
ಸಚಿನ್ ತೆಂಡೂಲ್ಕರ್ ಸ್ನೇಹಿತ ವಿನೋದ್ ಕಾಂಬ್ಲಿ ಸದಾ ನಕಾರಾತ್ಮಕ ಸುದ್ದಿಗಳೊಂದಿಗೆ ಸುದ್ದಿಯಾಗಿರುತ್ತಾರೆ. ಇದೀಗ ಮತ್ತೊಮ್ಮೆ ಕಾಂಬ್ಳಿ ತನ್ನ ಹುಚ್ಚಾಟದ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
ಭಾನುವಾರ ಮಧ್ಯಾಹ್ನ, ಮುಂಬೈನ ತನ್ನ ಸೊಸೈಟಿಯ ಗೇಟ್ನಲ್ಲಿ ಕಾಂಬ್ಳಿ ಒಂದು ಕಾರಿಗೆ ಡಿಕ್ಕಿ ಹೊಡೆದು, ಅಲ್ಲಿನ ನಾಗರೀಕರೊಂದಿಗೆ ರಂಪಾಟ ಮಾಡಿದ್ದರು. ಅದೇ ಆರೋಪದ ಮೇಲೆ ಕಾಂಬ್ಳಿ ಅವರನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ನಡುವೆ ವಿನೋದ್ ಕಾಂಬ್ಳಿ ಅಂದಿನ ಪರಿಸ್ಥಿತಿಯನ್ನು ತೋರಿಸುವ ವಿಡಿಯೋ ಇದೀಗ ವೈರಲ್ ಆಗಿದೆ.
ವಿನೋದ್ ಕಾಂಬ್ಳಿ ವಿರುದ್ಧ ಐಪಿಸಿಯ ಸೆಕ್ಷನ್ 279 (ಅಜಾಗರೂಕತೆಯಿಂದ ಚಾಲನೆ), ಸೆಕ್ಷನ್ 336 ಮತ್ತು ಸೆಕ್ಷನ್ 427 ರ ಅಡಿಯಲ್ಲಿ ಇನ್ನೊಬ್ಬರ ಜೀವಕ್ಕೆ ಅಪಾಯವನ್ನುಂಟುಮಾಡುವ ಆರೋಪ ಹೊರಿಸಲಾಗಿದೆ. ಬಂಧನದ ನಂತರ ಕಾಂಬ್ಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಮುಂಬೈ ಪೊಲೀಸರು, ವಿನೋದ್ ಕಾಂಬ್ಳಿ ಅವರನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಅವರ ವೈದ್ಯಕೀಯ ಪರೀಕ್ಷೆಯನ್ನು ರಕ್ತದ ಮಾದರಿಯನ್ನು ಸಿಎಗೆ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು.
ಇದಷ್ಟೇ ಅಲ್ಲದೆ ವಿನೋದ್ ಕಾಂಬ್ಳಿ ಕೆಲ ತಿಂಗಳ ಹಿಂದೆಯಷ್ಟೇ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದರು. ಡಿಸೆಂಬರ್ 2021 ರಲ್ಲಿ, ಸೈಬರ್ ವಂಚನೆಗೆ ಮಾಜಿ ಎಡಗೈ ಬ್ಯಾಟ್ಸ್ಮನ್ ಕಾಂಬ್ಳಿ ಬಲಿಯಾಗಿದ್ದರು. ತಮ್ಮ ಖಾತೆಯಿಂದ ಒಂದು ಲಕ್ಷ ರೂಪಾಯಿ ಹಣ ಡ್ರಾ ಆಗಿದೆ ಎಂದು ಹೇಳಿದ ಕಾಂಬ್ಳಿ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದರು.