
ಬೆಂಗಳೂರು, ಫೆಬ್ರವರಿ 8: ಗುರುವಾರ (ಫೆಬ್ರವರಿ 7) ಬಿಡುಗಡೆಯಾದ 'ನಟ ಸಾರ್ವಭೌಮ' ಸಿನಿಮಾಗೆ ಪ್ರೇಕ್ಷಕರಿಂದ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದ ಕೃಷ್ಣ ಮೂರ್ತಿ ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ಅವರು ''ಇದು ಅದ್ಬುತ ಸಿನಿಮಾ. ಎಲ್ಲರೂ ನೋಡಲೇಬೇಕಾದ ಸಿನಿಮಾ. ಕ್ಲೈಮ್ಯಾಕ್ಸ್ ನನಗೆ ಬಹಳ ಇಷ್ಟ ಆಯ್ತು. ಆಲ್ ದಿ ಬೆಸ್ಟ್ ಸರ್. ಈ ಸಿನಿಮಾ ಎಲ್ಲ ದಾಖಲೆಗಳನ್ನು ಮುರಿಯುವ ಹಾಗೆ ಆಗಲಿ'' ಎಂದು ಶುಭ ಹಾರೈಸಿದ್ದಾರೆ.
ತಮ್ಮ ಬ್ಯುಸಿ ಶೆಡ್ಯೂಲ್ ಗಳ ನಡುವೆಯೂ ಮೊದಲ ದಿನವೇ 'ನಟ ಸಾರ್ವಭೌಮ' ಸಿನಿಮಾವನ್ನು ವೇದ ಕೃಷ್ಣಮೂರ್ತಿ ನೋಡಿದ್ದಾರೆ. ವೇದ ಸಿನಿಮಾ ನೋಡಿದ್ದು ನಿರ್ದೇಶಕ ಪವನ್ ಒಡೆಯರ್ ಅವರಿಗೂ ಖುಷಿ ತಂದಿದೆ. ನಟ ಪುನೀತ್ ರಾಜ್ ಕುಮಾರ್ ಕೂಡ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ವೇದ ಕೃಷ್ಣಮೂರ್ತಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರು. 18 ವರ್ಷದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಿದ್ದರು. ಸದ್ಯ, ವೇದ ತಮ್ಮ ಬ್ಯಾಟಿಂಗ್ ಮೂಲಕ ಜನಪ್ರಿಯತೆ ಪಡೆದಿದ್ದಾರೆ.