
ನವದೆಹಲಿ, ಫೆಬ್ರವರಿ 24: ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಾವಿರಾರು ಜನರ ಮಧ್ಯೆ ಭಾನುವಾರ (ಫೆಬ್ರವರಿ 24) ದೆಹಲಿ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳ ನೆರವಿಗಾಗಿ ಸುಮಾರು 15 ಲಕ್ಷ ರೂ. ದೇಣಿಗೆಯನ್ನೂ ಸಂಗ್ರಹಿಸಿದ್ದಾರೆ.
ದೆಹಲಿ ಮ್ಯಾರಥಾನ್ ಅಂಗವಾಗಿ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಬೇರೆ ಬೇರೆ ವಿಭಾಗಗಳ ಓಟ ಆರಂಭವಾಗುವುದಕ್ಕೂ ಮುನ್ನ #KeepMoving ಪುಶ್ಅಪ್ ಚಾಲೆಂಜ್ನ ಭಾಗವಾಗಿ ತೆಂಡೂಲ್ಕರ್ ಅವರು 10 ಪುಶ್ಅಪ್ಗಳನ್ನು ಪೂರ್ಣಗೊಳಿಸಿದರು. ಸಾವಿರಾರು ಸ್ಪರ್ಧಿಗಳೂ ಸಚಿನ್ ಜೊತೆ ಪುಶ್ಅಪ್ ವ್ಯಾಯಾಮದಲ್ಲಿ ಪಾಲ್ಗೊಂಡರು.
ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಭಾರತೀಯ 40ಕ್ಕೂ ಅಧಿಕ ಯೋಧರು ಸಾವನ್ನಪ್ಪಿದ್ದರು. ಮೃತ ಯೋಧರ ಕುಟುಂಬಗಳಿಗೆ ನೆರವು ನೀಡುವ ಸಲುವಾಗಿ ಸಚಿನ್ ಪುಶ್ಅಪ್ ಮೂಲಕ ದೇಹ ದಂಡಿಸಿಕೊಂಡರು.
'ಇಲ್ಲಿ ಎಷ್ಟು ದೇಣಿಗೆ ಸಂಗ್ರಹಿಸಲಾಯಿತೋ ಅದೆಲ್ಲವೂ ಒಂದು ಒಳ್ಳೆಯ ಕಾರಣಕ್ಕೆ, ಮಾನವೀಯ ವಿಚಾರಕ್ಕೆ ವಿನಿಯೋಗಿಲ್ಪಡುತ್ತೆ. ಈ ದೇಣಿಗೆಯನ್ನು ಹುತಾತ್ಮ ಸೈನಿಕರ ಕುಟುಂಬಗಳಿಗೆ ನೀಡಲಾಗುತ್ತದೆ. ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ನನಗೆ ಭರವಸೆಯಿದೆ. ಇದರಲ್ಲಿ ನೀವೂ ಪಾಲ್ಗೊಳ್ಳಿ' ಎಂದು ಸಚಿನ್ ಕಾರ್ಯಕ್ರಮದ ವೇಳೆ ಹೇಳಿಕೊಂಡಿದ್ದಾರೆ.