ಅವರು ಬಂದರೆ ದಿನೇಶ್ ಕಾರ್ತಿಕ್ ತಂಡದಿಂದ ಹೊರಬೀಳ್ತಾರೆ; ಸುಮ್ಮನೆ ಅವಕಾಶ ಕೊಡಬೇಡಿ ಎಂದ ಗಂಭೀರ್!

ದಿನೇಶ್ ಕಾರ್ತಿಕ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದು ತಂಡಕ್ಕೆ ಅವಶ್ಯಕತೆ ಇದ್ದಾಗ ಅತ್ಯುತ್ತಮವಾಗಿ ಬ್ಯಾಟ್ ಬೀಸಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟು ಆಪತ್ಬಾಂಧವ ಎಂಬ ಹೆಸರನ್ನು ಸಂಪಾದಿಸಿದ ಪ್ರತಿಭೆ.
ತನ್ನ ಈ ಅತ್ಯುತ್ತಮ ಪ್ರದರ್ಶನದ ಕಾರಣದಿಂದಾಗಿಯೇ ಟೂರ್ನಿ ನಡೆಯುತ್ತಿದ್ದ ಸಂದರ್ಭದಲ್ಲಿಯೇ ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿದ್ದ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಟೀಮ್ ಇಂಡಿಯಾದಿಂದ ಅವಕಾಶ ಕಳೆದುಕೊಂಡು ಹೊರಬಿದ್ದಿದ್ದ ದಿನೇಶ್ ಕಾರ್ತಿಕ್ ಮತ್ತೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಬೇಕು ಎಂಬ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈ ಬಾರಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಸಂದರ್ಶನದಲ್ಲಿ ಮಾತನಾಡಿದ ಅವರು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಆಸೆ ಇದೆ ಎಂದಿದ್ದರು. ನಂತರ ತಂಡದಲ್ಲಿ ಅವಕಾಶ ಸಿಕ್ಕಿದ್ದು ದಿನೇಶ್ ಕಾರ್ತಿಕ್ ಅವರ ಈ ಆಸೆಗೆ ಮತ್ತಷ್ಟು ಪುಷ್ಟಿ ಕೊಟ್ಟಿತ್ತು.
ಇನ್ನು ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡ ದಿನೇಶ್ ಕಾರ್ತಿಕ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಅಜೇಯ 30 ರನ್ ಚಚ್ಚಿ ಅಂತಿಮ ಹಂತದಲ್ಲಿ ಅಬ್ಬರಿಸಿ ತಂಡಕ್ಕೆ ಆಸರೆಯಾಗಿದ್ದರು. ಹೀಗೆ ಟೀಂ ಇಂಡಿಯಾದಲ್ಲೂ ಅಬ್ಬರಿಸುತ್ತಿರುವ ದಿನೇಶ್ ಕಾರ್ತಿಕ್ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುವ ತಮ್ಮ ಆಸೆಯನ್ನು ಪೂರೈಸಿಕೊಳ್ಳಬಹುದು ಎಂಬ ಅಭಿಪ್ರಾಯವನ್ನು ಕ್ರಿಕೆಟ್ ಅಭಿಮಾನಿಗಳು ವ್ಯಕ್ತಪಡಿಸುತ್ತಿರುವಾಗಲೇ ಗೌತಮ್ ಗಂಭೀರ್ ದಿನೇಶ್ ಕಾರ್ತಿಕ್ ವಿರುದ್ಧವಾಗಿ ಈ ಕೆಳಗಿನಂತೆ ಹೇಳಿಕೆ ನೀಡಿದ್ದಾರೆ.

ಆ ನಾಲ್ವರು ಮರಳಿದರೆ ದಿನೇಶ್ ಕಾರ್ತಿಕ್ ಹೊರಬೀಳಲಿದ್ದಾರೆ
ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಬೇಕಾದ ಟೀಮ್ ಇಂಡಿಯಾ ಕುರಿತಾಗಿ ಮಾತನಾಡಿರುವ ಗೌತಮ್ ಗಂಭೀರ್ ಸದ್ಯ ತಂಡದಿಂದ ಹೊರಗುಳಿದಿರುವ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಮರಳಿ ತಂಡ ಸೇರಿದರೆ ದಿನೇಶ್ ಕಾರ್ತಿಕ್ ಅವರಿಗೆ ಆಡುವ ಬಳಗದಲ್ಲಿ ಅವಕಾಶವಿಲ್ಲದೇ ಹೊರ ಬೀಳಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಸುಮ್ಮನೆ ಅವಕಾಶ ನೀಡುವುದು ವ್ಯರ್ಥ
ಇನ್ನೂ ಮುಂದುವರೆದು ಮಾತನಾಡಿರುವ ಗೌತಮ್ ಗಂಭೀರ್ ಈ ನಾಲ್ವರು ತಂಡಕ್ಕೆ ಆಗಮಿಸುವ ಪರಿಣಾಮ ದಿನೇಶ್ ಕಾರ್ತಿಕ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುವುದಿಲ್ಲ, ಹೀಗಾಗಿ ವಿಶ್ವಕಪ್ ತಂಡಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡುವುದು ವ್ಯರ್ಥ ಎಂದು ಹೇಳಿದ್ದಾರೆ.

ಯುವ ಆಟಗಾರನಿಗೆ ಅವಕಾಶ ನೀಡಬೇಕು ಎಂದ ಗಂಭೀರ್
ಹೀಗೆ ದಿನೇಶ್ ಕಾರ್ತಿಕ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುವುದು ಅನುಮಾನ ಎಂದಿರುವ ಗೌತಮ್ ಗಂಭೀರ್ ಆತನ ಬದಲಾಗಿ ಟಿ ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಉತ್ತಮವಾಗಿ ಫೀಲ್ಡಿಂಗ್ ಮಾಡಬಲ್ಲ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ಒಂದಷ್ಟು ಓವರ್ ಚೆನ್ನಾಗಿ ಬ್ಯಾಟ್ ಬೀಸಬಲ್ಲ ಯುವ ಆಟಗಾರನನ್ನು ಆಯ್ಕೆ ಮಾಡಬೇಕು ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications