ಬೆಂಗಳೂರು, ಡಿ. 17: ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡು ಗೆಲುವು ದಾಖಲಿಸಿ ನಂತರ ಎಂಎಸ್ ಧೋನಿ ಟೀಂ ಮುಂದೆ ಮಂಡಿಯೂರಿದ್ದ ಕರ್ನಾಟಕಕ್ಕೆ ಗುರುವಾರ ಲಕ್ ತಿರುಗಿದೆ. ಕೇರಳ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ವಿನಯ್ ಪಡೆ, ಎದುರಾಳಿ ತಂಡವನ್ನು 49 ರನ್ ಗಳ ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ್ದಲ್ಲದೆ, ಭರ್ಜರಿ ಜಯ ದಾಖಲಿಸಿದೆ.
ಕರ್ನಾಟಕ ಕೂಡಾ ಆರಂಭಿಕ ಆಘಾತ ಅನುಭವಿಸಿ, ಮಾಯಾಂಕ್ ಅಗರವಾಲ್ (5) ವಿಕೆಟ್ ಕಳೆದುಕೊಂಡಿತ್ತು. ಆದರೆ, ಕೆಎಲ್ ರಾಹುಲ್ 10 ಎಸೆತಗಳಲ್ಲಿ 19ರನ್ ಹಾಗೂ ಕರುಣ್ ನಾಯರ್ 19 ಎಸೆತಗಳಲ್ಲಿ 24ರನ್ ಗಳಿಸಿ 5.5 ಓವರ್ ಗಳಲ್ಲೇ ಕರ್ನಾಟಕಕ್ಕೆ ಜಯ ತಂದುಕೊಟ್ಟರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೇರಳ ಆರಂಭದಿಂದಲೇ ಶೂನ್ಯ ಸಂಪಾದನೆಯ ಹಾದಿ ಹಿಡಿಯಿತು. ಆರಂಭಿಕ ಆಟಗಾರ ಜಗದೀಶ್, ಭರವಸೆಯ ಯುವ ಪ್ರತಿಭೆ ಸಂಜು ಸಾಮ್ಸನ್, ಪ್ರಶಾಂತ್ ಪದ್ಮನಾಭನ್, ವಾರಿಯರ್ ಸೊನ್ನೆ ಸುತ್ತಿದರು. [ಧೋನಿ ಟೀಂ ಮುಂದೆ ಮಂಡಿಯೂರಿದ ಕರ್ನಾಟಕ]

ಕೇರಳ ಇನ್ನಿಂಗ್ಸ್ ನ ಅತ್ಯಧಿಕ ಮೊತ್ತ 12 ರನ್ ಸಚಿನ್ ಬೇಬಿಯಿಂದ ಬಂತು. 22 ಓವರ್ ಗಳಲ್ಲಿ ಕೇರಳ 49 ಸ್ಕೋರಿಗೆ ಸರ್ವ ಪತನ ಕಂಡಿತು. ಕರ್ನಾಟಕ ಪರ ವಿನಯ್ ಕುಮಾರ್ 5-2-6-2 ಹಾಗೂ ಶ್ರೇಯಸ್ ಗೋಪಾಲ್ 5 ಓವರ್ ಗಳಲ್ಲಿ 5/19 ಗಳಿಸಿದರು. ಮಿಥುನ್ 1 ಹಾಗೂ ಅರವಿಂದ್ ಶ್ರೀನಾಥ್ 2 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.
ಈ ಪಂದ್ಯಕ್ಕೂ ಮುನ್ನ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಕಂಡಿದ್ದ ಕರ್ನಾಟಕಕ್ಕೆ ಗೆಲುವು ಅನಿವಾರ್ಯವಾಗಿದೆ. ಮುಂದಿನ ಪಂದ್ಯ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಡಲಿದೆ. ಪ್ರತಿ ತಂಡ 6 ಪಂದ್ಯಗಳನ್ನು ಲೀಗ್ ಹಂತದಲ್ಲಿ ಆಡಲಿದ್ದು, ಗುಂಪಿನ ಟಾಪ್ 2 ತಂಡಗಳು ಕ್ವಾರ್ಟರ್ ಫೈನಲ್ ತಲುಪಲಿವೆ.
ಕರ್ನಾಟಕ ಈಗಾಗಲೇ ರಣಜಿ ಟ್ರೋಫಿಯಿಂದ ಹೊರಬಿದ್ದಿದೆ. ಬಿ ಗುಂಪಿನಲ್ಲಿರುವ ಗುಜರಾತ್ ಹಾಗೂ ಜಾರ್ಖಂಡ್ ಉತ್ತಮ ರನ್ ಸರಾಸರಿ ಹೊಂದಿವೆ. ಕರ್ನಾಟಕಕ್ಕೆ 0.010 ರನ್ ಸರಾಸರಿಯೊಂದಿಗೆ ಅದೃಷ್ಟದ ಬೆಂಬಲವೂ ಬೇಕಿದೆ.
ಇನ್ನೊಂದೆಡೆ ತ್ರಿಪುರ ತಂಡವನ್ನು 22.2 ಓವರ್ ಗಳಲ್ಲಿ 58ರನ್ನಿಗೆ ಆಲೌಟ್ ಮಾಡಿದ ಬರೋಡಾ ತಂಡ 6.1 ಓವರ್ ಗಳಲ್ಲೇ 61/4 ಸ್ಕೋರ್ ಮಾಡಿ ಭರ್ಜರಿ ಜಯ ದಾಖಲಿಸಿದೆ.