ಅಂಧರ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ವಿಜೇತ ತಂಡಕ್ಕೆ ಅಭಿನಂದನೆಗಳ ಮಹಾಪೋರವೇ ಹರಿದು ಬರುತ್ತಿದೆ. ಶ್ರೀಲಂಕಾದ ಕೋಲಂಬೊದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಭಾರತ ತಂಡವನ್ನು ಕರ್ನಾಟಕದಲ್ಲೂ ಹೃದಯ ಸ್ಪರ್ಷಿ ಸ್ವಾಗತ ನೀಡಲಾಯಿತು. ನೇಪಾಳ ತಂಡವನ್ನು ಮಣಿಸಿದ ಭಾರತ ವನಿತೆಯರು ಅಬ್ಬರಿಸಿದ್ದರು.
ವಿಶ್ವಚಾಂಪಿಯನ್ ತಂಡವನ್ನು ಚೆನ್ನೈನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಸಾಧಕರನ್ನು ಅಭಿಮಾನಿಗಳು ಹೃದಯ ಸ್ಪರ್ಷಿ ಸ್ವಾಗತವನ್ನು ನೀಡಿದರು. ವಿಶ್ವ ಅಂಧರ ಕ್ರಿಕೆಟ್ನಲ್ಲಿ ಭಾರತದ ಘನತೆಯನ್ನು ಹೆಚ್ಚಿಸಿದ ಆಟಗಾರರ್ತಿಯರನ್ನು ಗೌರವಿಸಿದರು.

ಕರ್ನಾಟಕ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆ ಸಹ ಚಾಂಪಿಯನ್ ತಂಡಕ್ಕೆ ಅದ್ಧೂರಿ ಸ್ವಾಗತ ನೀಡಿತು. ಈ ಮೂಲಕ ರಾಜ್ಯ ಎಲ್ಲ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸಾಬೀತು ಪಡಿಸಿತು. ಇದೇ ವೇಳೆ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ಆಟಗಾರ್ತಿಯರಿಗೆ ಹೂಗಳನ್ನು ಹಾಕಿ ಬರಮಾಡಿಕೊಂಡರು. ವಿಶ್ವ ಚಾಂಪಿಯನ್ ತಂಡದ ಆಟಗಾರ್ತಿಯರ ಗುಣಗಾನ ಮಾಡಿದರು.
ಅಂಧರ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡಕ್ಕೆ ದೆಹಲಿ-ಎನ್ಸಿಆರ್ ಮೂಲದ ಚಿಂಟೆಲ್ಸ್ ಗ್ರೂಪ್ನಿಂದ 1 ಲಕ್ಷ ರೂ. ನಗದು ಬಹುಮಾನ ನೀಡಿತು. ಅಲ್ಲದೆ ಲಂಡನ್ ಮೂಲದ ಟೆಕ್ ಸಂಸ್ಥೆ ಚಿಪ್ಲಾಜಿಕ್ 25 ಸಾವಿರ ಬಹುಮಾನವನ್ನು ಘೋಷಿಸಿದೆ.
ಅಂಧರ್ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ 20 ಓವರ್ಗಳಲ್ಲಿ 5 ವಿಕೆಟ್ಗೆ 114 ರನ್ ಸೇರಿಸಿತು. ನೇಪಾಳ ತಂಡದ ಪರ ಬಿಮಲಾ ರೈ 26, ಸರಿತಾ ಘಿಮಿರೆ 35 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 12.1 ಓವರ್ಗಳಲ್ಲಿ 3 ವಿಕೆಟ್ಗೆ 117 ರನ್ ಸೇರಿಸಿತು. ತಂಡದ ಗೆಲುವಿನಲ್ಲಿ ಕರುಣ ಕೆ 42, ಫುಲಾ ಸರೆನ್ ಅಜೇಯ 44 ರನ್ ಸಿಡಿಸಿದರು.