

ಬೆಂಗಳೂರು, ಏಪ್ರಿಲ್ 7: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ ಸ್ವಲ್ಪ ಕಾಲ ವಿಶ್ರಾಂತಿ ನೀಡಿ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ಹೇಳಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಸತತ 6 ಸೋಲು ಅನುಭವಿಸಿದ ಬಳಿಕ ವಾಘನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
'ಭಾರತ ಒಂದುವೇಳೆ ಬುದ್ಧಿ ಉಪಯೋಗಿಸುವುದಾದರೆ ವಿಶ್ವಕಪ್ ಕಾರಣಕ್ಕಾಗಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಬೇಕು. ಪ್ರತಿಷ್ಠಿತ ಟೂರ್ನಿ ಆರಂಭಕ್ಕೂ ಮುನ್ನ ಆತನಿಗೆ (ಕೊಹ್ಲಿ) ಐಪಿಎಲ್ನಿಂದ ಕೊಂಚ ಬಿಡುವು ನೀಡುವುದೊಳಿತು' ಎಂದು ವಾಘನ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಭಾನುವಾರ (ಏಪ್ರಿಲ್ 7) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ ಸೋಲನುಭವಿಸಿತು. ಇದು ಆರ್ಸಿಬಿ ಟೂರ್ನಿಯಲ್ಲಿ ಅನುಭವಿಸಿದ ಸತತ 6ನೇ ಸೋಲು.
ಐಪಿಎಲ್ನಲ್ಲಿ ಸತತ ಸೋಲಿನಿಂದಾಗಿ ಬೆಂಗಳೂರು ತಂಡದ ನಾಯಕ ಕೊಹ್ಲಿ ಸಹಜವಾಗಿಯೇ ಕುಗ್ಗಿದ್ದಾರೆ, ಒತ್ತಡಕ್ಕೆ ಒಳಗಾಗಿದ್ದಾರೆ. ಇನ್ನು ಆರ್ಸಿಬಿ ಪ್ಲೇ ಆಫ್ ಪ್ರವೇಶಿಸುವುದು ಕಷ್ಟ ಸಾಧ್ಯ ಎಂಬಂತಿದೆ. ಇನ್ನುಳಿದ ಪಂದ್ಯಗಳಲ್ಲೂ ಆಡಿದರೆ, ಕೊಹ್ಲಿ ತಂಡದ ಪರ ವ್ಯರ್ಥ ಶ್ರಮ ವಹಿಸಬೇಕಾಗಬಹುದು. ಇದು ಮುಂಬರಲಿರುವ ವಿಶ್ವಕಪ್ನಲ್ಲಿ ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಕಳಕಳಿ ವಾಘನ್ ಮಾತಿನಲ್ಲಿ ವ್ಯಕ್ತವಾಗಿದೆ.