
ಸದ್ಯ ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಿದ್ದು, ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ಮುಖಭಂಗಕ್ಕೆ ಒಳಗಾಗಿದೆ. ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ಆಯೋಜನೆಯಾಗಿದ್ದು, ಇತ್ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ 222 ರನ್ಗಳ ಇನ್ನಿಂಗ್ಸ್ ಸಹಿತ ಭರ್ಜರಿ ಜಯವನ್ನು ಟೀಮ್ ಇಂಡಿಯಾ ಸಾಧಿಸಿತು.
ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆದ ಈ ಪಂದ್ಯ ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾದ ನಂತರ ಆಡಿದ ಮೊದಲ ಪಂದ್ಯ ಹಾಗೂ ವಿರಾಟ್ ಕೊಹ್ಲಿ ಆಡಿದ ನೂರನೇ ಟೆಸ್ಟ್ ಪಂದ್ಯ ಎಂಬ ವಿಶೇಷತೆಗಳನ್ನು ಹೊಂದಿತ್ತು. ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದ ಮೈಲಿಗಲ್ಲಿನ ಪಂದ್ಯವಾದ ಈ ಪಂದ್ಯದಲ್ಲಿ 45 ರನ್ ದಾಖಲಿಸಿದರು. ಹೀಗೆ ವಿರಾಟ್ ಕೊಹ್ಲಿಯ ನೂರನೇ ಟೆಸ್ಟ್ ಪಂದ್ಯ ಎನ್ನುವ ಕಾರಣದಿಂದಾಗಿ ಸಾಕಷ್ಟು ಕ್ರೇಜ್ ಪಡೆದುಕೊಂಡಿದ್ದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಟೀಮ್ ಇಂಡಿಯಾ ಆಟಗಾರರು ಗಾರ್ಡ್ ಆಫ್ ಹಾನರ್ ಸಲ್ಲಿಸಿದರು.
ಇನ್ನು ವಿರಾಟ್ ಕೊಹ್ಲಿ ತಮ್ಮ ಈ ನೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪಂಡಿತರು ವಿರಾಟ್ ಕೊಹ್ಲಿಗೆ ಶುಭಾಶಯವನ್ನು ಕೋರಿದ್ದರು. ಅದರಲ್ಲಿಯೂ ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋ ಪೋಸ್ಟ್ ಮಾಡುವ ಮೂಲಕ ವಿರಾಟ್ ಕೊಹ್ಲಿಯ ಈ ವಿಶೇಷ ಮೈಲಿಗಲ್ಲಿಗೆ ಶುಭ ಹಾರೈಸಿತ್ತು. ಈ ವಿಡಿಯೋದಲ್ಲಿ ಭಾರತದ ಹಲವಾರು ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿ ಕುರಿತು ಮಾತನಾಡಿ ಶುಭ ಕೋರಿದ್ದರು. ಸದ್ಯ ಈ ಟೆಸ್ಟ್ ಪಂದ್ಯ ಮುಕ್ತಾಯಗೊಂಡ ನಂತರ ತನ್ನನ್ನು ಕ್ರಿಕೆಟ್ ವೃತ್ತಿ ಜೀವನದುದ್ದಕ್ಕೂ ಬೆಂಬಲಿಸಿದವರಿಗೆ ವಿರಾಟ್ ಕೊಹ್ಲಿ ಧನ್ಯವಾದ ತಿಳಿಸಿದ್ದಾರೆ. ಹೌದು, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಶೇಷ ವಿಡಿಯೋ ಟ್ವೀಟ್ವೊಂದನ್ನು ಮಾಡಿರುವ ವಿರಾಟ್ ಕೊಹ್ಲಿ ತಮ್ಮ ನೂರನೇ ಟೆಸ್ಟ್ ಪಂದ್ಯದ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಕೋಚ್ ರಾಹುಲ್ ದ್ರಾವಿಡ್ ಅವರಿಂದ ವಿಶೇಷ ಕ್ಯಾಪ್ ಪಡೆದ ಘಳಿಗೆ, ವಿರಾಟ್ ಮತ್ತು ಅನುಷ್ಕಾ ಶರ್ಮಾ ಫೋಟೊ, ಟೀಮ್ ಇಂಡಿಯಾ ಆಟಗಾರರ ಫೋಟೋ ಹಾಗೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೊತೆಗಿರುವ ಫೋಟೋಗಳಿವೆ. ಹೀಗೆ ಪಂದ್ಯದ ಸುಂದರ ಕ್ಷಣಗಳನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ "ನನ್ನ ಕ್ರಿಕೆಟ್ ಜೀವನದ ದೊಡ್ಡ ಪಯಣವನ್ನು ಸುಂದರಗೊಳಿಸಿದ ನನ್ನ ಎಲ್ಲಾ ಕುಟುಂಬ ಸದಸ್ಯರು, ಸಹ ಆಟಗಾರರು, ಕೋಚ್ಗಳು ಮತ್ತು ಬಿಸಿಸಿಐಗೆ ಧನ್ಯವಾದಗಳು" ಎಂದು ವಿರಾಟ್ ಕೊಹ್ಲಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಕೊಹ್ಲಿ ನೂರನೇ ಟೆಸ್ಟ್ ಪಂದ್ಯದ ಸಾರಾಂಶ:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ ಮೊದಲನೇ ಇನ್ನಿಂಗ್ಸ್ನಲ್ಲಿ 8 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮೊದಲನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಅಜೇಯ 175 ರನ್, ರಿಷಭ್ ಪಂತ್ 96 ರನ್, ರವಿಚಂದ್ರನ್ ಅಶ್ವಿನ್ 61 ರನ್, ಹನುಮ ವಿಹಾರಿ 58 ರನ್ ಹಾಗೂ ವಿರಾಟ್ ಕೊಹ್ಲಿ 45 ರನ್ ಗಳಿಸಿ ಮಿಂಚಿದರು. ಹೀಗೆ ರವೀಂದ್ರ ಜಡೇಜಾ ಅತ್ಯಮೋಘ ಬ್ಯಾಟಿಂಗ್ನೊಂದಿಗೆ 574 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದ ಟೀಮ್ ಇಂಡಿಯಾ ಎರಡನೇ ದಿನದಾಟದಂದು ಡಿಕ್ಲೇರ್ ಮಾಡಿಕೊಂಡಿತು. ಹೀಗೆ ಟೀಮ್ ಇಂಡಿಯಾ ವಿರುದ್ಧ ಬೌಲಿಂಗ್ನಲ್ಲಿ ಮಂಕಾದ ಶ್ರೀಲಂಕಾ ಮೊದಲನೇ ಇನ್ನಿಂಗ್ಸ್ನ ಬ್ಯಾಟಿಂಗ್ನಲ್ಲೂ ಮಕಾಡೆ ಮಲಗಿತು. ಮೊದಲ ಇನ್ನಿಂಗ್ಸ್ನಲ್ಲಿ 174 ರನ್ಗಳಿಗೆ ಆಲ್ ಔಟ್ ಆದ ಶ್ರೀಲಂಕಾ 400 ರನ್ಗಳ ಹಿನ್ನಡೆಯೊಂದಿಗೆ ಫಾಲೋ ಆನ್ ನಿಯಮಕ್ಕೆ ಒಳಪಟ್ಟಿತು. ಹೀಗೆ ಮೊದಲನೇ ಇನ್ನಿಂಗ್ಸ್ನಲ್ಲಿ ಕಳಪೆಯಾದ ಶ್ರೀಲಂಕಾ ಮೂರನೇ ದಿನದಾಟದಂದು ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿ 178 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ಗಳನ್ನು ಕಳೆದುಕೊಳ್ಳುವುದರ ಮೂಲಕ 222 ರನ್ಗಳ ಇನ್ನಿಂಗ್ಸ್ ಸೋಲನ್ನು ಅನುಭವಿಸಿದೆ.