
ತಿರುವನಂತಪುರಂ, ನವೆಂಬರ್ 3: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಕೇರಳದ ತಿರುವನಂತಪುರಂನಲ್ಲಿ ವಿಶೇಷ ಅಭಿಮಾನಿಯನ್ನು ಭೇಟಿಯಾಗಿದ್ದಾರೆ. ಹಾಲಿ ಮತ್ತು ಮಾಜಿ ನಾಯಕರ ಹೃದಯ ವೈಶಾಲ್ಯಕ್ಕೆ ಅಪಾರ ಕ್ರೀಡಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದಾಗಿದ್ದು ಗುರುವಾರ (ನವೆಂಬರ್ 1) ಭಾರತ ವೆಸ್ಟ್ ಇಂಡೀಸ್ ಕೊನೆಯ ಏಕದಿನ ಪಂದ್ಯಕ್ಕೂ ಮುನ್ನ. ಪಂದ್ಯದ ಸಲುವಾಗಿ ತಿರುವಂತಪುರಂನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಬಂದಿದ್ದ ಭಾರತ ತಂಡವನ್ನು ನೋಡಲು ತವಕಿಸಿದ್ದ ವಿಕಲಚೇತನ ಅಭಿಮಾನಿಯನ್ನು ಕೊಹ್ಲಿ-ಧೋನಿ ಪ್ರೀತಿಯಿಂದ ಕಾಣುವ ಮೂಲಕ ಅಭಿಮಾನಿಗಳ ಮನ ಗೆದ್ದರು.
ಈಗಲೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚಂದದ ಸಾಲುಗಳೊಂದಿಗೆ ಹರಿದಾಡುತ್ತಿವೆ. ದೊಡ್ಡ ದೊಡ್ಡ ಸಾಧಕರು ಹೆಚ್ಚಿನ ಸಾರಿ ದೊಡ್ಡಸ್ತಿಕೆ ತೋರಿಸಿಕೊಳ್ಳೋದಿದೆ. ಅಭಿಮಾನಿಗಳ ಜೊತೆ ಕಾಲ ಕಳೆಯಲು ಅವರಿಗೆ ಕೊಂಚವೂ ಬಿಡುವಿರೋಲ್ಲ. ಆದರೆ ಕೊಹ್ಲಿ-ಧೋನಿ ಹಾಗೆ ಮಾಡಲಿಲ್ಲ. ಪ್ರೀತಿ-ಆದರ-ಸರಳತೆ ಮೂಲಕ ಇಲ್ಲಿ ಇನ್ನಷ್ಟು ದೊಡ್ಡವರಾದರು. ವಿಡಿಯೋ ವೈರಲ್ ಆಗಿದ್ದು ಈ ಕಾರಣಕ್ಕಾಗಿಯೇ.
View this post on InstagramA post shared by VirushkaUpdates (@virushka.updates) on
ತನ್ನ ನೆಚ್ಚಿನ ಆಟಗಾರರನ್ನು ನೋಡಲು ಬಂದಿದ್ದ ಅಭಿಮಾನಿಗೆ ನಾಯಕ ಕೊಹ್ಲಿ, ತನ್ನದೇ ಚಿತ್ರದ ಮೇಲೆ ಹಸ್ತಾಕ್ಷರ ಬರೆದು ನೀಡಿದರು. ಅಭಿಮಾನಿಯ ಜೊತೆ ಫೋಟೋ ಕೂಡಾ ತೆಗೆಸಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಈ ವಿಡಿಯೋದಲ್ಲಿ ಧೋನಿ ಕೂಡಾ ಇದ್ದಾರೆ. ಕೂಲ್ ಕ್ಯಾಪ್ಟನ್ ಧೋನಿ, ಲವ್ಲಿ ಕ್ಯಾಪ್ಟನ್ ಕೊಹ್ಲಿ ಮೇಲೆ ಪ್ರೀತಿ ಹೆಚ್ಚಾಗಲು ಇದೂ ಚಂದದ ನೆಪಗಳಲ್ಲೊಂದು ಅಲ್ಲವೆ?