ಬೆಂಗಳೂರು, ಮಾ, 28: 'ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು' ಎಂಬ ಮಾತು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ವಿಷಯದಲ್ಲಿ ನಿಜವಾಗಿದೆ. ಭಾರತ ವಿಶ್ವಕಪ್ ಅಭಿಯಾನದಿಂದ ಹೊರಬೀಳಲು ಅನುಷ್ಕಾ ಶರ್ಮಾ ನೇ ಕಾರಣ ಎಂದು ಅಭಿಮಾನಿಗಳು ಬೀದಿಗೀಳಿದು ಗಲಾಟೆ ಮಾಡಿದ್ದಕ್ಕೆ ಈ ಜೋಡಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಆಸ್ಟ್ರೇಲಿಯಾದಿಂದ ಇಬ್ಬರು ಒಟ್ಟಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಸಾಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿವೆ. ನನಗೆ ನೀನು, ನಿನಗೆ ನಾನು ಎಂಬ ಭಾವನೆ ಅವರ ಮುಖದಲ್ಲಿ ಇರುವುದನ್ನು ಸ್ಪಷ್ಟವಾಗಿನ ಗುರುತಿಸಬಹುದಾಗಿದೆ.[ಕೊಹ್ಲಿ- ಅನುಷ್ಕಾ ತೆಗಳುವುದನ್ನು ನಿಲ್ಲಿಸ್ರಪ್ಪ ಸಾಕು!]

ಸೆಮಿಫೈನಲ್ ಪಂದ್ಯ ಸೋತ ನಂತರ ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚಾಗಿದ್ದವು. ಜನರು ಕ್ರಿಕೆಟ್ ಆಟಗಾರರ ಜತೆ ಅನುಷ್ಕಾ ಶರ್ಮಾ ಫೋಟೋವನ್ನು ಸುಟ್ಟಿದ್ದರು. ಮಾಜಿ ನಾಯಕ ಸೌರವ್ ಗಂಗೂಲಿ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಅನುಷ್ಕಾ ಪರ ಬ್ಯಾಟ್ ಬೀಸಿದ್ದರು. ಭಾರತ ಸೋಲುವುದಕ್ಕೂ 'ಪ್ರೇಮ ಕಥೆಗೂ' ಸಂಬಂಧ ಇಲ್ಲ ಎಂದು ಹೇಳಿದ್ದರು.[ಟೀಕೆ ಮಾಡೋದು ಬಿಡಿ, ಧೋನಿ ಪಡೆಗೆ ಬೆನ್ನು ತಟ್ಟಿ]
ಸೆಮಿಫೈನಲ್ ಪಂದ್ಯ ವೀಕ್ಷಿಸಲು ಆಸ್ಟ್ರೇಲಿಯಾಕ್ಕೆ ತೆರಳಿದ್ದ ಅನುಷ್ಕಾ ಶರ್ಮಾ ಈಗ ಪ್ರಿಯಕರನೊಂದಿಗೆ ತವರಿಗೆ ಮರಳಿದ್ದಾರೆ. ಬೆರಳಲ್ಲಿ ಬೆರಳು ಸೇರಿಸಿ ಹೆಜ್ಜೆ ಹಾಕುತ್ತಿರುವ ದೃಶ್ಯ ಪ್ರೀತಿಯ ಅಗಾಧತೆಗೆ ಸಾಕ್ಷಿಯಾಗಿದೆ.
ಕೊಂಚ ಸೊರಗಿದಂತೆ ಕಂಡುಬಂದ ಅನುಷ್ಕಾ ಅವರನ್ನು ಸ್ವತಃ ಕೊಹ್ಲಿಯೇ ಮುಂದಾಗಿ ಕಾರ್ ನಲ್ಲಿ ಕುಳ್ಳಿರಿಸಿದರು. ಪ್ರೀತಿ ನೀನಿಲ್ಲದೇ ನಾನು ಹೇಗಿರಲಿ, ಪ್ರೀತಿ ನೀನ್ನೊಂದಿಗೆ ನನ್ನ ಬಾಳಿರಲಿ ಎನ್ನುತ್ತ ಮೀರಾ-ಮಾಧವ ಜೋಡಿ ಕಾರು ಏರಿ ಮನೆಯ ದಾರಿ ಹಿಡಿಯಿತು.