
ಬೆಂಗಳೂರು, ಸೆಪ್ಟೆಂಬರ್ 29: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಶನಿವಾರದಂದು ಪ್ರಕಟಿಸಲಾಗಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ತಂಡದಿಂದ ಹೊರಗಿಡಲಾಗಿದ್ದು, ಕರ್ನಾಟಕದ ಮಯಾಂಕ್ ಅಗರ್ವಾಲ್ ಅವರು ತಂಡ ಸೇರಿದ್ದಾರೆ.
ವಿರಾಟ್ ಕೊಹ್ಲಿ ಅವರು ನಾಯಕರಾಗಿರುವ 15 ಮಂದಿ ತಂಡವು ಅಕ್ಟೋಬರ್ 04ರಿಂದ ಮೊದಲ ಟೆಸ್ಟ್ ಪಂದ್ಯವಾಡಲಿದೆ. 14ನೇ ಏಷ್ಯಾಕಪ್ ಗೆದ್ದ ಭಾರತ ತಂಡದಲ್ಲಿರುವ ಸದಸ್ಯರ ಪೈಕಿ ಭುವನೇಶ್ವರ್ ಕುಮಾರ್ ಹಾಗೂ ಜಸ್ ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇಂಗ್ಲೆಂಡಿನ ಟೆಸ್ಟ್ ಸರಣಿಯಲ್ಲಿ ತಿಣುಕಾಡಿದ್ದ ಶಿಖರ್ ಧವನ್ ಅವರನ್ನು ನಿರೀಕ್ಷೆಯಂತೆ ಆಯ್ಕೆಗೆ ಪರಿಗಣಿಸಿಲ್ಲ.
ಮುರಳಿ ವಿಜಯ್ ಅವರು ಇಂಗ್ಲೆಂಡ್ ಪ್ರವಾಸದ ಕೊನೆ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಈ ಸರಣಿಗೂ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ದಿನೇಶ್ ಕಾರ್ತಿಕ್ ಹಾಗೂ ಕರುಣ್ ನಾಯರ್ ಅವರಿಗೂ ಸ್ಥಾನ ಸಿಕ್ಕಿಲ್ಲ.

ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಮಯಾಂಕ್ ಅಗರವಾಲ್ ಅವರಿಗೆ ಇದು ಚೊಚ್ಚಲ ಟೆಸ್ಟ್ ಸರಣಿಯಾಗಲಿದೆ. ಇಶಾಂತ್ ಶರ್ಮ ಹಾಗೂ ಗಾಯಾಳುವಾಗಿರುವ ಹಾರ್ದಿಕ್ ಪಾಂಡ್ಯರನ್ನು ಆಯ್ಕೆಗೆ ಪರಿಗಣಿಸಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿ ಹೇಳಿದೆ.
ಮೊದಲ ಟೆಸ್ಟ್ ಪಂದ್ಯ ರಾಜ್ ಕೋಟ್ ನಲ್ಲಿ ಅಕ್ಟೋಬರ್ 04ರಿಂದ ಆರಂಭವಾದರೆ, ಎರಡನೇ ಟೆಸ್ಟ್ ಪಂದ್ಯವು ಅಕ್ಟೋಬರ್ 12ರಂದು ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಾದ ಬಳಿಕ ಉಭಯ ತಂಡಗಳು ಐದು ಏಕದಿನ ಪಂದ್ಯಗಳ ಸರಣಿ ಹಾಗೂ ಮೂರು ಟಿ20 ಪಂದ್ಯಗಳ ಸರಣಿ ಆಡಲಿದೆ.
ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಪೃಥ್ವಿ ಶಾ, ಮಯಾಂಕ್ ಅಗರವಾಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ (ಉಪ ನಾಯಕ), ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.