ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. ಕಾಂಗರೂ ಪಡೆ 10 ವರ್ಷಗಳ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ವಶಪಡಿಸಿಕೊಂಡಿದೆ. ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತ ತಂಡದಿಂದ 162 ರನ್ಗಳ ಗೆಲವಿನ ಗುರಿ ಪಡೆ ಆಸ್ಟ್ರೇಲಿಯಾ ಆರಂಭಿಕ ಹಿನ್ನಡೆ ಅನುಭವಿಸಿತು. ಪಂದ್ಯದ ಮೂರನೇ ದಿನದಂದು, ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ, ವಿರಾಟ್ ಕೊಹ್ಲಿ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಶೈಲಿಯನ್ನು ತೋರಿಸಿದರು.
ವಿರಾಟ್ ಕೊಹ್ಲಿ ಮೈದಾನದಲ್ಲಿ ಸದಾ ಒಂದಲ್ಲ ಒಂದು ವಿಚಾರದಿಂದ ಸದ್ದು ಮಾಡುತ್ತಿರುತ್ತಾರೆ. ಹಾಗೆಯೇ ಈ ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿಯೂ ಕೊಹ್ಲಿ ಹವಾ ಕಡಿಮೆ ಆಗಿಲ್ಲ. ಅಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳ ಆರೋಪಕ್ಕೆ ಕೊಹ್ಲಿ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಡ್ನಿ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಟೀಮ್ ಇಂಡಿಯಾ ಬೌಲರ್ಸ್ ಆಘಾತ ನೀಡಿದರು. ಮೂವರು ಬ್ಯಾಟರ್ಸ್ ವಿಕೆಟ್ ಪಡೆಯುವ ಮೂಲಕ ಪಂದ್ಯದ ಮೇಲೆ ಹಿಡಿಯ ಸಾಧಸಿದರು. ಈ ವೇಳೆ ಟೀಮ್ ಇಂಡಿಯಾ ಬೌಲರ್ಸ್ ಬೇಗನೆ ವಿಕೆಟ್ ತೆಗೆಯುತ್ತಿದ್ದಂತೆ ಆಸ್ಟ್ರೇಲಿಯಾ ಅಭಿಮಾನಿಗಳು ಗಂಭೀರ ಆರೋಪ ಮಾಡಿದರು. ಟೀಮ್ ಇಂಡಿಯಾ ಆಟಗಾರರು ಸ್ಯಾಂಡ್ ಪೇಪರ್ ಬಳಸುತ್ತಿದ್ದಾರೆ ಎಂದು ಆರೋಪವೆಸಗಿದರು. ಇದರಿಂದ ಸಿಟ್ಟಿಗೆದ್ದ ವಿರಾಟ್ ಕೊಹ್ಲಿ ಕೊಟ್ಟ ಕೌಂಟರ್ ಸಖತ್ ವೈರಲ್ ಆಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ಅಭಿಮಾನಿಗಳ ಬಾಯಿ ಮುಚ್ಚಿಸಿದ್ದಾರೆ.
ಆಸ್ಟ್ರೇಲಿಯಾ ಅಭಿಮಾನಿಗಳ ಆರೋಪ ಮಾಡುತ್ತಿದ್ದಂತೆ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ತಮ್ಮ ಖಾಲಿ ಪ್ಯಾಂಟ್ ಜೇಬನ್ನು ತೋರಿಸುವ ಮೂಲಕ ಬಾಯಿ ಮುಚ್ಚಿಸಿದರು. ನನ್ನ ಜೇಬಿನಲ್ಲಿ ಏನು ಇಲ್ಲ, ನೋಡಿಕೊಳ್ಳಿ ಎಂದು ಗೆಸ್ಟರ್ ಮೂಲಕವೇ ವಿರಾಟ್ ಕೊಹ್ಲಿ ತಿರುಗೇಟು ನೀಡಿದರು. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಈ ವಿಡಿಯೋಗೆ ಉತ್ತಮ ರೀತಿಯಲ್ಲಿ ಪ್ರಕ್ರಿಯಿಸುತ್ತಿದ್ದಾರೆ. ಅಲ್ಲದೆ, ಆಸ್ಟ್ರೇಲಿಯಾ ತಂಡವನ್ನು ಟ್ರೋಲ್ ಮಾಡಲಾಗುತ್ತಿದೆ.
ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರನ್ನು 2018 ರಲ್ಲಿ 'ಸ್ಯಾಂಡ್ ಪೇಪರ್ ಪ್ರಕರಣ'ದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾ ನಿಷೇಧಿಸಿತು. ಇದೀಗ ಸ್ಟೀವ್ ಸ್ಮಿತ್ ಔಟಾದ ಕೂಡಲೇ ಕಾಂಗರೂ ಪಡೆ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಸ್ಯಾಂಡ್ ಪೇಪರ್ ಪ್ರಕರಣ ನೆನಪಿಸಿದ್ದಾರೆ.