
ಕನ್ನಡಿಗ ರಾಬಿನ್ ಉತ್ತಪ್ಪ ಐಪಿಎಲ್ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಕಣಕ್ಕಿಳಿಯುತ್ತಿರುವ ಉತ್ತಪ್ಪ ಮುಂಬರುವ ಐಪಿಎಲ್ ಟೂರ್ನಿ ತುಂಬಾ ವಿಶೇಷವಾದ ಟೂರ್ನಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದಲ್ಲಿ ಖಾಯಂ ಆಟಗಾರನಾಗಿದ್ದ ರಾಬಿನ್ ಉತ್ತಪ್ಪ ಈಗ ಸ್ಥಾನವನ್ನು ಕಳೆದುಕೊಂಡು ಹಲವು ವರ್ಷಗಳೇ ಕಳೆದಿದೆ. ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಮತ್ತೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆಯುವ ಬಯಕೆಯನ್ನು ವ್ಯಕ್ತಡಿಸಿದ್ದರು ರಾಬಿನ್ ಉತ್ತಪ್ಪ. ಈಗ ಇದೇ ಮಾತನ್ನು ಪುನರುಚ್ಛರಿಸಿದ್ದಾರೆ.
ಆವು ಈ ಬಾರಿಯ ಐಪಿಎಲ್ನಲ್ಲಿ ಶ್ರೇಷ್ಠ ಋತುವನ್ನು ಕಾಣಲಿದ್ದೇವೆ ಎಂಬ ಭರವಸೆಯನ್ನು ಹೊಂದಿದ್ದೇವೆ. ಹಾಗಾದಲ್ಲಿ ನನ್ನ ಪಾಲಿಗೆ ಸುಂದರವಾದ ಸಂದರ್ಭಗಳು ಬರಲಿದೆ. ಅದರ ಜೊತೆಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಮತ್ತೆ ಅವಕಾಶವನ್ನು ಪಡೆಯುವ ಅವಕಾಶ ದೊರೆಯಲಿದೆ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್ ಸ್ಮಿತ್ ಅವರ ಜೊತೆಗೆ ಮತ್ತೆ ಐಪಿಎಲ್ನಲ್ಲಿ ಆಡತ್ತಿರುವುದು ನನಗೆ ಕಾತುರತೆಯನ್ನು ಹೆಚ್ಚಿಸಿದೆ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ. ಈ ಹಿಂದೆ ಪುಣೆ ವಾರಿಯರ್ಸ್ ತಂಡದಲ್ಲಿ ಈ ಇಬ್ಬರೂ ಜೊತೆಯಾಗಿ ಕಣಕ್ಕಿಳಿದಿದ್ದರು. ಆದರೆ ಆಟಗಾರನಾಗಿ ಈ ಅವಧಿಯಲ್ಲಿ ಸ್ಮಿತ್ ಸಾಕಷ್ಟು ಬದಲಾವಣೆಯನ್ನು ಹೊಂದಿದ್ದಾರೆ ಎಂದು ಉತ್ತಪ್ಪ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ರಾಬಿನ್ ಉತ್ತಪ್ಪ ಈ ಬಾರಿ ಐಪಿಎಲ್ ನಡೆಯುತ್ತಿರುವುದಕ್ಕೆ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಐಪಿಎಲ್ ಆರಂಭವಾಗುತ್ತಿರುವುದು ಜನರಿಗೂ ಸಾಕಷ್ಟು ನಿರಾಳತೆಯನ್ನು ತರಲಿದೆ, ಇದೊಂದು ಊಹಿಸಲೂ ಅಸಾಧ್ಯವಾದಂತಾ ಸಂದರ್ಭ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.