ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಆಸ್ಟ್ರೇಲಿಯಾ ತಂಡ ಪಂದ್ಯದಲ್ಲಿ ಆರಂಭದಿಂದಲೂ ಹಿಡಿತ ಸಾಧಿಸಿದ್ದರೂ ಭಾರತ ಕೊನೆಯ ಹಂತದವರೆಗೂ ತೀವ್ರ ಹೋರಾಟ ನಡೆಸಿದ್ದು ಅಂತಿಮವಾಗಿ ಸೋಲು ಕಂಡಿದೆ. ಈ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು ಮಹತ್ವದ ಪಂದ್ಯದಲ್ಲಿ ತಂಡ ನೀಡಿದ ಹೋರಾಟದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ರೋಹಿತರ್ ಶರ್ಮಾ ಟೀಮ್ ಇಂಡಿಯಾದ ಸೋಲಿಗೆ ಒಂದು ವಿಭಾಗವನ್ನು ಮಾತ್ರ ನೇರ ಹೊಣೆ ಮಾಡಿದ್ದಾರೆ.
ಪಂದ್ಯದ ಮುಕ್ತಾಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್ ಕಾರ್ಯಕ್ರಮದಲ್ಲಿ ನಾಯಕ ರೋಹಿತ್ ಶರ್ಮಾ ಮಾತನಾಡಿದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದ ಬಳಿಕ ಭಾರತ ಉತ್ತಮ ಆರಂಭವನ್ನು ಪಡೆಯಿತು ಎಂದಿದ್ದಾರೆ. ಆದರೆ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಹಿನ್ನಡೆ ಕಾಣಲು ಬೌಲರ್ಗಳು ಕಾರಣ ಎಂದು ದೂರಿದರು. ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಆಟಗಾರರು ಬೇಗನೆ ವಿಕೆಟ್ ಕಳೆದುಕೊಂಡಿದ್ದರೂ ಅಂತಿಮವಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 469 ರನ್ಗಳಿಸಲು ಶಕ್ತವಾಯಿತು. ಟ್ರೆವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಸಿಡಿಸಿದ ಭರ್ಜರಿ ಶತಕ ಆಸ್ಟ್ರೇಲಿ ತಂಡ ಪಂದ್ಯದಲ್ಲಿ ಹಿಡಿತ ಸಾಧಿಸುವಂತೆ ಮಾಡಿದರು.

ಇನ್ನು ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 296 ರನ್ ಗಳಿಸುವಲ್ಲಿ ಮಾತ್ರವೇ ಯಶಸ್ವಿಯಾಯಿತು. ನಂತರ ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ಅಗ್ರ ಕ್ರಮಾಂಕದ ವೈಫಲ್ಯದ ನಂತರ ಮತ್ತೆ ಹಿಡಿತ ಸಾಧಿಸಿತು. ನಂತರ ಭಾರತ ಆಸಿಸ್ ಪಡೆಯನ್ನು ಒತ್ತಡಕ್ಕೆ ಸಿಲುಕಿಸಿದರೂ ಮೊದಲ ಇನ್ನಿಂಗ್ಸ್ನಲ್ಲಿ ದೊಡ್ಡ ಮೊತ್ತದ ಉನ್ನಡೆ ಸಾಧಿಸಿದ್ದ ಕಾರಣ 444 ರನ್ಗಳ ಮುನ್ನಡೆಯಲ್ಲಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು ಆಸ್ಟ್ರೇಲಿಯಾ. ನಂತರ ನಾಲ್ಕನೇ ದಿನದಾಟದ ಅಂತ್ಯದಲ್ಲಿ ಭಾರತ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತ್ತು. ಆದರೆ ಕೊನೆಯ ದಿನದಾಟದಲ್ಲಿ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಅಜಿಂಕ್ಯಾ ರಹಾನೆಯನ್ನು ಔಟ್ ಮಾಡಿದ ಆಸ್ಟ್ರೇಲಿಯಾ ತಂಡದ ಸುಲಭವಾಗಿ ಗೆದ್ದುಕೊಂಡಿತು.
"ನಾವು ಟಾಸ್ ಗೆದ್ದ ಬಳಿಕ ಉತ್ತಮವಾಗಿ ಆರಂಭವನ್ನು ಪಡೆದುಕೊಂಡೆವು. ಮೊದಲ ಸೆಶನ್ನಲ್ಲಿ ನಮ್ಮ ಬೌಲಿಂಗ್ ಅದ್ಭುತವಾಗಿತ್ತು. ಆದರೆ ನಂತರ ನಾವು ಬೌಲಿಂಗ್ ನಡೆಸಿದ ರೀತಿಯಿಂದಾಗಿ ನಮ್ಮನ್ನು ನಾವೇ ಕೆಳಗೆ ಹಾಕಿಕೊಂಡೆವು" ಎಂದಿದ್ದಾರೆ ರೋಹಿತ್ ಶರ್ಮಾ. ಮುಂದುವರಿದ ಅವರು "ಇದಕ್ಕೆ ನಾವು ಆಸ್ಟ್ರೇಲಿಯಾದ ಬ್ಯಾಟರ್ಗಳಿಗೆ ಶ್ರೇಯಸ್ಸು ನೀಡಬೇಕು. ಸ್ಟೀವ್ ಸ್ಮಿತ್ ಅವರೊಂದಿಗೆ ಹೆಡ್ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದರು" ಎಂದಿದ್ದಾರೆ ರೋಹಿತ್ ಶರ್ಮಾ.

"ಅದು ನಮ್ಮನ್ನು ಆಟದಿಂದ ದೂರಕೊಂಡೊಯ್ಯಿತು. ಅಂಥಾ ಸ್ಥಿತಿಯಿಂದ ಕಮ್ಬ್ಯಾಕ್ ಮಾಡುವುದು ಯಾವಾಗಲೂ ಕಷ್ಠ. ಆದರೆ ನಾವು ಉತ್ತಮ ಹೋರಾಟ ಪ್ರದರ್ಶಿಸಿದೆವು. ಕೊನೆಯ ವರೆಗೂ ನಾವು ಹೋರಾಡಿದ್ದೇವೆ. ನಾವು ಕಳೆದ ನಾಲ್ಕು ವರ್ಷಗಳಿಂದ ಬಹಳ ಪರಿಶ್ರಮಪಟ್ಟಿದ್ದೇವೆ. ಎರಡು ಫೈನಲ್ ಪಂದ್ಯಗಳನ್ನು ಆಡುವುದು ನಮ್ಮ ನಿಜವಾದ ಸಾಧನೆ. ಆದರೆ ನಾವು ಮತ್ತಷ್ಟು ದೂರವನ್ನು ಸಾಗಬೇಕಿದೆ" ಎಂದಿದ್ದಾರೆ ರೋಹಿತ್ ಶರ್ಮಾ.
"ಇಂದಿನ ಈ ಸೋಲಿನಿಂದಾಗಿ ಕಳೆದ ಎರಡು ವರ್ಷಗಳಲ್ಲಿ ನಾವು ಮಾಡಿದ ಸಾಧನೆಯನ್ನು ಅಲ್ಲಗಲೆಯುವಂರತಿಲ್ಲ. ಒಟ್ಟು ತಂಡದಿಮದ ಬಂದ ಪರಿಶ್ರಮವಿದು. ಆದರೆ ದುರದೃಷ್ಟವಶಾತ್ ಫೈನಲ್ನಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಪ್ರೇಕ್ಷಕರು ಕೂಡ ಅದ್ಭುತವಾಗು ಬೆಂಬಲ ನೀಡಿದ್ದಾರೆ. ಪ್ರತಿ ಸಂದರ್ಭದಲ್ಲಿಯೂ ಅವರು ನಮ್ಮೊಂದಿಗಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.