
ಎಂಸಿಸಿ ಹೊಸ ಕ್ರಿಕೆಟ್ ನಿಯಮಗಳು ಹೊರಬಿದ್ದ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಾಲೆಳೆದಿದ್ದಾರೆ. ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಾಸ್ ಬಟ್ಲರ್ನನ್ನ ರನೌಟ್ ಮಾಡಲು ಈಗ ಅಶ್ವಿನ್ಗೆ ಪೂರ್ಣ ಸ್ವಾತಂತ್ರ್ಯವಿದೆ ಎಂದು ಕಾಲೆಳೆದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕನಾಗಿದ್ದ ಆರ್. ಅಶ್ವಿನ್ ಮಂಕಡ್ ರೀತಿಯಲ್ಲಿ ಔಟ್ ಮಾಡಿದ್ದರು. ತಂಡದ ಗೆಲುವಿನ ಪಣ ತೊಟ್ಟಿದ್ದ ಅಶ್ವಿನ್, ಬಟ್ಲರ್ ಅವರನ್ನು ಮಂಕಡ್ ರೀತಿಯಲ್ಲಿ ಔಟ್ ಮಾಡಿದ್ದರು. ಪರಿಣಾಮ ರಾಜಸ್ಥಾನ್ ತಂಡ ಪಂದ್ಯವನ್ನು ಸೋತಿತ್ತು. ಆಟದ ವೇಳೆ ಅಶ್ವಿನ್ ಅವರ ಈ ನಡೆ ಅನೇಕರ ಟೀಕೆಗೂ ಗುರಿಯಾಗಿತ್ತು.
ಆದ್ರೀಗ ಈ ಔಟ್ ಅನ್ನು ಅಧಿಕೃತವಾಗಿ ರನೌಟ್ ಎಂದು ಎಂಸಿಸಿ ಪರಿಗಣಿಸಿದೆ. ಅಂದ್ರೆ ನಾನ್ ಸ್ಟ್ರೈಕ್ ಎಂಡ್ನಲ್ಲಿರುವ ಬ್ಯಾಟ್ಸ್ಮನ್ ಅನ್ನು ಚೆಂಡನ್ನು ಎಸೆಯುವ ಮುನ್ನವೇ ಬೌಲರ್ ರನ್ಔಟ್ ಮಾಡುವ ಯತ್ನ ಈ ಹಿಂದೆ ಸಾಕಷ್ಟು ದೊಡ್ಡ ಮಟ್ಟದ ವಿವಾದಗಳನ್ನು ಹುಟ್ಟುಹಾಕಿತ್ತು. ಈ ವಿವಾದಕ್ಕೆ ತಡೆ ಒಡ್ಡಿರುವ ಎಂಸಿಸಿ ಈ ರೀತಿಯ ಮಂಕಡ್ ರನ್ಔಟ್ ಇನ್ನು ಮುಂದೆ ಅಕ್ರಮವಲ್ಲ ಬದಲಾಗಿ ಅದೊಂದು ರನೌಟ್ ಎಂದು ಬದಲಾಯಿಸಿದೆ. ಈ ಮೂಲಕ ಬೌಲರ್ ಚೆಂಡು ಎಸೆತಕ್ಕೂ ಮುನ್ನವೇ ಆತುರವಾಗಿ ರನ್ ಕದಿಯಲು ಯತ್ನಿಸುವ ಬ್ಯಾಟ್ಸ್ಮನ್ನದ್ದೇ ತಪ್ಪು ಎಂಬಂತೆ ಎಂಸಿಸಿ ಬದಲಾವಣೆ ತಂದಿದೆ.
ಬುಧವಾರ ಮಾಜಿ ಭಾರತೀಯ ಸ್ಫೋಟಕ ಬ್ಯಾಟ್ಸ್ಮನ್ ಸೆಹ್ವಾಗ್ ಟ್ವಿಟ್ಟರ್ನಲ್ಲಿ ಅಶ್ವಿನ್ ಕುರಿತಾಗಿ ಟ್ವೀಟ್ ಮಾಡಿದ್ದು, ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದಕ್ಕಾಗಿ ಮತ್ತು 'ಮಂಕಂಡಿಗ್' ನ್ಯಾಯಸಮ್ಮತವಾಗಿ ಔಟಾದಕ್ಕಾಗಿ ಅಭಿನಂದಿಸಿದರು.
"ಅಭಿನಂದನೆಗಳು @ashwinravi99, ಇದು ಉತ್ತಮ ವಾರ. ಭಾರತಕ್ಕಾಗಿ ಟೆಸ್ಟ್ಗಳಲ್ಲಿ ಮೊದಲ ಬಾರಿಗೆ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದೀರ ಮತ್ತು ಈಗ ಬಟ್ಲರ್ನೊಂದಿಗೆ ಅಂತಹ ರನ್ ಔಟ್ಗಳನ್ನು ಮಾಡಲು ನಿಮಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ'' ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಐಪಿಎಲ್ 2022ರ ಮೆಗಾ ಹರಾಜಿನ ಪ್ರಕ್ರಿಯೆಯಲ್ಲಿ ರವಿಚಂದ್ರನ್ ಅಶ್ವಿನ್ರನ್ನ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯು 5 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಇನ್ನು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಾಸ್ ಬಟ್ಲರ್ ಅನ್ನು ರಾಜಸ್ತಾನ್ ರಾಯಲ್ಸ್ ರೀಟೈನ್ ಮಾಡಿಕೊಂಡಿದೆ.