
ಕೊಲಂಬೋ: ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ವಿವಾದಾತ್ಮಕ ಹೇಳಿಕೆಗಾಗಿ ಗಮನ ಸೆಳೆದಿದ್ದರು. ಶ್ರೀಲಂಕಾಕ್ಕೆ ಪ್ರವಾಸ ಬಂದಿರುವ ತಂಡ ಭಾರತದ ಬಿ ತಂಡ ಎಂಬಂತೆ ರಣತುಂಗ ಹೇಳಿದ್ದರು. ಇದಕ್ಕೆ ರಣತುಂಗ ಅವರ ತಂಡದ ಸಹ ಆಟಗಾರರಾಗಿದ್ದ ಮಾಜಿ ಕ್ರಿಕೆಟರ್ ಅರವಿಂದ ಡಿ ಸಿಲ್ವಾ ತಿರುಗೇಟು ನೀಡಿದ್ದಾರೆ.
"ನಾವು ಈ ಭಾರತೀಯ ತಂಡವನ್ನು ದ್ವಿತೀಯ ದರ್ಜೆಯ ತಂಡ ಎಂದು ಕರೆಯಲು ಸಾಧ್ಯವೇ ಇಲ್ಲ. ಭಾರತದಲ್ಲಿ ಅದ್ಭುತ ಪ್ರತಿಭೆಗಳಿದ್ದಾರೆ. ಈ ತಂಡ ಯಾವುದೇ ತಂಡಕ್ಕೂ ಕಮ್ಮಿಯಿಲ್ಲ. ಸತ್ಯ ಹೇಳಬೇಕೆಂದರೆ ಈ ತಂಡವನ್ನು ಸೋಲಿಸೋದು ನಮಗೆ ಬಲುಕಷ್ಟ," ಎಂದು ಶ್ರೀಲಂಕಾ ಕ್ರಿಕೆಟ್ ಕಮಿಟಿಯಲ್ಲಿರುವ ಅರವಿಂದ ಡಿ ಸಿಲ್ವಾ ಹೇಳಿದ್ದಾರೆ.
ಭಾರತ-ಶ್ರೀಲಂಕಾ ನಡುವಿನ ಸೀಮಿತ ಓವರ್ಗಳ ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ ಡಿ ಸ್ವಿಲ್ವಾ, ಭಾರತ ತಂಡ ಬಲಿಷ್ಠವಾಗಿದೆ ಎಂದಿದ್ದಾರೆ. ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಶಿಖರ್ ಧವನ್ ಪಡೆ ಅಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನಾಡಲಿದೆ.
ಭಾರತೀಯ ಒಂದು ತಂಡ ಇಂಗ್ಲೆಂಡ್ನಲ್ಲಿದ್ದು ಅಲ್ಲಿ ಆಗಸ್ಟ್ 4ರಿಂದ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮೊದಲಾದವರಿದ್ದಾರೆ. ಮತ್ತೊಂದು ತಂಡ ಶ್ರೀಲಂಕಾಕ್ಕೆ ಪ್ರವಾಸ ಹೋಗಿತ್ತು. ಶ್ರೀಲಂಕಾ ಪ್ರಮುಖ ತಂಡಗಳ ವಿರುದ್ಧ ಸೋಲುತ್ತಿದ್ದರಿಂದ ಇದೇ ಕಾರಣಕ್ಕೆ ಭಾರತ ತನ್ನ ಎರಡನೇ ತಂಡವನ್ನು ಲಂಕಾಕ್ಕೆ ಕಳುಹಿಸಿದೆ, ಇದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ಗೆ ಅವಮಾನ ಎಂದು ಅರ್ಜುನ ರಣತುಂಗ ಹೇಳಿದ್ದರು. ರಣತುಂಗ ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು.