
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಭಾನುವಾರ (ಜೂ. 20) ನಡೆದ ಭಾರತ- ದಕ್ಷಿಣ ಆಫ್ರಿಕಾ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿತು. ಪರಿಣಾಮ ಐದು ಪಂದ್ಯಗಳ ಟಿ20 ಸರಣಿಯು 2-2ರಿಂದ ಸಮಬಲಗೊಂಡಿದ್ದು, ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಇದರ ಜೊತೆಗೆ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಪ್ರೇಕ್ಷಕರು ಕೂರುವ ಗ್ಯಾಲರಿಯಲ್ಲಿ ಅವ್ಯವಸ್ಥೆಯಿಂದಾಗಿ ಪಂದ್ಯ ನೋಡಲು ಆಗಮಿಸಿದ್ದ ಅಭಿಮಾನಿಗಳು ತೊಂದರೆ ಅನುಭವಿಸಬೇಕಾಯಿತು.
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿದ್ದು, ಟೀಂ ಇಂಡಿಯಾವನ್ನ ಬ್ಯಾಟಿಂಗ್ಗೆ ಆಹ್ವಾನಿಸಿತು. ಮಳೆಯಿಂದಾಗಿ ಪಂದ್ಯ ನಿಧಾನಗತಿಯಲ್ಲಿ ಪ್ರಾರಂಭಗೊಂಡು ಒಂದು ಓವರ್ ಕಡಿತಗೊಂಡು 19 ಓವರ್ಗೆ ನಿಗದಿಯಾಯಿತು. ಆದ್ರೆ ಟೀಂ ಇಂಡಿಯಾ 3.3 ಓವರ್ಗಳಿಗೆ 2 ವಿಕೆಟ್ ನಷ್ಟಕ್ಕೆ 28 ರನ್ ಕಲೆಹಾಕಿದ್ದರ ವೇಳೆ ಮಳೆ ನಿಲ್ಲದ ಪರಿಣಾಮ ಪಂದ್ಯವನ್ನ ರದ್ದುಗೊಳಿಸಲಾಗಿದೆ.
ಭಾನುವಾರ, ಅಭಿಮಾನಿಗಳು ಆಟ ಪ್ರಾರಂಭವಾಗುವ ಭರವಸೆಯೊಂದಿಗೆ ಕ್ರೀಡಾಂಗಣದಲ್ಲಿ ಕಾಯುತ್ತಿದ್ದರು. ದುರದೃಷ್ಟವಶಾತ್, ಚಿನ್ನಸ್ವಾಮಿ ಕ್ರೀಡಾಂಗಣದ ಮೇಲ್ಛಾವಣಿಯಲ್ಲಿ ನೀರಿನ ಸೋರಿಕೆಯಿಂದಾಗಿ ಕಾದು ಕುಳಿತಿದ್ದ ಅಭಿಮಾನಿಗಳು ನೆಂದುಕೊಂಡು ಪಂದ್ಯ ನೋಡಬೇಕಾದ ಅನುಭವವು ಅಭಿಮಾನಿಗಳನ್ನ ಕೆರಳಿಸಿದೆ.
ಈ ಕುರಿತಾಗಿ ಶ್ರೀನಿವಾಸ ರಾಮಮೋಹನ್ ಎಂಬ ಟೀಂ ಇಂಡಿಯಾ ಅಭಿಮಾನಿಗಳು ಟ್ವಿಟ್ಟರ್ನಲ್ಲಿ ವೀಡಿಯೋವನ್ನು ಹರಿಬಿಟ್ಟಿದ್ದು, ಸ್ಟೇಡಿಯಂನ ಅವ್ಯವಸ್ಥೆಯನ್ನ ಕ್ರಿಕೆಟ್ ಜಗತ್ತಿನೆದುರು ತೆರೆದಿಟ್ಟಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ಕೋಟಿ ಕೋಟಿ ಆದಾಯಗಳಿಸುತ್ತದೆ. ಆದ್ರೆ ಕ್ರೀಡಾಂಗಣದ ಒಳಗಿನ ಸ್ಥಿತಿ ನಿರಾಶದಾಯಕವಾಗಿದೆ ಎಂದಿದ್ದಾರೆ.
ವಿಶ್ವದ ಶ್ರೀಮಂತ ಮಂಡಳಿ ಮತ್ತು ಈ ರೀತಿಯ ಷರತ್ತುಗಳನ್ನು ಅವರ ಅಭಿಮಾನಿಗಳು ಸಹಿಸಿಕೊಳ್ಳಬೇಕು! @BCCI @kscaofficial1 ಕ್ರೀಡೆಯ ಬೆಳವಣಿಗೆಗೆ ತಕ್ಕಂತೆ ಅಭಿಮಾನಿಗಳ ಅನುಭವವನ್ನು ಯಾವಾಗ ಸುಧಾರಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು, ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐ ಹಾಗೂ ಕೆಎಸ್ಸಿಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.