್ವ ಸಲಹೆ ನೀಡಿದ್ದಾರೆ.
ಎಡ್ಜ್ಬಾಸ್ಟನ್ ಪಂದ್ಯದ ಸೋಲಿಗೆ ಕೊಹ್ಲಿ ಹೊಣೆ: ನಾಸಿರ್ ಹುಸೇನ್
ಇಂಗ್ಲೆಂಡ್ ಎದುರು ಮೊದಲ ಐತಿಹಾಸಿಕ ಟೆಸ್ಟ್ ನಲ್ಲಿ ಭಾರತ ಸೋತಿದ್ದಕ್ಕೆ ಕೆಲ ಕ್ರಿಕೆಟ್ ಪರಿಣಿತರು ಭಾರತ ತಂಡದೊಂದಿಗೆ ಕೊಹ್ಲಿಯನ್ನೂ ಟೀಕಿಸಿದ್ದರು. ಆದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ನಾಯಕನಾಗಿ ನೀನು ಅತ್ಯುತ್ತಮ ಕಾರ್ಯವನ್ನೇ ಮಾಡುತ್ತಿದ್ದಿ; ಅದನ್ನೇ ಮುಂದುವರೆಸು ಎಂದು ಕೊಹ್ಲಿಗೆ ಧೈರ್ಯ ತುಂಬಿದ್ದಾರೆ.
'ನಿನ್ನ ಸುತ್ತಮುತ್ತಲು ಏನು ನಡೆಯುತ್ತಿದೆಯೋ ಅದರ ಬಗ್ಗೆಯೆಲ್ಲ ತಲೆಕೆಡಿಸಿಕೊಳ್ಳಬೇಡ. ಸಾಧನೆಯೆಡೆಗೆ ಗಮನ ಕೇಂದ್ರೀಕರಿಸು. ನಿನ್ನ ಹೃದಯವೇ ನಿನಗೆ ದಾರಿತೋರಿಸಲು ಬಿಡು. ಸಾಧಿಸಿದಾಗೆಲ್ಲ ನಿನಗೆ ಸಣ್ಣ ಅತೃಪ್ತಿ ಕಾಡುತ್ತಲೇ ಇರಲಿ' ಎಂದಿದ್ದಾರೆ.
'ಸ್ವತಃ ನನ್ನ ಅನುಭವವನ್ನೇ ನಾನು ನಿನಗೆ ಹೇಳುತ್ತಿದ್ದೇನೆ. ನೀನು ಹೆಚ್ಚು ರನ್ ಗಳಿಸಿದಷ್ಟೂ ನಿನಗದು ಸಾಕೆನಿಸಬಾರದು. ಇನ್ನೂ ಹೆಚ್ಚಿನ ರನ್ ಗಳಿಸಲು ನೀನು ಬಯಸಬೇಕು. ಗಳಿಸಿದ ಸಾಧನೆ ನಿನಗೆ ಪೂರ್ಣ ತೃಪ್ತಿ ನೀಡಲೇಬಾರದು' ಎಂದು ಸಚಿನ್ ಹೇಳಿದರು.