ವಿಶ್ವಕಪ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿಷ್ಠಿತ ಟೂರ್ನಿಯ ಉದ್ಘಾಟನೆಗೆ ಇನ್ನು ಒಂದು ತಿಂಗಳಿಗೂ ಕಡಿಮೆ ಸಮಯಾವಕಾಶವಿದೆ. ಹೀಗಾಗಿಯೇ ಮಂಗಳವಾರ ವಿಶ್ವಕಪ್ಗೆ ಭಾರತದ 15 ಆಟಗಾರರ ತಂಡವನ್ನು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಘೋಷಣೆ ಕೂಡ ಮಾಡಲಾಗಿದೆ. ಈ ಮೂಲಕ ವಿಶ್ವಕಪ್ನಲ್ಲಿ ಆಡುವ ಟೀಮ್ ಇಂಡಿಯಾದ ಅಂತಿಮ 15 ಆಟಗಾರರ ಪಡೆ ಸ್ಪಷ್ಟವಾಗಿದೆ.
ಈ ತಂಡದ ಆಯ್ಕೆಯ ವಿಚಾರವಾಗಿ ಈಗ ಸಾಕಷ್ಟು ವಿಶ್ಲೇಷಣೆಗಳು ಚರ್ಚೆಗಳು ನಡೆಯುತ್ತಿದೆ. ಅದರಲ್ಲಿ ಕೆಲ ಆಟಗಾರರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಸಾಕಷ್ಟು ಚರ್ಚೆಗಳು, ಪ್ರಶ್ನೆಗಳು ಕೇಳಿ ಬರುತ್ತಿದೆ. ಅದರಲ್ಲಿ ಪ್ರಮುಖವಾದವರೆಂದರೆ ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಹಾಗೂ ಆರ್ ಅಶ್ವಿನ್. ಗಮನಿಸಬೇಕಾದ ಸಂಗತೊಯೇನೆಂದರೆ ವಿಶ್ವಕಪ್ ತಂಡ ಪ್ರಕಟವಾಗಿದ್ದರೂ ಈ ಮೂವರು ಆಟಗಾರರಿಗೂ ಇನ್ನೂ ಸಂಪೂರ್ಣವಾಗಿ ತಂಡದ ಬಾಗಿಲು ಮುಚ್ಚಿಲ್ಲ!!

ಹೌದು.. ವಿಶ್ವಕಪ್ನಲ್ಲಿ ಆಡುವ 15 ಬಳಗವನ್ನು ಪ್ರಕಟಿಸಲಾಗಿದೆ ನಿಜ. ಆದರೆ ಈ ತಂಡದಲ್ಲಿ ಬದಲಾವನೆ ಮಾಡಿಕೊಳ್ಳಲು ಐಸಿಸಿ ಇನ್ನೂ ಕೂಡ ಅವಕಾಶ ಮಾಡಿಕೊಟ್ಟಿದೆ. ಸೆಪ್ಟೆಂಬರ್ 27ನೇ ತಾರೀಕಿನವರೆಗೆ ಕೂಡ ತಂಡದಲ್ಲಿ ಯಾವುದೇ ಈತಿಯಲ್ಲಿಯೂ ಬದಲಾವಣೆ ಮಾಡಿಕೊಳ್ಳುವ ಅವಕಾಶವನ್ನು ಎಲ್ಲಾ ತಂಡಗಳಿಗೂ ನೀಡಲಾಗಿದೆ. ಹಾಗಾಗಿಯೇ ಮ್ಯಾನೇಜ್ಮೆಂಟ್ಗೆ ಬದಲಾವಣೆಯ ಅಗತ್ಯವಿದೆ ಎಂದು ಅನಿಸಿದಲ್ಲಿ ಅಥವಾ ತಂಡದಲ್ಲಿ ಗಾಯದ ಸಮಸ್ಯೆಗಳು ಗಾಯದ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಈ ಆಟಗಾರರಿಗೆ ಅವಕಾಶ ಇದ್ದೇ ಇದೆ.
