ಮುಂಬೈ ಇಂಡಿಯನ್ಸ್ ತಂಡವನ್ನು ಗುಜರಾತ್ ಟೈಟನ್ಸ್ ಅಹಮದಾಬಾದ್ನಲ್ಲಿ ಮಣಿಸಿದೆ. ಮುಬೈ ತಂಡವನ್ನು 36 ರನ್ಗಳಿಂದ ಮಣಿಸಿದ ಗುಜರಾತ್ ಆರ್ಭಟಿಸಿದೆ. ಈ ಮೂಲಕ ಶುಭಮನ್ ಗಿಲ್ ಪಡೆ ಲೀಗ್ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಈ ಪಂದ್ಯದಲ್ಲಿ ಗುಜರಾತ್ ಗೆಲುವಿಗೆ ಕಾರಣವಾದ ಅಂಶಗಳು ಯಾವವು? ಯಾವ ಕಾರಣಕ್ಕೆ ಮುಂಬೈ ಸೋಲು ಕಂಡಿದೆ ಎಂಬ ಬಗ್ಗೆ ವರದಿ ಇಲ್ಲಿದೆ.ಶನಿವಾರ ನಡೆದ ಪಂದ್ಯದಲ್ಲಿ ಗುಜರಾತ್ ಸಂಘಟಿತ ಆಟವನ್ನು ಆಡಿ ಗಮನ ಸೆಳೆಯಿತು.
ಬ್ಯಾಟಿಂಗ್ನಲ್ಲಿ ಸಾಯಿ ಸುದರ್ಶನ್ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನೆರವಾದರೆ, ಬೌಲಿಂಗ್ನಲ್ಲಿ ವೇಗದ ಬೌಲರ್ಗಳು ಬಿಗುವಿನ ದಾಳಿ ನಡೆಸಿ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡದತ್ತ ವಾಲದಂತೆ ಮಾಡಿದರು. ಗುಜರಾತ್ ನೀಡಿದ್ದ 197 ರನ್ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ 36 ರನ್ಗಳ ಸೋಲು ಕಂಡಿತು. ಈ ಮೂಲಕ ಮುಂಬೈ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.

ಮುಂಬೈ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಪರ ಸ್ಟಾರ್ ಆಟಗಾರರು ಭರ್ಜರಿ ಆರಂಭ ನಿಡುವಲ್ಲಿ ವಿಫಲರಾದರು. ಮುಂಬೈ ತಂಡದ ಪರ ಸೂರ್ಯಕುಮಾರ್ ಯಾದವ್ (48) ಹಾಗೂ ತಿಲಕ್ ವರ್ಮಾ (39) ಇವರನ್ನು ಹೊರತು ಪಡಿಸಿದರೆ ಬೇರೊಬ್ಬ ಬ್ಯಾಟರ್ ಸ್ಥಿರ ಬ್ಯಾಟಿಂಗ್ ನಡೆಸಲೇ ಇಲ್ಲ. ಇನ್ನು ಮಿಡ್ಲ್ ಓವರ್ಗಳಲ್ಲಿ ರನ್ ಬಾರದೇ ಇರುವುದು ನಿಜಕ್ಕೂ ತಂಡದ ಚಿಂತೆಯನ್ನು ಹೆಚ್ಚಿಸಿತ್ತು.
ಮುಂಬೈ 13 ಓವರ್ಗಳ ವರೆಗೆ 4 ವಿಕೆಟ್ ನಷ್ಟಕ್ಕೆ 108 ರನ್ ಕಲೆ ಹಾಕಿತ್ತು. ಉಳಿದ 42 ಎಸೆತಗಳಲ್ಲಿ 89 ರನ್ ಕಲೆ ಹಾಕುವ ಅವಶ್ಯಕತೆ ಇತ್ತು. ಆದರೆ ಈ ವೇಳೆ ಗುಜರಾತ್ ತಂಡದ ಬೌಲರ್ಗಳು ಬಿಗುವಿನ ದಾಳಿ ನಡೆಸಿ ಗಮನ ಸೆಳೆದರು. 12 ರಿಂದ 16 ಓವರ್ಗಳಲ್ಲಿ ಗುಜರಾತ್ ಬಿಗುವಿನ ದಾಳಿ ನಡೆಸಿ ಜಯದಲ್ಲಿ ಮಿಂಚಿತು. ಇದೇ ವೇಳೆ ರಾಬಿನ್ ಮಿಂಜ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಅವರ ವಿಕೆಟ್ಗಳು ಬಿದ್ದಿರುವುದು ತಂಡಕ್ಕೆ ನುಂಗಲಾರದ ತುತ್ತಾಯಿತು.
ಮಿಡ್ಲ್ ಓವರ್ಗಳಲ್ಲಿ ಬೌಲ್ ಮಾಡಿದ ಕನ್ನಡಿಗ ಪ್ರಸಿದ್ಧ ಕೃಷ್ಣ ಕಮಾಲ್ ಪ್ರದರ್ಶನ ನೀಡಿದರು. ಇವರು ಈ ಹಂತದಲ್ಲಿ ಮೂರು ಓವರ್ ಬೌಲ್ ಮಾಡಿ 8 ರನ್ ನೀಡಿ 2 ವಿಕೆಟ್ ಕಬಳಿಸಿದರು. ಈ ಹಂತದಲ್ಲಿ ಇವರಿಗೆ ಸಾಯಿ ಕಿಶೋರ್ ಸಹ ಉತ್ತಮ ಸಾಥ್ ನೀಡಿದರು. ಇವರು 2 ಓವರ್ ಬೌಲ್ ಮಾಡಿ 15 ರನ್ ನೀಡಿ 1 ವಿಕೆಟ್ ಕಬಳಿಸಿದರು.
12ನೇ ಓವರ್, ಪ್ರಸಿದ್ಧ ಕೃಷ್ಣ, 2 ರನ್, 1 ವಿಕೆಟ್
13ನೇ ಓವರ್, ಸಾಯಿ ಕಿಶೋರ್, 9 ರನ್, 1 ವಿಕೆಟ್
14ನೇ ಓವರ್, ಪ್ರಸಿದ್ಧ ಕೃಷ್ಣ, 4 ರನ್, 0 ವಿಕೆಟ್
15ನೇ ಓವರ್, ಸಾಯಿ ಕಿಶೋರ್, 6 ರನ್, 0 ವಿಕೆಟ್
16ನೇ ಓವರ್, ಪ್ರಸಿದ್ಧ ಕೃಷ್ಣ, 2 ರನ್, 1 ವಿಕೆಟ್