ಕಳೆದ ಭಾನುವಾರ ದುಬೈನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತು. ಫೈನಲ್ ಪಂದ್ಯದಲ್ಲಿ 147 ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ಟೀಮ್ ಇಂಡಿಯಾ 5 ವಿಕೆಟ್ಗಳಿಂದ ಪಂದ್ಯ ಗೆದ್ದು ಬೀಗಿತು. ಪಂದ್ಯದ ಬಳಿಕ ಹೈಡ್ರಾಮ ನಡೆಯಿತು. ಈ ಡ್ರಾಮಾ ಈಗಲೂ ನಡೆಯುತ್ತಲೇ ಇದೆ.
ಏಷ್ಯಾ ಕಪ್ ಟಿ20 ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಿದ್ದಂತೆ ಟೀಮ್ ಇಂಡಿಯಾ ಸಮಾರೋಪ ಸಮಾರಂಭವನ್ನು ಬೈಕಾಟ್ ಮಾಡಿತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಇರುವ ವೇದಿಕೆಯ ಮೇಲೆ ಟೀಮ್ ಇಂಡಿಯಾ ಆಟಗಾರರು ಭಾಗವಹಿಸುವುದಿಲ್ಲ ಎಂಬ ಮಾತುಗಳು ಈ ಮೊದಲೇ ಕೇಳಿ ಬಂದಿದ್ದವು. ಆದರೆ ಆ ಬಳಿಕ ಈ ಸುದ್ದಿ ನಿಜವಾಯಿತು. ಟೀಮ್ ಇಂಡಿಯಾ ಸಮಾರೋಪ ಸಮಾರಂಭವನ್ನು ಬಹಿಷ್ಕರಿಸಿತು. ಈ ಪ್ರಸಂಗ ಪಿಸಿಬಿ ಹಾಗೂ ಮೊಹ್ಸಿನ್ ನಖ್ವಿಗೆ ನುಂಗಲಾಗದ ಬಿಸಿ ತುಪ್ಪದಂತೆ ಭಾಸವಾಯಿತು.

ಮೊಹ್ಸಿನ್ ನಖ್ವಿ ವೇದಿಕೆಯಿಂದ ಕೆಳಗಡೆ ಇಳಿಯುವವರೆಗೂ ಟೀಮ್ ಇಂಡಿಯಾ ಆಟಗಾರರು ಪೋಡಿಯಂ ಮೇಲೆ ಏರಲೇ ಇಲ್ಲ. ಆ ಮೇಲೆ ವೇದಿಕೆ ಖಾಲಿ ಆದ ಮೇಲೆ ಆಟಗಾರರು ಟ್ರೋಫಿ ಎತ್ತಿದಂತೆ ಅಣಕು ಮಾಡಿ ಸಂಭ್ರಮಿಸಿತು. ನಖ್ವಿ ಸಾಹೇಬ್ರು ಟ್ರೋಫಿ ಮೇಲೆ ತಮ್ಮದೇ ಹಕ್ಕು ಇದ್ದವರಂತೆ ಟ್ರೋಫಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ಈ ಘಟನೆ ನಡೆದು ಇಂದಿಗೆ ಎರಡು ದಿನ ಕಳೆದಿವೆ. ಆದರೆ ಈಗ ನಖ್ವಿ ಅವರಿಗೆ ತಾವು ಮಾಡಿದ ತಪ್ಪಿನ ಅರಿವಾದಂತೆ ಕಾಣುತ್ತಿದೆ. ಅದಕ್ಕೆ ನಖ್ವಿ ಅವರು ಟೀಮ್ ಇಂಡಿಯಾಗೆ ಒಂದು ಕಂಡೀಷನ್ ಸಹ ಹಾಕಿದ್ದಾರೆ.
ಟೀಮ್ ಇಂಡಿಯಾ ಆಟಗಾರರಿಗೆ ಹಾಗೂ ತಂಡಕ್ಕೆ ಸಿಗಬೇಕಿದ್ದ ಪದಕಗಳು ಹಾಗೂ ಟ್ರೋಫಿಯನ್ನು ನೀಡಲು ನಾನು ಸಿದ್ಧ. ಏಷ್ಯಾ ಕಪ್ ಟಿ20 ಚಾಂಪಿಯನ್ ಭಾರತಕ್ಕೆ ಇನ್ನೊಂದು ಪ್ರತೇಕ ಸಮಾರಂಭವನ್ನು ಮಾಡಿ ನೀಡಲಾಗುವುದು. ಈ ಸಮಾರಂಭಕ್ಕೆ ಭಾರತದ ನಾಯಕ ಸೇರಿದಂತೆ, ಆಟಗಾರರು ಬರಬೇಕು. ಈ ಸಮಾರಂಭದಲ್ಲೂ ನಾನೇ ಖುದ್ದು ಟ್ರೋಫಿ ನೀಡುವುದಾಗಿ ತಿಳಿಸಿದ್ದಾರೆ. ಈ ಕಂಡೀಷನ್ಗೆ ಟೀಮ್ ಇಂಡಿಯಾ ಒಪ್ಪಿದರೆ ಮಾತ್ರ ಟ್ರೋಫಿ ನೀಡಲು ನಾನು ಸಿದ್ಧ ಎಂದು ನಖ್ವಿ ಹೇಳಿದ್ದಾರೆ.
ನಖ್ವಿ ಅವರಿಗೆ ಕ್ರಿಕೆಟ್ ಅಭಿಮಾನಿಗಳು ನೀಡಿರುವ ಹೊಸ ಹೆಸರು, ತುಂಬ ಭಾರವಾದಂತೆ ಕಾಣುತ್ತಿದೆ. ಅಭಿಮಾನಿಗಳು ಟ್ರೋಫಿ ಚೋರ್ ಎಂದು ಕರೆದಿದ್ದಾರೆ. ಈ ಮುಜುಗರ ತಪ್ಪಿಸಿಕೊಳ್ಳಲು ನಖ್ವಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಆದರೆ ಇದಕ್ಕೆ ಟೀಮ್ ಇಂಡಿಯಾ ಸೊಪ್ಪು ಹಾಕುವ ಲಕ್ಷಣಗಳು ಇಲ್ಲ. ಗೆದ್ದಾಗಲೇ ಬೇಡ ಎಂದ ತಂಡ, ಖಾಸಗಿ ಸಮಾರಂಭದಲ್ಲಿ ಪಡೆಯುವುದು ಡೌಟ್.. ಈ ಬಗ್ಗೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಕೇಳಿದಾಗ ಎಲ್ಇಡಿ ಟಿವಿಗಳ ಮೇಲೆ ಏಷ್ಯಾ ಕಪ್ ಟಿ20 ಚಾಂಪಿಯನ್ ಎಂದು ಬರೆದಿದ್ದು ನಮಗೆ ಸಿಕ್ಕ ದೊಡ್ಡ ಪ್ರಶಸ್ತಿ ಎಂದು ಹೇಳಿದ್ದಾರೆ.