
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಮುಕ್ತಾಯವಾಗುತ್ತಿದ್ದಂತೆಯೇ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡಲು ಸಜ್ಜಾಗಲಿದೆ. ಶ್ರೀಲಂಕಾ ವಿರುದ್ಧ ಭಾರತ ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದ್ದು ಅದಾದ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ತಂಡಗಳು ಮುಖಾಮುಖಿಯಾಗಲಿದೆ. ಈ ಎರಡು ಮಾದರಿಗೂ ಭಾರತ ತಂಡವನ್ನು ಶನುವಾರ ಘೋಷಣೆ ಮಾಡಲಾಗಿದ್ದು ಟೆಸ್ಟ್ ತಂಡದಲ್ಲಿ ಕೆಲ ಪ್ರಮುಖ ಬದಲಾವಣೆಗಳು ಆಗಿದೆ. ಈ ವಿಚಾರ ಈಗ ಚರ್ಚೆಯ ಕೇಂದ್ರಬಿಂದುವಾಗಿದೆ.
ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ಭಾರತದ ಅನುಭವಿ ಆಟಗಾರರಾದ ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ, ವೃದ್ಧಿಮಾನ್ ಸಾಹಾ ಹಾಗೂ ಇಶಾಂತ್ ಶರ್ಮಾ ಹೊರಬಿದ್ದಿದ್ದಾರೆ. ಫಾರ್ಮ್ ಸಮಸ್ಯೆ ಕಾರಣದಿಂದಾಗಿ ಈ ಎಲ್ಲಾ ಆಟಗಾರರು ಸರಣಿಗೂ ಮುನ್ನವೇ ತಂಡದಿಂದ ಕೈಬಿಡುವ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು ಎಂಬ ವಿಚಾರ ಕೂಡ ಬಹಿರಂಗವಾಗಿದೆ.
ಇದೀಗ ಈ ಟೆಸ್ಟ್ ಸರಣಿಯ ಆಯ್ಕೆಯ ಬಗ್ಗೆ ಆಯ್ಕೆ ಮಂಡಳಿಯ ಮಾಜಿ ಮುಖ್ಯಸ್ಥ ದಿಲೀಪ್ ವೆಂಗ್ಸರ್ಕಾರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಇಬ್ಬರು ಯುವ ಪ್ರತಿಭೆಗಳಿಗೆ ಆಯ್ಕೆ ಮಂಡಳಿ ಅನ್ಯಾಯ ಮಾಡಿದೆ ಎಂದು ವೆಂಗ್ಸರ್ಕಾರ ಅಭಿಪ್ರಾಯಪಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಯುವ ಆಟಗಾರರಾದ ಋತುರಾಜ್ ಗಾಯಕ್ವಾಡ್ ಹಾಗೂ ಸರ್ಫರಾಜ್ ಖಾನ್ ಅರ್ಹರಾಗಿದ್ದು ಅವರಿಗೆ ಅವಕಾಶ ನೀಡದಿರುವುದು ಬೇಸರ ಮೂಡಿಸಿದೆ ಎಂದಿದ್ದಾರೆ ದಿಲೀಪ್ ವೆಂಗ್ಸರ್ಕಾರ್.
ಮುಂಬೈ ಪರ ರಣಜಿ ಆಡುವ ಸರ್ಫರಾಜ್ ಖಾನ್ ಈ ಬಾರಿಯ ರಣಜಿಯಲ್ಲಿ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಸರ್ಫರಾಜ್ 401 ಎಸೆತಗಳನ್ನು ಎದುರಿಸಿ 275 ರನ್ಗಳಿಸಿದ್ದರು. ಈ ಪಂದ್ಯದಲ್ಲಿ 30 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿದ್ದರು. ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಮಾತನಾಡಿ ಅಭಿಪ್ರಾಯ ಹಂಚುಕೊಂಡಿರುವ ವೆಂಗ್ಸರ್ಕಾರ್ ದೇಶೀಯ ಕ್ರಿಕೆಟ್ನಲ್ಲಿ ಮಿಂಚಿರುವ ಸರ್ಫರಾಹ್ ಖಾನ್ ಹಾಗೂ ಋತುರಾಜ್ ಗಾಯಕ್ವಾಡ್ ಅವರತ್ತ ಆಯ್ಕೆ ಮಂಡಳಿ ಗಮನಹರಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ತಂಡವನ್ನು ಆಯ್ಕೆ ಮಾಡುವಾಗ ಬುದ್ದಿಯನ್ನು ಅನ್ವಯಿಸುವದಿಲ್ಲ ಎಂದು ಭಾಸವಾಗುತ್ತಿದೆ. ದೇಶೀಯ ಅದ್ಭುತ ಪ್ರದರ್ಶನ ನೀಡುತ್ತಿರುವ ಋತುರಾಜ್ ಮತ್ತು ಸರ್ಫರಾಜ್ ಅವರನ್ನು ಆಯ್ಕೆ ಮಾಡದ ಬಗ್ಗೆ ಯಾವ ಕಾರಣವನ್ನು ನೀವು ನೀಡಬಹುದು? ತಂಡವನ್ನು ನೋಡಿದರೆ ಒಂದೆರಡು ಆಟಗಾರರು ಪ್ರತಿಭಾವಂತರಾದರೂ ತಂಡದಲ್ಲಿ ತಮ್ಮ ಸ್ಥಾನಗಳಿಸಲು ಹೆಚ್ಚಿನದನ್ನೇನೂ ಅವರು ಮಾಡಿಲ್ಲ. ಪ್ರತಿಯೊಬ್ಬ ಆಟಗಾರನು ತಂಡದಲ್ಲಿ ತನ್ನ ಸ್ಥಾನವನ್ನು ಅರ್ಹತೆಯಿಂದ ಗಳಿಸಲಿ. ಇದನ್ನು ಲಘುವಾಗಿ ಪರಿಗಣಿಸಬಾರದು. ಋತುರಾಜ್ ಮತ್ತು ಸರ್ಫರಾಜ್ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಆಟಗಾರರನ್ನು ಆಯ್ಕೆ ಮಾಡದೆ ಆಯ್ಕೆದಾರರು ಅವರ ನೈತಿಕ ಸ್ಥೈರ್ಯವನ್ನು ಹಾಳು ಮಾಡುತ್ತಿದ್ದಾರೆ" ಎಂದು ದಿಲೀಪ್ ವೆಂಗ್ಸರ್ಕಾರ್ ಕಿಡಿ ಕಾರಿದ್ದಾರೆ.
ಲಂಕಾ ವಿರುದ್ಧದ ಆಡಲಿರುವ ಭಾರತದ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಭ್ ಪಂತ್, ಕೆಎಸ್ ಭರತ್, ಆರ್ ಅಶ್ವಿನ್ (ಫಿಟ್ನೆಸ್ ಆಧಾರದ ಮೇಲೆ), ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೌರಭ್ ಕುಮಾರ್