ಕರ್ನಾಟಕದ ಸ್ಟಾರ್ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ, ಐರ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿದ್ದಾರೆ. ಸೋಮವಾರ ಪ್ರಕಟವಾದ ಏಷ್ಯಾ ಕಪ್ ಏಕದಿನ ತಂಡದಲ್ಲಿರುವ ಪ್ರಸಿದ್ಧ್, ತಮ್ಮ ಬಿಗುವಿನ ದಾಳಿಯಿಂದಲೇ ಹೆಸರುವಾಸಿ.
ಪ್ರಸಿದ್ಧ್ ಕೃಷ್ಣ ಅವರ ಲಕ್ ಬದಲಿಸಿದ್ದು ಆ ಒಂದು ಪಂದ್ಯ. ಮೈಸೂರಿನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಕರ್ನಾಟಕ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಿದ್ದವು. ಆ ಪಂದ್ಯದಲ್ಲಿ ತನ್ನ ಮೊನಚಾದ ದಾಳಿಯಿಂದ ಪ್ರಸಿದ್ಧ್ ಗರಿಷ್ಠ ವಿಕೆಟ್ ಗಳನ್ನು ಪಡೆದು ಬೀಗಿದ್ದರು. ಅಲ್ಲದೇ, ಐಪಿಎಲ್ನಲ್ಲೂ ತಮ್ಮ ಶಿಸ್ತು ಬದ್ಧ ದಾಳಿಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಪರಿಣಾಮ ಐಪಿಎಲ್ ಹರಾಜಿನಲ್ಲೂ ಇವರಿಗೆ ರೆಡ್ ಕಾರ್ಪೆಟ್ ಹಾಕಲಾಯಿತು. 2018ರಲ್ಲಿ ನಡೆದ ಹರಾಜಿನಲ್ಲಿ ಪ್ರಸಿದ್ಧ್ ತಮ್ಮ ಮೂಲ ಬೆಲೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿದರು. ಈ ಸಮಯದಲ್ಲಿ ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡಿ ಸೈ ಎನಿಸಿಕೊಂಡರು. ಮೊದಲ ಆವೃತ್ತಿಯಲ್ಲೇ ಪ್ರಸಿದ್ಧ 7 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿ, ಭರವಸೆ ಮೂಡಿಸಿದರು.
2019 ರಿಂದ 2021ರ ವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಬೌಲ್ ಮಾಡಿದ ಪ್ರಸಿದ್ಧ್ 27 ಪಂದ್ಯಗಳಲ್ಲಿ 30 ವಿಕೆಟ್ ಕಬಳಿಸಿದರು. ಬಳಿಕ ಕೆಕೆಆರ್ ಇವರನ್ನು ತಂಡದಿಂದ ಕೈ ಬಿಟ್ಟಿತು. ಇವರ ಆಟಕ್ಕೆ ರಾಜಸ್ಥಾನ ಮಣೆ ಹಾಕಿತು. ಅಲ್ಲದೆ 10 ಕೋಟಿ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿತು. 2022ರ ಐಪಿಎಲ್ನಲ್ಲಿ ಪ್ರಸಿದ್ಧ್ 17 ಪಂದ್ಯಗಳಲ್ಲಿ 19 ವಿಕೆಟ್ ಪಡೆದು ಮಿಂಚಿದರು.

ಐಪಿಎಲ್ನಲ್ಲಿ ಪ್ರಸಿದ್ಧ್ ನೀಡಿದ ಸೊಗಸಾದ ಪ್ರದರ್ಶನದ ಫಲವಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶ ಲಭಿಸಿತು. ಮಾರ್ಚ್ 23, 2021ರಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಸಿದ್ಧ್ ಪುಣೆಯಲ್ಲಿ ಪಾದಾರ್ಪಣೆ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಅಬ್ಬರಿಸಿದರು. ಅಲ್ಲದೆ ತಮ್ಮಲ್ಲಿರುವ ಕ್ಷಮತೆಯನ್ನು ಸಾರಿ ಹೇಳಿದರು.
