ಲಂಡನ್, ಜೂನ್ 02: ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಕಲಹ ಧಾರಾವಾಹಿಯಂತೆ ಸಾಗುತ್ತಿದೆ. ಕುಂಬ್ಳೆ ಅವರನ್ನು ಕೋಚ್ ಆಗಿ ನೇಮಿಸುವುದು ವಿರಾಟ್ ಕೊಹ್ಲಿಗೆ ಬೇಕಿರಲಿಲ್ಲ.
ಕೊಹ್ಲಿ ಅವರು ಟೆಸ್ಟ್ ತಂಡದ ನಾಯಕರಾದಾಗಿನಿಂದಲೂ ಮಾಜಿ ನಾಯಕ ರವಿಶಾಸ್ತ್ರಿ ಅವರು ಕೋಚ್ ಆಗಲಿ ಎಂದು ಬಯಸಿದ್ದರು. ಅವರಿಬ್ಬರ ನಡುವೆ ಉತ್ತಮ ಸಂವಹನವಿತ್ತು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದಾರೆ.[ಕುಂಬ್ಳೆ-ಕೊಹ್ಲಿ ಕಲಹ ನಿನ್ನೆ ಮೊನ್ನೆಯದ್ದಲ್ಲ, ತುಂಬಾ ಹಳೆ ಕಿರಿಕ್!]
ಅಂದಿನ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಕೋಚ್ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿರುವ ಕ್ರಿಕೆಟ್ ಸಮಿತಿಗೆ ನೀಡಿದ್ದರು. ಈ ಸಮಿತಿ ಆಯ್ಕೆಯಂತೆ ಕುಂಬ್ಳೆ ಅವರನ್ನು ಒಂದು ವರ್ಷದ ಅವಧಿಗೆ ನೇಮಿಸಲಾಯಿತು. ಆದೆರ್, ಕೊಹ್ಲಿ ಅವರು ನಾಯಕರಾಗಿ ತಮ್ಮ ಅಭಿಪ್ರಾಯಪ ಮಂಡಿಸುವಾಗ ಅಂದಿನ ಟೀಂ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಅವರೇ ಕೋಚ್ ಆಗಲು ಸೂಕ್ತ ಎಂದಿದ್ದರು.[ಅನಿಲ್ ಕುಂಬ್ಳೆ ವಿರುದ್ಧ ಟೀಂ ಇಂಡಿಯಾ ಆಟಗಾರರ ದೂರು]

ನಾಯಕ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ನಡುವಿನ ವಿರಸದ ಬಗ್ಗೆ ದಿನಕ್ಕೊಂದು ಕತೆಗಳು ಬರುತ್ತಿವೆ. ಟೀಂ ಇಂಡಿಯಾ ಆಟಗಾರರು, ಕುಂಬ್ಳೆ ವಿರುದ್ಧ ಬಿಸಿಸಿಸಿಗೆ ದೂರು ನೀಡಿರುವ ಸುದ್ದಿ ಬಂದ ಬಳಿಕ ಕ್ರಿಕೆಟ್ ಜಗತ್ತಿನ ಸಂಚಲನ ಮೂಡಿಸಿದೆ. ಇವರಿಬ್ಬರ ನಡುವಿನ ಕಲಹ ಐಪಿಎಲ್ ಸೀಸನ್ 1ನಿಂದಲೂ ಇದೆ ಎಂದು ಆರ್ ಸಿಬಿಯ ಮೊದಲ ಕೋಚ್ ರೇ ಜೆನ್ನಿಂಗ್ಸ್ ಹೇಳಿದ್ದಾರೆ. ಇದೀಗ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಅನಿಲ್ ಕುಂಬ್ಳೆ ಪರ ನಿಂತಿದ್ದಾರೆ.