ದಿನೇಶ್ ಕಾರ್ತಿಕ್
ದಶಕಗಳಿಗೂ ಹೆಚ್ಚುಕಾಲ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುವ ಆಟಗಾರ ಅಂದರೆ ಅದು ದಿನೇಶ್ ಕಾರ್ತಿಕ್. ಟಿ20 ಮಾದರಿಯಲ್ಲಿ ದಿನೇಶ್ ಕಾರ್ತಿಕ್ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. 2007 ವಿಶ್ವಕಪ್ ತಂಡದಲ್ಲೂ ದಿನೇಶ್ ಕಾರ್ತಿಕ್ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಚೆನ್ನೈ ಮೂಲದ ದಿನೇಶ್ ಕಾರ್ತಿಕ್ ತವರು ತಂಡವನ್ನು ಮುನ್ನಡೆಸುವ ಅವಕಾಶವನ್ನೇ ಪಡೆದುಕೊಂಡಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮೊದಲ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ತಂಡ ತನ್ನನ್ನು ಖರೀದಿಸಿಯೇ ತೀರುತ್ತದೆ ಎಂಬ ನಂಬಿಕೆಯಲ್ಲಿದ್ದು ಅದು ಹುಸಿಯಾದ ವಿಚಾರವನ್ನು ಹಂಚಿಕೊಂಡಿದ್ದರು. ದಿನೇಶ್ ಕಾರ್ತಿಕ್ ಬದಲಿಗೆ ಧೋನಿಯನ್ನು ಆಯ್ಕೆ ಮಾಡಿದ ಚೆನ್ನೈ ಫ್ರಾಂಚೈಸಿ ನಾಯಕನನ್ನಾಗಿ ಮಾಡಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಹಾಲಿ ನಾಯಕನಾಗಿದ್ದಾರೆ ದಿನೇಶ್ ಕಾರ್ತಿಕ್.
ಆರ್.ಅಶ್ವಿನ್
ಟೀಮ್ ಇಂಡಿಯಾದ ಮತ್ತೋರ್ವ ಸ್ಟಾರ್ ಆಟಗಾರ ಆರ್.ಅಶ್ವಿನ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಚೆನ್ನೈ ಮೂಲದವರೇ ಆದ ಆರ್.ಅಶ್ವಿನ್ ಚೆನ್ನೈ ತಂಡದಲ್ಲಿ ತನ್ನ ಮೊದಲ ಅಭಿಯಾನವನ್ನು 2009ರಲ್ಲಿ ಆರಂಭಿಸಿದರಾದರೂ ನಾಯಕಾಗಿ ಧೋನಿ ಮುನ್ನಡೆಸುತ್ತಿದ್ದರು. 2015ರ ವರೆಗೂ ಚೆನ್ನೈ ತಂಡದ ಭಾಗವಾಗಿದ್ದ ಆರ್ಅಶ್ವಿನ್ ಚೆನ್ನೈ ನಿಷೇಧಕ್ಕೊಳಗಾದಾಗ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವನ್ನು ಸೇರ್ಪಡೆಗೊಂಡರು. ಅದಾದ ಬಳಿಕ 2018ರಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡವನ್ನು ಸೇರ್ಪಡೆಗೊಂಡಿದ್ದಾರೆ. ಆದರೆ ತವರು ತಂಡವಾದ ಚೆನ್ನೈಯನ್ನು ಮುನ್ನಡೆಸುವ ಅವಕಾಶ ಆರ್.ಅಶ್ವಿನ್ ಪಾಲಿಗೆ ಸಿಗಲೇ ಇಲ್ಲ.