ಇಲ್ಲಿಂದ ಪ್ರಸಿದ್ಧ್ ಸಿಕ್ಕ ಅವಕಾಶದಲ್ಲಿ ಅಬ್ಬರಿಸುತ್ತಾ ಸಾಗಿದರು. ಆದರೆ ಗಾಯದ ಸಮಸ್ಯೆ ಬಹುವಾಗಿ ಕಾಡಿದ್ದರಿಂದ 2023ರ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಲು ಆಗಿರಲಿಲ್ಲ. ಆದರೆ, ಈಗ ಪ್ರಸಿದ್ಧ್ ಐರ್ಲೆಂಡ್ ವಿರುದ್ಧ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ. ಇವರನ್ನು ವಿಶ್ವಕಪ್ ತಂಡದಲ್ಲಿ ಸೇರಿಸಿಕೊಳ್ಳಬೇಕಾ ಎಂಬ ಪ್ರಶ್ನೆಗಳು ಎದ್ದಿವೆ.
1 : ಏಕದಿನ ಕ್ರಿಕೆಟ್ ನಲ್ಲಿ ಭರ್ಜರಿ ಪ್ರದರ್ಶನ : ಪ್ರಸಿದ್ಧ್ ಕೃಷ್ಣ ಏಕದಿನ ಮಾದರಿಯಲ್ಲಿ ತಮ್ಮ ಪ್ರಭಾವ ಬೀರಿದ್ದಾರೆ. ಆಡಿದ 11 ಏಕದಿನ ಪಂದ್ಯಗಳಲ್ಲಿ ಪ್ರಸಿದ್ಧ್ 19 ವಿಕೆಟ್ ಕಬಳಿಸಿದ್ದಾರೆ. ಇವರ ಎಕಾನಮಿ ರೇಟ್ 4.86 ಆಗಿದೆ. 2022ರಲ್ಲಿ ಶಮಿ ಅನುಪಸ್ಥಿತಿಯಲ್ಲಿ ಪ್ರಸಿದ್ಧ್ ಮಹತ್ವದ ಪಾತ್ರವನ್ನು ವಹಿಸಿದ್ದರು. ಅಲ್ಲದೆ ಗಾಯದ ಸಮಸ್ಯೆಯಿಂದ ಬುಮ್ರಾ ತಂಡದಿಂದ ಹೊರ ನಡೆದಾಗಲೂ ಪ್ರಸಿದ್ಧ್, ಬುಮ್ರಾ ಸ್ಥಾನವನ್ನು ತುಂಬಿದ್ದರು. ಇವರ ಅನುಭವವನ್ನು ಮಾನದಂಡವಾಗಿ ತೆಗೆದುಕೊಂಡರೆ ಇವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸುವುದು ಕಷ್ಟ. ಆದರೆ ಪ್ರಸಿದ್ಧ್ ಕ್ಷಮತೆಯನ್ನು ನೋಡಿದರೆ, ಇವರಿಗೆ ಚಾನ್ಸ್ ಸಿಗಲೇ ಬೇಕು.
2 : ಹೆಚ್ಚುವರಿ ವೇಗಿಯಾಗಿ ತಂಡದಲ್ಲಿ ಸ್ಥಾನ: ಟೀಮ್ ಇಂಡಿಯಾದಲ್ಲಿ ಸದ್ಯ ಸ್ಟಾರ್ ವೇಗದ ಬೌಲರ್ಗಳು ಇದ್ದಾರೆ. ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾದ ಮೊದಲ ಆಯ್ಕೆಯ ವೇಗಿಗಳಾಗಿದ್ದಾರೆ. ಈ ಸ್ಟಾರ್ ಆಟಗಾರರಿಗೆ ಗಾಯವಾದಲ್ಲಿ ರಿಪ್ಲೇಸ್ ಮಾಡಲು ಪ್ರಸಿದ್ಧ ಕೃಷ್ಣ ಉತ್ತಮ ಆಯ್ಕೆ.
3 : ಯುವ ಹಾಗೂ ಅನುಭವಿಗಳ ತಂಡ : ವಿಶ್ವಕಪ್ನಲ್ಲಿ ಆಡಲು ಯುವ ಹಾಗೂ ಅನುಭವಿಗಳ ತಂಡ ಅವಶ್ಯಕ. ಈಗ ಟೀಮ್ ಇಂಡಿಯಾದಲ್ಲಿರುವ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹಾಗೂ ವಿಶ್ವಕಪ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಯುವ ಆಟಗಾರರಿಗೆ ಈ ಅವಕಾಶ ಲಭಿಸಿದರೆ ಭವಿಷ್ಯದ ದೃಷ್ಟಿಯಿಂದ ಉತ್ತಮ.