ಸಂಜು ಅಭಿಮಾನಿಗಳಿಗೆ ಬೇಸರ
ಇನ್ನು ಸಂಜು ಸ್ಯಾಮ್ಸನ್ಗೆ ವಿಶ್ವಕಪ್ ತಂಡದಲ್ಲಿಯೂ ಅವಕಾಶ ದೊರೆಯದ ವಿಚಾರವಾಗಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸೂರ್ಯಕುಮಾರ್ ಯಾದವ್ ಅವರನ್ನು ಸಂಜು ಸ್ಯಾಮ್ಸನ್ ಬದಲಿಗೆ ಪರಿಗಣಿಸುವುದು ಬಹುತೇಕ ನಿಶ್ಚಿತವಾಗಿತ್ತು. ಏಕದಿನ ಮಾದರಿಯ ಅಂಕಿಅಂಶಗಳಲ್ಲಿ ಸಂಜು ಸ್ಯಾಮ್ಸನ್ ಸೂರ್ಯಕುಮಾರ್ ಯಾದವ್ಗಿಂತ ಉತ್ತಮ ಎಂದು ಅನಿಸುವಂತಿದ್ದರೂ ಸೂರ್ಯಕುಮಾರ್ ಅವರಲ್ಲಿರುವ ವಿಶೇಷ ಸಾಮರ್ಥ್ಯದ ಕಾರಣಕ್ಕಾಗಿ ಅವರನ್ನು ಪರಿಗಣಿಸಲು ನಿರ್ಧರಿಸಿದೆ ಆಯ್ಕೆ ಮಂಡಳಿ.
ಪ್ರಸಿದ್ಧ್ ಕೃಷ್ಣಗೂ ನಿರಾಸೆ
ಇನ್ನು ಈ ವಿಶ್ವಕಪ್ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅತ್ಯಂತ ಸನಿಹದಲ್ಲಿ ಎಡವಿದ ಮತ್ತೋರ್ವ ಆಟಗಾರ ಎಂದರೆ ಅದು ಕನ್ನಡಿಗ ಪ್ರಸಿದ್ಧ್ ಕೃಷ್ಣ. ಗಾಯದಿಮದಾಗಿ ತಂಡದಿಂದ ಬೇರ್ಪಟ್ಟಿದ್ದರೂ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ನಂತರ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ ವಿಶ್ವಕಪ್ಗೆ 15 ಆಟಗಾರರನ್ನು ಮಾತ್ರವೇ ಆಯ್ಕೆ ಮಾಡಬೇಕಿದ್ದ ಕಾರಣ ತಂಡದಲ್ಲಿ ಅವರಿಗೆ ಅವಕಾಶ ದೊರೆಯಲಿಲ್ಲ. ಬ್ಯಾಟಿಂಗ್ ಗಮನದಲ್ಲಿಟ್ಟುಕೊಂಡು ಶಾರ್ದೂಲ್ ಠಾಕೂರ್ಗೆ ಅವಕಾಶ ನೀಡಲು ಆಯ್ಕೆಗಾರರು ನಿರ್ಧರಿಸಿದ್ದು ಪ್ರಸಿದ್ಧ್ಗೆ ಹಿನ್ನಡೆಯಾಯಿತು. ಆದರೆ ವೇಗದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯ ಅಗತ್ಯ ಕಂಡುಬಂದಲ್ಲಿ ಆಗ ಪ್ರಸಿದ್ಧ್ ಮೊದಲ ಆಯ್ಕೆಯಾಗಿರಲಿದ್ದಾರೆ ಎನ್ನುವುದು ಸ್ಪಷ್ಟ.
ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್) ಹಾರ್ದಿಕ್ ಪಾಂಡ್ಯ (ಉಪನಾಯಕ), , ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