ಬೆಂಗಳೂರು, ಡಿ. 10: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿ ಗುರುವಾರ ಆರಂಭಗೊಂಡಿತು. ಕರ್ನಾಟಕ ತನ್ನ ಮೊದಲ ಪಂದ್ಯವನ್ನು ರೈಲ್ವೆಸ್ ವಿರುದ್ಧ ಆಡಿತು. ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕರ್ನಾಟಕ ನಿಗದಿತ 50 ಓವರ್ ಗಳಲ್ಲಿ 228/9 ಸ್ಕೋರ್ ಮಾಡಿತ್ತು. ಕೊನೆ ಕ್ಷಣದವರೆಗೂ ರೋಚಕ ಉಳಿಸಿಕೊಂಡ ಪಂದ್ಯದಲ್ಲಿ 9 ವಿಕೆಟ್ ಕಳೆದುಕೊಂಡು ರೈಲ್ವೆಸ್ ತಂಡ 232ರನ್ ಸ್ಕೋರ್ ಮಾಡಿ ಗೆಲುವು ದಾಖಲಿಸಿದೆ.
ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರ್ ವಾಲ್ 44 ಗಳಿಸಿ ಔಟಾದರೆ, ಕೆಎಲ್ ರಾಹುಲ್ 27, ಕರುಣ್ ನಾಯರ್ 20 ರನ್ ಗಳಿಸಿ ಔಟಾದರು. ಮನೀಶ್ 2 ರನ್ ಗಳಿಸಿ ನಿರಾಶೆ ಮೂಡಿಸಿದರು.

ರೈಲ್ವೆಸ್ ಪರ ಎಆರ್ ಪಾಂಡೆ 45/3, ಆಶೀಶ್ ಯಾದವ್ 25/3 ಗಳಿಸಿ ಕರ್ನಾಟಕದ ರನ್ ಗಳಿಕೆ ವೇಗಕ್ಕೆ ಬ್ರೇಕ್ ಹಾಕಿದರು. ಕರಣ್ ಶರ್ಮ 2 ವಿಕೆಟ್ ಪಡೆದರೆ, ಅನುರೀತ್ ಸಿಂಗ್ 1 ವಿಕೆಟ್ ಗಳಿಸಿದರು.ಗಾಯಾಳುವಾಗಿರುವ ರಾಬಿನ್ ಉತ್ತಪ್ಪ ಈ ಪಂದ್ಯದಲ್ಲಿ ಆಡುತ್ತಿಲ್ಲ.
ಕರ್ನಾಟಕ ತಂಡ : ಕೆಎಲ್ ರಾಹುಲ್, ಮಾಯಾಂಕ್ ಅಗರವಾಲ್, ಕರುಣ್ ನಾಯರ್, ಮನೀಶ್ ಪಾಂಡೆ, ಮಿಥುನ್, ಸ್ಟುವರ್ಟ್ ಬಿನ್ನಿ, ಅರವಿಂದ್ ಶ್ರೀನಾಥ್, ಸುಚಿತ್ ಜೆ, ಅನಿರುದ್ಧ ಜೋಶಿ, ವಿನಯ್ ಕುಮಾರ್, ಸಿಎಂ ಗೌತಮ್.[ಬೆಂಗಳೂರಲ್ಲಿ ಧೋನಿ ಬ್ಯಾಟಿಂಗ್ ತಪ್ಪದೇ ನೋಡಿ]

ಬಿಸಿಸಿಐ 50 ಓವರ್ಗಳ ಟೂರ್ನಿ ವಿಜಯ್ ಹಜಾರೆ ಟ್ರೋಫಿಯನ್ನು ಕಳೆದ ಎರಡು ವರ್ಷಗಳಿಂದ ವರ್ಷದ ಕೊನೆಯಲ್ಲಿ ನಡೆಸುತ್ತಿದೆ. ಈ ವರ್ಷ 27 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತಿ ಗುಂಪಿನಲ್ಲಿ 7 ತಂಡಗಳಿವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್ಗೆ ಅರ್ಹತೆ ಪಡೆಯುತ್ತವೆ. ಬೆಂಗಳೂರು, ರಾಜ್ಕೋಟ್, ಹೈದರಾಬಾದ್ ಹಾಗೂ ದಿಲ್ಲಿಯಲ್ಲಿ ಟೂರ್ನಿ ನಡೆಯಲಿದೆ.
ಈ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ ಎಂಎಸ್ ಧೋನಿ, ಆರ್. ಅಶ್ವಿನ್, ಶಿಖರ್ ಧವನ್, ಸುರೇಶ್ ರೈನಾ, ಯುವರಾಜ್ ಸಿಂಗ್, ಕೆಎಲ್ ರಾಹುಲ್, ಸ್ಟುವರ್ಟ್ ಬಿನ್ನಿ, ಗೌತಮ್ ಗಂಭೀರ್, ಇಶಾಂತ್ ಶರ್ಮ, ಮುಹಮ್ಮದ್ ಶಮಿ ಭಾಗವಹಿಸುವ ಮೂಲಕ ಟೂರ್ನಿಯ ಕಳೆ ಹೆಚ್ಚಿದೆ.