
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಡೇವಿಡ್ ಲಾಯ್ಡ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅಂಗಳದಲ್ಲಿ ಪಂದ್ಯದ ಅಧಿಕಾರಿಗಳನ್ನು (ಅಂಪಾಯರ್) ಟೀಕಿಸುವುದು, ಬೆದರಿಸುವುದು ಹಾಗೂ ಅಪಹಾಸ್ಯ ಮಾಡುತ್ತಾರೆ ಎಂದು ಡೇವಿಡದ ಲಾಯ್ಡ್ ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಬಗ್ಗೆ ಮೂರನೇ ಅಂಪಾಯರ್ ನೀಡಿದ ತೀರ್ಪಿಗೆ ವಿರಾಟ್ ಕೊಹ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಮೈದಾನದ ಅಂಪಾಯರ್ಗಳ ಜೊತೆಗೆ ತನ್ನ ಅಸಮಾಧಾನವನ್ನು ವ್ಯಕ್ತಡಿಸಿದ್ದರು.
"ಈಗ ವಿರಾಟ್ ಕೊಹ್ಲಿಯ ವಿರುದ್ಧ ಯಾವುದೇ ಶಿಸ್ತು ಕ್ರಮಗಳ ಬಗ್ಗೆ ಮಾತುಗಳು ಕೇಳಿ ಬರುತ್ತಿಲ್ಲ. ಇದು ನನಗೆ ಹತಾಶೆ ಮೂಡಿಸಿದೆ. ರಾಷ್ಟ್ರೀಯ ತಂಡವೊಂದರ ನಾಯಕನಿಗೆ ಅಧಿಕಾರಿಯನ್ನು ಟೀಕಿಸಲು, ಹಿಂಸಿಸಲು ಬೆದರಿಸಲು ಹಾಗೂ ಅಪಹಾಸ್ಯ ಮಾಡಲು ಅವಕಾಶವನ್ನು ನೀಡಿದಂತಾಗಿದೆ" ಎಂದು ಡೇವಿಡ್ ಲಾಯ್ಡ್ ಪ್ರತಿಕ್ರಿಯಿಸಿದ್ದಾರೆ.
"ಮೊದಲ ಟೆಸ್ಟ್ನಲ್ಲಿ ಈ ರೀತಿಯ ವರ್ತನೆಯ ನಂತರ ಎರಡನೇ ಟೆಸ್ಟ್ನಲ್ಲಿಯೂ ಆತನಿಗೆ ಆಡುವ ಅವಕಾಶವನ್ನು ನೀಡಲಾಯಿತು. ಬೇರೆ ಯಾವುದೇ ಕ್ರೀಡೆಯಾಗಿದ್ದರೆ ಆವರನ್ನು ಮೈದಾನದಿಂದ ಹೊರಗೆ ಕಳುಹಿಸಲಾಗುತ್ತಿತ್ತು. ಕೊಹ್ಲಿ ಖಂಡಿತವಾಗಿಯೂ ಮುಂದಿನ ವಾರ ಅಹ್ಮದಾಬಾದ್ನಲ್ಲಿ ಆಡಬಾರದು" ಎಂದು ಡೇವಿಡ್ ಲಾಯ್ಡ್ ಆಗ್ರಹಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಚೆನ್ನೈ ಪಿಚ್ನ ಬಗೆಗಿನ ಚರ್ಚೆಯ ಬಗ್ಗೆಯೂ ಲಾಯ್ಡ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಐಸಿಸಿ ಯಾಕೆ ಈ ಬಗ್ಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸದೆ ಸುಮ್ಮನಿದೆ ಎಂದು ಡೇವಿಡ್ ಲಾಯ್ಡ್ ಹೇಳಿದ್ದಾರೆ. ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 24ರಂದು ಅಅಹ್ಮದಾಬಾದ್ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಫೆಬ್ರವರಿ 18ರಂದು ನಹುನಿರೀಕ್ಷಿತ ಐಪಿಎಲ್ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನಡೆಯಲಿದೆ.