ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!

ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯವರೆಗೂ ಭಾರತ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ತಂಡಗಳ ನಾಯಕನಾಗಿದ್ದ ವಿರಾಟ್ ಕೊಹ್ಲಿ ಸದ್ಯ ಟೀಮ್ ಇಂಡಿಯಾದ ಓರ್ವ ಆಟಗಾರನಾಗಿ ಮಾತ್ರ ತಂಡದಲ್ಲಿ ಉಳಿದುಕೊಂಡಿದ್ದಾರೆ. ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಸ್ವ ಇಚ್ಛೆಯಿಂದ ಕೆಳಗಿಳಿದ ವಿರಾಟ್ ಕೊಹ್ಲಿ ನಂತರದ ದಿನಗಳಲ್ಲಿ ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಲ್ಪಟ್ಟರು.
ಹೌದು, ಮೊದಲಿಗೆ ಭಾರತ ಟಿ ಟ್ವೆಂಟಿ ನಾಯಕತ್ವವನ್ನು ತಾವಾಗಿಯೇ ತ್ಯಜಿಸಿದ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಸೀಮಿತ ಓವರ್ ಮಾದರಿಯ ತಂಡಗಳಿಗೆ ಓರ್ವನೇ ನಾಯಕನಿರಬೇಕು ಎಂಬ ಕಾರಣವನ್ನು ನೀಡಿ ಕೆಳಗಿಳಿಸಿತು. ಹೀಗೆ ವಿರಾಟ್ ಕೊಹ್ಲಿ ಅವರನ್ನು ಏಕಾಏಕಿ ಭಾರತ ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಕೆಳಗಿಳಿಸಿದ ನಂತರ ದೊಡ್ಡ ಮಟ್ಟದಲ್ಲಿ ಟೀಕೆ ಹಾಗೂ ವಿರೋಧಗಳನ್ನು ಎದುರಿಸಿತು. ಬಿಸಿಸಿಐ ವಿರಾಟ್ ಕೊಹ್ಲಿ ವಿರುದ್ಧ ಬೇಕಂತಲೇ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಹಾಗೂ ವಿರಾಟ್ ಕೊಹ್ಲಿಯನ್ನು ಬಿಸಿಸಿಐ ಟಾರ್ಗೆಟ್ ಮಾಡುತ್ತಿದೆ ಎಂದು ದೊಡ್ಡ ಮಟ್ಟದಲ್ಲಿಯೇ ಆಪಾದನೆಗಳು ಕೇಳಿಬಂದವು.
ಇನ್ನು ಇಷ್ಟೆಲ್ಲಾ ಬೆಳವಣಿಗೆಗಳು ನಡೆದ ನಂತರ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳುವ ಮುನ್ನ ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ ಕುರಿತಾಗಿ ನೇರವಾದ ಹೇಳಿಕೆಗಳನ್ನು ನೀಡಿದರು. ಮೊದಲಿಗೆ ಗಂಗೂಲಿ ವಿರಾಟ್ ಕೊಹ್ಲಿ ಟಿ ಟ್ವೆಂಟಿ ನಾಯಕತ್ವವನ್ನು ತ್ಯಜಿಸಲು ಮುಂದಾದಾಗ ಬಿಸಿಸಿಐ ವಿರೋಧ ವ್ಯಕ್ತಪಡಿಸಿತ್ತು ಎಂದು ಹೇಳಿಕೆಯನ್ನು ನೀಡಿದ್ದರು. ಆದರೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ ತಾನು ಟಿ ಟ್ವೆಂಟಿ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದಾಗ ಬಿಸಿಸಿಐ ಯಾವುದೇ ವಿರೋಧವನ್ನು ವ್ಯಕ್ತ ಪಡಿಸದೇ ರಾಜೀನಾಮೆಯನ್ನು ಸ್ವೀಕರಿಸಿತು ಎಂದು ಹೇಳಿಕೆ ನೀಡುವುದರ ಮೂಲಕ ಗಂಗೂಲಿ ಹೇಳಿಕೆ ಸುಳ್ಳು ಎಂದು ಪರೋಕ್ಷವಾಗಿ ತಿಳಿಸಿದರು. ಹೀಗೆ ವಿರಾಟ್ ಕೊಹ್ಲಿಯ ಈ ಪತ್ರಿಕಾಗೋಷ್ಠಿಯನ್ನು ಕಂಡ ಮೇಲೆ ಕೊಹ್ಲಿ ಮತ್ತು ಬಿಸಿಸಿಐ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಂಪೂರ್ಣವಾಗಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ನಂಬಿಬಿಟ್ಟರು.
ಇನ್ನು ಈ ಸುದ್ದಿಗೋಷ್ಠಿಯ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಕೊಹ್ಲಿ ಸರಣಿ ಮುಗಿದ ಬೆನ್ನಲ್ಲೇ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೂ ಕೂಡ ರಾಜೀನಾಮೆಯನ್ನು ಸಲ್ಲಿಸಿದರು. ಹೀಗೆ ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಲು ಕಾರಣವೇನು ಮತ್ತು ಕಾರಣ ಯಾರು ಎಂಬುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದು, ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಕೂಡ ಈ ವಿಷಯದ ಕುರಿತಾಗಿ ಮಾತನಾಡಿ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಕೊಹ್ಲಿ ನಾಯಕತ್ವಕ್ಕೆ ಸಮಸ್ಯೆ ಇದೆ ಎಂಬುದು ಆಗಲೇ ತಿಳಿದಿತ್ತು ಎಂದ ಅಖ್ತರ್
ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ವೇಳೆ ನಾನೂ ಕೂಡ ದುಬೈನಲ್ಲಿ ಇದ್ದೆ ಹಾಗೂ ವಿರಾಟ್ ಕೊಹ್ಲಿ ನಾಯಕತ್ವ ಸಮಸ್ಯೆಯ ಸುಳಿಯಲ್ಲಿದೆ ಎಂಬುದನ್ನು ಅರಿತಿದ್ದೆ ಎಂದು ಶೋಯಬ್ ಅಖ್ತರ್ ಹೇಳಿದ್ದಾರೆ. ಆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲದೇ ಇದ್ದರೆ ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಳ್ಳಬಹುದು ಎಂದು ಆಗಲೇ ಊಹಿಸಿದ್ದೆನೆಂದು ಶೋಯಬ್ ಅಖ್ತರ್ ಹೇಳಿಕೊಂಡಿದ್ದಾರೆ.

ಕೊಹ್ಲಿ ವಿರುದ್ಧ ಲಾಬಿ ನಡೆಸಿದ್ದರು
ಇನ್ನೂ ಮುಂದುವರೆದು ಮಾತನಾಡಿರುವ ಶೋಯಬ್ ಅಖ್ತರ್ ವಿರಾಟ್ ಕೊಹ್ಲಿ ವಿರುದ್ಧ ಲಾಬಿಗಳು ನಡೆದಿದ್ದವು ಹಾಗೂ ತಂಡದಲ್ಲಿಯೇ ಆತನ ವಿರುದ್ಧ ಕೆಲ ಮಂದಿ ನಿಂತಿದ್ದರು, ಹೀಗಾಗಿಯೇ ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಿ ಕೆಳಗಿಳಿದರು ಎಂದು ಶೋಯಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ಹಾಗೂ ಇಂತಹ ಪರಿಸ್ಥಿತಿ ವಿರಾಟ್ ಕೊಹ್ಲಿಗೆ ಪರೀಕ್ಷೆಯ ಸಮಯವಾಗಿದ್ದು, ಕೊಹ್ಲಿ ಯಾವುದಕ್ಕೂ ಹೆದರದೇ ಧೈರ್ಯದಿಂದಿರಬೇಕು ಹಾಗೂ ಉತ್ತಮ ಪ್ರದರ್ಶನ ನೀಡಿ ಕಮ್ ಬ್ಯಾಕ್ ಮಾಡಬೇಕು ಎಂದು ಶೋಯಬ್ ಅಖ್ತರ್ ಹೇಳಿದ್ದಾರೆ.

ಗಂಗೂಲಿ ವಿರುದ್ಧ ಚಾಟಿ ಬೀಸಿದ್ರಾ ಶೋಯಬ್ ಅಖ್ತರ್?
ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ್ದರ ಕುರಿತು ಇಲ್ಲಿಯವರೆಗೂ ಮಾತನಾಡಿರುವ ಯಾವುದೇ ಕ್ರಿಕೆಟಿಗ ಕೂಡ ಕೊಹ್ಲಿ ವಿರುದ್ಧ ಲಾಬಿ ನಡೆದಿತ್ತು ಎಂಬ ಹೇಳಿಕೆಯನ್ನು ನೀಡಿರಲಿಲ್ಲ. ಆದರೆ ಶೋಯಬ್ ಅಖ್ತರ್ ಆ ರೀತಿಯ ಹೇಳಿಕೆ ನೀಡುವುದರ ಮೂಲಕ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವೆ ದೊಡ್ಡ ಮಟ್ಟದ ಮನಸ್ತಾಪವಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದಂತಿದೆ. ಸೌರವ್ ಗಂಗೂಲಿ ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ, ಇದಕ್ಕೆಲ್ಲಾ ವಿರಾಟ್ ಕೊಹ್ಲಿ ಭಯಪಡಬಾರದು ಎಂಬರ್ಥದಲ್ಲಿ ಶೋಯಬ್ ಅಖ್ತರ್ ಹೇಳಿಕೆ ನೀಡಿದಂತಿದೆ. ಸದ್ಯ ಶೋಯಬ್ ಅಖ್ತರ್ ನೀಡಿರುವ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಅಖ್ತರ್ ಗಂಗೂಲಿ ಕುರಿತಾಗಿಯೇ ಈ ಹೇಳಿಕೆಯನ್ನು ನೀಡಿದ್ದಾರೆ ಎಂಬ ಕಾಮೆಂಟ್ ಹೆಚ್ಚಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications