
ನವದೆಹಲಿ, ಮಾರ್ಚ್ 6: ನಾಗ್ಪುರದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 8 ರನ್ ಜಯ ದಾಖಲಿಸುವಲ್ಲಿ ವಿರಾಟ್ ಕೊಹ್ಲಿಯ ಶತಕ ನೆರವಾಗಿದ್ದು ನಿಜ. ಆದರೆ ಪಂದ್ಯದ ಗೆಲುವಿನ ನಿಜವಾದ ರುವಾರಿ ವಿಜಯ್ ಶಂಕರ್. ಹೀಗಾಗಿ ಟೀಮ್ ಇಂಡಿಯಾ ನಾಯಕ ಕೊಹ್ಲಿ, ವಿಜಯ್ಗೆ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ.
ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ನಡೆಸಿಕೊಡುವ 'ಚಾಹಲ್ ಟಿವಿ' ಜೊತೆ ಮಂಗಳವಾರ (ಮಾ.5) ಪಂದ್ಯದ ಬಳಿಕ ಮಾತನಾಡುತ್ತ ಕೊಹ್ಲಿ, 'ಉತ್ತಮ ಬ್ಯಾಟಿಂಗ್ ಮತ್ತು ಕೊನೇ ಓವರ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಕ್ಕೆ ವಿಜಯ್ ಶಂಕರ್ಗೆ ವಿಶೇಷ ಅಭಿನಂದನೆ ಸಲ್ಲಿಸಬಯಸಿದ್ದೇನೆ. ಅಂಥ ಒತ್ತಡದ ಸಂದರ್ಭವನ್ನು ನಾವು ಸಮರ್ಥವಾಗಿ ನಿಭಾಯಿಸಬೇಕಿರುತ್ತೆ. ಅದನ್ನು ವಿಜಯ್ ಮಾಡಿದ್ದಾರೆ' ಎಂದಿದ್ದಾರೆ.
ವಿಜಯ್ ಶಂಕರ್ಗೆ ಇಂಗ್ಲೀಷ್ನಷ್ಟು ಸುಲಭವಾಗಿ ಹಿಂದಿ ಮಾತನಾಡಲು ಬರೋಲ್ಲ. ಹೀಗಾಗಿ ವಿಜಯ್ ಕಾಲೆಳೆಯಲು ಮುಂದಾದ ಚಾಹಲ್, 'ನಿಮಗೆ ಕೊನೆಯ ಓವರ್ ಕಷ್ಟ ಅನ್ನಿಸಿತ್ತ ಅಥವಾ ಇದು ಹಿಂದಿ ಚಾನೆಲ್ ಆಗಿರೋದ್ರಿಂದ ಇಲ್ಲಿ ಹಿಂದಿ ಮಾತನಾಡೋದು ಕಷ್ಟಾನಾ?' ಎಂದು ಪ್ರಶ್ನಿಸಿದರು. ಇದಕ್ಕೆ ವಿಜಯ್, 'ಹಿಂದಿ ಮಾತನಾಡುವುದು' ಎಂದಾಗ ಚಾಹಲ್ ಮತ್ತು ಜೊತೆ ನಿಂತಿದ್ದ ಕೊಹ್ಲಿ ಇಬ್ಬರೂ ಹಲ್ಲುಬಿಟ್ಟರು.
ಕೊಹ್ಲಿ ಶತಕದ ನೆರವಿನಿಂದ ಆರಂಭಿಕ ಇನ್ನಿಂಗ್ಸ್ನಲ್ಲಿ ಭಾರತ 48.2 ಓವರ್ಗೆ ಎಲ್ಲಾ ವಿಕೆಟ್ ಕಳೆದು 250 ರನ್ ಬಾರಿಸಿತು. ಅಂತಿಮ ಓವರ್ನಲ್ಲ ವಿಜಯ್ ಎರಡು ವಿಕೆಟ್ ಕೆಡವಿದ್ದರಿಂದ ಆಸ್ಟ್ರೇಲಿಯಾ 49.3 ಓವರ್ಗೆ ಎಲ್ಲಾ ವಿಕೆಟ್ ಕಳೆದು 242 ರನ್ ಪೇರಿಸಿ ಶರಣಾಯಿತು. ಕೊಹ್ಲಿ ಇಲ್ಲಿ ಶಂಕರ್ಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಇದು ಭಾರತದ 500ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಗೆಲುವಾಗಿತ್ತು!