ಜಹೀರ್ ಖಾನ್
ಟೀಮ್ ಇಂಡಿಯಾದ ಮಾಜಿ ಆಟಗಾರ ಜಹೀರ್ ಖಾನ್ ಭಾರತ ಕಂಡ ಅತ್ಯಂತ ಪ್ರತಿಭಾನ್ವಿತ ವೇಗದ ಬೌಲರ್. ಮಹಾರಾಷ್ಟ್ರ ಮೂಲದ ಜಹೀರ್ ಖಾನ್ ಕೂಡ ತವರು ತಂಡವನ್ನು ಮುನ್ನಡೆಸದ ದುರದೃಷ್ಟವಂತ ಆಟಗಾರ. ಮುಂಬೈ ತಂಡದಲ್ಲಿ ಜಹೀರ್ ಖಾನ್ ಮೂರು ಅವಧಿಯಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು, 2009, 2010 ಹಾಗೂ 2014ರಲ್ಲಿ ಮುಂಬೈ ತಂಡದ ಪರವಾಗಿ ಆಡಿದ್ದರು. ಆದರೆ ತವರು ನಗರವಾದ ಮುಂಬೈ ತಂಡವನ್ನು ಮುನ್ನಡೆಸಲು ಜಹೀರ್ ಖಾನ್ಗೆ ಅವಕಾಶ ಸಿಗಲಿಲ್ಲ.
ಅಜಿಂಕ್ಯಾ ರಹಾನೆ
ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಕೂಡ ಮುಂಬೈ ಮೂಲದ ಆಟಗಾರ. ಆರಂಭದಲ್ಲಿ ಮುಂಬೈ ತಂಡದಲ್ಲಿ ರಹಾನೆ ಸ್ಥಾನವನ್ನು ಪಡೆದುಕೊಂಡರಾದರೂ ಅಲ್ಲಿ ಹೆಚ್ಚಿನ ಅವಕಾಶಗಳು ರಹಾನೆಗೆ ಸಿಗಲಿಲ್ಲ. ಬಳಿಕ ರಹಾನೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾದರು. ಅಲ್ಲಿ ರಹಾನೆ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ತನ್ನ ತವರೂರಿನ ತಂಡವಾದ ಮುಂಬೈ ತಂಡವನ್ನು ಮುನ್ನಡೆಸುವ ಕನಸು ನನಸಾಗಿಲ್ಲ.
ಕೆಎಲ್ ರಾಹುಲ್
ಟೀಮ್ ಇಂಡಿಯಾದ ಸೀಮಿತ ಓವರ್ನಲ್ಲಿ ಮಿಂಚುಹರಿಸುತ್ತಿರುವ ಆಟಗಾರ ಅಂದರೆ ಅದು ಕರ್ನಾಟಕದ ಕೆಎಲ್ ರಾಹುಲ್. ಆದರೆ ಕೆಎಲ್ ರಾಹುಲ್ ಕೂಡ ತವರು ತಂಡವನ್ನು ಮುನ್ನಡೆಸುವ ಅವಕಾಶ ಸಿಗದ ಆಟಗಾರ. 2013ರಲ್ಲಿ ಐಪಿಎಲ್ ಕೆರಿಯರ್ ಆರಂಭಿಸಿದ ಕೆಎಲ್ ರಾಹುಲ್ ತವರು ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅವಕಾಶವನ್ನು ಪಡೆದುಕೊಂಡರು. ಆದರೆ ಆ ವರ್ಷದಿಂದ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಪೂರ್ಣಕಾಲಿಕ ನಾಯಕನಾದರು. ಆರ್ಸಿಬಿ ತಂಡಕ್ಕೆ ಆ ಬಳಿಕ ಮರಳಿದರಾದರು 2018ರಲ್ಲಿ ಆರ್ಸಿಬಿ ಕೆಎಲ್ ರಾಹುಲ್ ಅವರನ್ನು ರಿಟೈನ್ ಮಾಡಿಕೊಳ್ಳುವ ಮನಸ್ಸು ಮಾಡಲಿಲ್ಲ. 11 ಕೋಟಿ ಮೊತ್ತಕ್ಕೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾದರು ರಾಹುಲ್. ಈಗ ಕೆಎಲ್ ರಾಹುಲ್ ಪಂಜಾಬ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.