
ಕರ್ನಾಟಕದ ಮಾಜಿ ನಾಯಕ ವಿನಯ್ ಕುಮಾರ್ ಅವರ ಪುದುಚೇರಿ ತಂಡದ ಜೊತೆಗಿನ ಒಂದು ವರ್ಷದ ಒಪ್ಪಂದ ಅಂತ್ಯವಾಗಿದೆ. ಈಗ ಅವರ ಮುಂದಿನ ಪ್ರಥಮ ದರ್ಜೆ ಕ್ರಿಕೆಟ್ ಭವಿಷ್ಯ ಅಸ್ಪಷ್ಟವಾಗಿದ್ದು ಮುಂದೆ ಯಾವ ನಿರ್ಧಾರವನ್ನು ವಿನಯ್ ಕುಮಾರ್ ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಈ ಸಂದರ್ಭದಲ್ಲಿ ಮತ್ತೆ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತೀರಾ ಎಂಬ ಪ್ರಶ್ನೆಗೆ ವಿನಯ್ ಕುಮಾರ್ ಸ್ಪಷ್ಟವಾಗಿ ಉತ್ತರವನ್ನು ನೀಡಿದ್ದಾರೆ. ಕರ್ನಾಟಕ ತಂಡದ ಪರವಾಗಿ ಆಡಲು ನಾನು ಯಾವುದೇ ಸಂದರ್ಭದಲ್ಲೂ ಸಂತಸಪಡುತ್ತೇನೆ. ಆದರೆ ಕಳೆದ ವರ್ಷ ನಾನು ತಂಡವನ್ನು ತೊರೆದಿದ್ದು ಯುವ ಆಟಗಾರರಿಗೆ ಅವಕಾಶವನ್ನು ನೀಡುವ ಸಲುವಾಗಿ. ಮತ್ತೆ ತಂಡಕ್ಕೆ ಬಂದರೆ ಅವರ ಅವಕಾಶಕ್ಕೆ ತಡೆಯಾಗುತ್ತೇನೆ ಎಂದಿದ್ದಾರೆ ವಿನಯ್ ಕುಮಾರ್.
ಕಳೆದ ವರ್ಷ ಕರ್ನಾಟಕ ತಂಡದ ಬೌಲರ್ಗಳು ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿದ್ದಾರೆ. ಹಾಗಾಗಿ ಮತ್ತೆ ಆಡಬೇಕಾ.. ಗೊತ್ತಿಲ್ಲ, ಅದು ನನ್ನ ಉದ್ದೇಶವನ್ನು ಈಡೇರಿಸುವುದಿಲ್ಲ ಎಂದು ವಿನಯ್ ಕುಮಾರ್ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಈ ವರ್ಷ ಪುದುಚೇರಿ ತಂಡ ಶೆಲ್ಡನ್ ಜಾಕ್ಸನ್, ಪರಾಸ್ ಡೋಗ್ರಾ ಮತ್ತು ಪಂಕಜ್ ಸಿಂಗ್ ಅವರನನ್ನು ಹೊರ ರಾಜ್ಯದ ಆಟಗಾರರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಹೊರ ರಾಜ್ಯದ ಮೂವರು ಆಟಗಾರರಿಗೆ ಮಾತ್ರವೇ ತಂಡದಲ್ಲಿ ಅವಕಾಶವಿರುವ ಹಿನ್ನೆಲೆಯಲ್ಲಿ ವಿನಯ್ ಕುಮಾರ್ ಪುದುವೇರಿ ಜೊತೆಗೆ ಮುಂದುವರಿಯುವ ಸಾಧ್ಯತೆಗಳು ಇಲ್ಲವಾಗಿರುವುದರಿಂದ ವಿನಯ್ ನಡೆ ಕುತೂಹಲಕಾರಿಯಾಗಿದೆ.
ಪುದುಚೇರಿ ತಂಡವನ್ನು ಕಳೆದ ವರ್ಷ ವಿನಯ್ ಕುಮಾರ್ ಸೇರಿಕೊಳ್ಳುವ ಮುನ್ನ ಕರ್ನಾಟಕ ತಂಡವನ್ನು ಕಳೆದ ಹದಿನೈದು ವರ್ಷಗಳಿಂದ ಪ್ರತಿನಿಧಿಸಿದ್ದರು. ಆದರೆ ಕರ್ನಾಟಕ ತಂಡದಲ್ಲಿ ಮುಂದುವರಿದರೆ ಯುವ ಆಟಗಾರರ ಅವಕಾಶವನ್ನು ಕಸಿದುಕೊಂಡಂತಾಗುತ್ತದೆ ಎಂಬ ಕಾರಣಕ್ಕೆ ವಿನಯ್ ಕಳೆದ ವರ್ಷ ಬೇರೆ ತಂಡವನ್ನು ಪ್ರತಿನಿಧಿಸುವ ನಿರ್ಧಾರವನ್ನು ಕೈಗೊಂಡಿದ್ದರು.