Vijay Hazare Trophy: ಸೆಮಿಫೈನಲ್ನಲ್ಲಿ ಸೋತ ಕರ್ನಾಟಕ; ಫೈನಲ್ಗೇರಿದ ಸೌರಾಷ್ಟ್ರ

ಬುಧವಾರ (ನವೆಂಬರ್ 30) 2022ರ ವಿಜಯ್ ಹಜಾರೆ ಟ್ರೋಫಿಯ ಮೊದಲ ಸೆಮಿಫೈನಲ್ನಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡವು ಜಯದೇವ್ ಉನಾದ್ಕತ್ ನಾಯಕತ್ವದ ಸೌರಾಷ್ಟ್ರ ವಿರುದ್ಧ ಹೀನಾಯ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ.
ಇದೇ ವೇಳೆ ಸೌರಾಷ್ಟ್ರ ತಂಡ 2022ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಫೈನಲ್ ತಲುಪಿದ್ದು, ಪ್ರಶಸ್ತಿ ಹಣಾಹಣಿಯಲ್ಲಿ ಮಹಾರಾಷ್ಟ್ರ ತಂಡವನ್ನು ಡಿಸೆಂಬರ್ 2ರ ಶುಕ್ರವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಎದುರಿಸಲಿದೆ.
ವಿಜಯ್ ಹಜಾರೆ ಟ್ರೋಫಿಯ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕ ತಂಡ ಸೆಮಿಫೈನಲ್ ಹಂತದಲ್ಲಿ ಎಡವಿತು. ಪ್ರತಿ ಬಾರಿಯೂ ಪ್ರಮುಖ ಪಂದ್ಯದಲ್ಲಿ ಕರ್ನಾಟಕ ತಂಡದ ಬ್ಯಾಟಿಂಗ್ ಕೈಕೊಡುತ್ತಿರುವುದು ಚಿಂತಾಜನಕವಾಗಿದೆ.

ಕರ್ನಾಟಕ 49.1 ಓವರ್ಗಳಲ್ಲಿ 171 ರನ್ ಗಳಿಸಿ ಸರ್ವಪತನ
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 49.1 ಓವರ್ಗಳಲ್ಲಿ 171 ರನ್ ಗಳಿಸಿ ಸರ್ವಪತನ ಕಂಡಿತು. 172 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ ಸೌರಾಷ್ಟ್ರ 36.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಗೆಲುವಿನ ಗಡಿ ದಾಟಿತು.
ಕರ್ನಾಟಕ ಪರ ಬ್ಯಾಟಿಂಗ್ನಲ್ಲಿ ಆರಂಭಿಕ ಆಟಗಾರ ಆರ್ ಸಮರ್ಥ್ 135 ಎಸೆತಗಳಲ್ಲಿ 88 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು. ಉಳಿದ ಬ್ಯಾಟರ್ಗಳಾರು ಅವರಿಗೆ ಸಾಥ್ ನೀಡಲಿಲ್ಲ. ನಾಯಕ ಮತ್ತು ಅನುಭವಿ ಬ್ಯಾಟರ್ ಮಯಾಂಕ್ ಅಗರ್ವಾಲ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಮನೀಶ್ ಪಾಂಡೆ ಸೊನ್ನೆಗೆ ಔಟ್
ಇನ್ನು ಕರ್ನಾಟಕದ ಮಾಜಿ ನಾಯಕ ಮನೀಶ್ ಪಾಂಡೆ ಮತ್ತು ಕೃಷ್ಣಪ್ಪ ಗೌತಮ್ ಮಹತ್ವದ ಪಂದ್ಯದಲ್ಲಿ ಸೊನ್ನೆಗೆ ಔಟಾಗಿದ್ದು, ಕರ್ನಾಟಕದ ಫೈನಲ್ ಆಸೆಯನ್ನು ಚಿವುಟಿ ಹಾಕಿತು.
ಶರತ್ ಬಿಆರ್(3), ನಿಕಿನ್ ಜೊಸ್ (12), ಶ್ರೇಯಸ್ ಗೋಪಾಲ್(9), ಮನೋಜ್ ಬಾಂಡಗೆ (22), ರೋನಿತ್ ಮೋರೆ (16), ವಿ ಕೌಶಿಕ್ (4) ಮತ್ತು ವಿಧ್ವತ್ ಕಾವೇರಪ್ಪ ಅಜೇಯ (4) ರನ್ ಗಳಿಸಿದರು.
ಮಹಾರಾಷ್ಟ್ರ ಪರ ಬೌಲಿಂಗ್ನಲ್ಲಿ ನಾಯಕ ಜಯದೇವ್ ಉನಾದ್ಕತ್ 10 ಓವರ್ಗಳಲ್ಲಿ 26 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು. ಪ್ರೇರಕ್ ಮಂಕಡ್ 8 ಓವರ್ಗಳಲ್ಲಿ 34 ರನ್ ನೀಡಿ 2 ವಿಕೆಟ್ ಕಿತ್ತರು. ಉಳಿದಂತೆ ಕುಶಾಂಗ್ ಪಟೇಲ್ ಮತ್ತು ಪಾರ್ಥ್ ಭಟ್ ತಲಾ ಒಂದೊಂದು ವಿಕೆಟ್ ಪಡೆದರು.
ಜಯದೇವ್ ಉನಾದ್ಕತ್ ಪಂದ್ಯಶ್ರೇಷ್ಠ ಪ್ರಶಸ್ತಿ
ಇನ್ನು ಮಹಾರಾಷ್ಟ್ರ ಬ್ಯಾಟಿಂಗ್ನಲ್ಲಿ ಮೊದಲ ಓವರ್ನಲ್ಲಿ ಆರಂಭಿಕ ವಿಕೆಟ್ ಕಳೆದುಕೊಂಡರೂ, ನಂತರ ಸುಧಾರಿಸಿತು. ಜಯ್ ಗೋಹಿಲ್ 82 ಎಸೆತಗಳಲ್ಲಿ 61 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇನ್ನು ಸಮರ್ಥ ವ್ಯಾಸ್(33), ಪ್ರೇರಕ್ ಮಂಕಡ್(35), ವಾಸವಡ (25) ಮತ್ತು ಚಿರಾಗ್ ಜನಿ 13 ರನ್ ಗಳಿಸಿ ಗೆಲುವಿನ ಕೊಡುಗೆ ನೀಡಿದರು. 4 ವಿಕೆಟ್ ಪಡೆದಿದ್ದ ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕತ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಕರ್ನಾಟಕ ಪರ ಬೌಲಿಂಗ್ನಲ್ಲಿ ಸ್ಪಿನ್ನರ್ ಕೃಷ್ಣಪ್ಪ ಗೌತಮ್ 9.2 ಓವರ್ಗಳಲ್ಲಿ 50 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ವಿಧ್ವತ್ ಕಾವೇರಪ್ಪ, ವಾಸುಕಿ ಕೌಶಿಕ್ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications