
ಲಂಡನ್, ಜೂನ್ 19: ಕೈಬೆರಳಿನ ಮೂಳೆ ಮುರಿತದ ಸಮಸ್ಯೆ ಕಾರಣ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಬಿಸಿಸಿಐ ಬುಧವಾರ ಅಧಿಕೃತವಾಗಿ ಘೋಷಿಸಿತ್ತು.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಇದರ ಬೆನ್ನಲ್ಲೇ ವಿಶ್ವಕಪ್ ಟೂರ್ನಿಯಲ್ಲಿ ಮುಂದುವರಿಯಲು ಸಾಧ್ಯವಾಗದೇ ಟೂರ್ನಿ ಮಧ್ಯದಲ್ಲೇ ತಾಯ್ನಾಡಿಗೆ ಹಿಂದಿರುವ ಬೇಸರದಲ್ಲಿ33 ವರ್ಷದ ಅನುಭವಿ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್, ತಮ್ಮ ಹಾಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.
ಶಿಖರ್ ಧವನ್ ಅವರ ಭಾವನಾತ್ಮಕ ಸಂದೇಶದ ವಿಡಿಯೊ ಲಿಂಕ್
https://twitter.com/SDhawan25/status/1141351063381041157

ಧವನ್ ತಮ್ಮ ಅದೀಕೃತ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳ ಮೂಲಕ ಏಕಕಾಲದಲ್ಲಿ ವಿಡಿಯೊ ಸಂದೇಶವನ್ನು ರವಾನಿಸಿದ್ದಾರೆ. "ದುರದೃಷ್ಟವಶಾತ್, ನನ್ನ ಹೆಬ್ಬೆರಳು ಸಮಯಕ್ಕೆ ಸರಿಯಾಗಿ ಸರಿ ಹೋಗುವ ಸುಳಿವು ನೀಡುತ್ತಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ನನ್ನ ದೇಶವನ್ನು ಪ್ರತಿನಿಧಿಸಬೇಕೆಂಬ ಹೆಬ್ಬಯಕೆ ನನ್ನಲ್ಲಿತ್ತು. ಇದೀಗ ತಾಯ್ನಾಡಿಗೆ ಹಿಂದಿರುಗಿ ಬಹುಬೇಗನೆ ಚೇತರಿಸಿ ಮುಂದಿನ ಸರಣಿಗಳಿಗೆ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರ ಕಡೆಗೆ ಶ್ರಮಿಸಲಿದ್ದೇನೆ,'' ಎಂದು ಧವನ್ ಸಂದೇಶ ರವಾನಿಸುವಾಗ ಭಾವುಕರಾಗಿದ್ದರು.
"ನಮ್ಮ ಹುಡುಗರು ಅತ್ಯುತ್ತಮ ಆಟವಾಡುತ್ತಿದ್ದಾರೆ. ಗೆಲುವಿನ ಲಯ ಕೂಡ ನಮ್ಮೊಂದಿಗೆ ಇದ್ದು, ಖಂಡಿತವಾಗಿಯೂ ವಿಶ್ವಕಪ್ ಗೆಲ್ಲುತ್ತೇವೆ. ನಮ್ಮ ತಂಡದ ಗೆಲುವಿಗಾಗಿ ಪ್ರಾರ್ಥಿಸಿ ಮತ್ತು ಬೆಂಬಲಿಸುವುದನ್ನು ಮುಂದುವರಿಸಿ. ನಿಮ್ಮ ಬೆಂಬಲ ಮತ್ತು ಪ್ರರ್ಥನೆಯೇ ಬಹಳ ಬಹಳ ಮುಖ್ಯವಾದ ಸಂಗತಿ. ನಿಮ್ಮೆಲ್ಲರ ಪ್ರೀತಿ ಮತ್ತು ಅಪಾರ ಬೆಂಬಲಕ್ಕೆ ಧನ್ಯವಾದಗಳು. ಲವ್ ಯೂ ಆಲ್, ಟೇಕ್ ಕೇರ್,'' ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಇದಕ್ಕೂ ಮುನ್ನ ಗಾಯಾಳು ಧವನ್ ಅವರ ಬದಲಾಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರನ್ನು ಟೀಮ್ ಇಂಡಿಯಾದ 15 ಆಟಗಾರರ ಪಟ್ಟಿಗೆ ಸೇರ್ಪಡೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬಳಿ ಮನವಿ ಮಾಡಿದೆ.
ಧವನ್, ಜೂನ್ 9ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ109 ಎಸೆತಗಳಲ್ಲಿ 117 ರನ್ಗಳ ಅಮೋಘ ಶತಕ ದಾಖಲಿಸಿದ್ದರು. ಇದೇ ಪಂದ್ಯದಲ್ಲಿ ಆಸೀಸ್ನ ವೇಗಿ ಪ್ಯಾಟ್ ಕಮಿನ್ಸ್ ಅವರ ಬೌಲಿಂಗ್ನಲ್ಲಿ ಎಡಗೈನ ಹೆಬ್ಬೆರಳು ಮತ್ತು ತೋರು ಬೆರಳಿನ ನಡುವೆ ಬಲವಾದ ಹೊಡೆತ ತಿಂದಿದ್ದರು. ಬಳಿಕ ಎಕ್ಸ್-ರೇ ಟೆಸ್ಟ್ನಲ್ಲಿ ಯಾವುದೇ ಸಮಸ್ಯೆ ಕಾಣಿಸದೇ ಇದ್ದರು, ಸಿ.ಟಿ. ಸ್ಕ್ಯಾನ್ನಲ್ಲಿ ಮೂಳೆಯಲ್ಲಿ ಕೂದಲು ಗಾತ್ರದ ಬಿರುಕುಂಟಾಗಿರುವುದು ಪತ್ತೆಯಾಗಿತ್ತು.
ಇದರಿಂದಾಗಿ ನ್ಯೂಜಿಲೆಂಡ್ (ಜೂನ್ 13), ಪಾಕಿಸ್ತಾನ (ಜೂನ್ 16), ಅಫಘಾನಿಸ್ತಾನ (ಜೂನ್ 22) ಮತ್ತು ವೆಸ್ಟ್ ಇಂಡೀಸ್ (ಜೂನ್ 27) ವಿರುದ್ಧದ ಪಂದ್ಯಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಲು ಹೆಚ್ಚು ಸಮಯ ಬೇಕಾಗಿರುವ ಕಾರಣ ವಿಶ್ವಕಪ್ನಿಂದಲೇ ನಿರ್ಗಮಿಸಿದ್ದಾರೆ ಎಂದು ಬಿಸಿಸಿಐ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿತ್ತು.
ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಕ್ರಿಕೆಟ್ ಕೂಸು ಅಫಘಾನಿಸ್ತಾನ ವಿರುದ್ಧ ಜೂನ್ 22ರಂದು ಸೌಥಂಪ್ಟನ್ನ ರೋಸ್ಬೌಲ್ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ.