
ಬ್ಯಾಟಿಂಗ್-ಬೌಲಿಂಗ್ ವಿಭಾಗದ ವೈಫಲ್ಯ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ವನಿತಾ ತಂಡ, ಅಲಿಸಾ ಹೀಲಿ 75 (39 ಎಸೆತ), ಬೆತ್ ಮೂನಿ 78 (54 ಎಸೆತ) ರನ್ನೊಂದಿಗೆ 20 ಓವರ್ಗೆ 4 ವಿಕೆಟ್ ಕಳೆದು 184 ರನ್ ಮಾಡಿತ್ತು. ಗುರಿ ಬೆನ್ನತ್ತಿದ ಭಾರತದ ವನಿತೆಯರು 19.1 ಓವರ್ಗೆ ಎಲ್ಲಾ ವಿಕೆಟ್ ಕಳೆದು 99 ರನ್ ಬಾರಿಸಲಷ್ಟೇ ಶಕ್ತರಾದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಭಾರತದ ಪ್ರದರ್ಶನ ಕಾಣಲಿಲ್ಲ. ಇದೇ ಸೋಲಿಗೆ ಕಾರಣವಾಯ್ತು (ಭಾರತದ ಮಹಿಳಾ ತಂಡದ ಫೈನಲ್ ವರೆಗಿನ ಸಾಧನೆ ಶ್ಲಾಘಿಸಿ ಭಾರತದ ಮಾಜಿ ಬ್ಯಾಟ್ಸ್ಮನ್ ವಿವಿಎಸ್ ಲಕ್ಷ್ಮಣ್ ಮಾಡಿರುವ ಟ್ವೀಟ್ ಮೇಲಿದೆ).
ಯಾವತ್ತೂ ಕುಸಿದು ಕೂರಬೇಡಿ
ಭಾರತದ ವನಿತಾ ತಂಡಕ್ಕೆ ಸ್ಫೂರ್ತಿಯ ಮಾತುಗಳನ್ನಾಡಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಸರ್ ವಿವಿಯನ್ ರಿಚರ್ಡ್ಸ್ ಟ್ವೀಟ್ ಮಾಡಿದ್ದಾರೆ. 'ಯಾವತ್ತೂ ಕುಸಿದು ಕೂರಬೇಡಿ. ಟೂರ್ನಿಯುದ್ದಕ್ಕೂ ನೀವು ಅದ್ಭುತ ಆಟವಾಡಿದ್ದೀರಿ. ಮುಂದೊಂದು ದಿನ ನಿಮ್ಮ ಕೈಗೂ ವಿಶ್ವಕಪ್ ಟ್ರೋಫಿ ಬರಲಿದೆ. ಯಾವತ್ತೂ ಈ ನಂಬಿಕೆಯನ್ನು ಜೀವಂತವಾಗಿರಿಸಿಕೊಳ್ಳಿ,' ಎಂದು ರಿಚರ್ಡ್ಸ್ ಬರೆದುಕೊಂಡಿದ್ದಾರೆ.
ಭರವಸೆ ಎಂದಿಗೂ ಇರಲಿ
ನಮ್ಮ ಮಹಿಳಾ ತಂಡ ಕಿರಿಯರದ್ದು. ಮುಂದೊಮ್ಮೆ ಇದು ಬಲಿಷ್ಠ ತಂಡವಾಗಿ ಹೊರಹೊಮ್ಮಲಿದೆ. ಭಾರತದ ವನಿತೆಯರೆ, ನೀವು ವಿಶ್ವದಗಲ ಸ್ಫೂರ್ತಿಯಾಗಿದ್ದೀರಿ. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ. ಪರಿಶ್ರಮ ಮುಂದುವರೆಸಿ. ಯಾವತ್ತಿಗೂ ಭರವಸೆ ಕಳೆದುಕೊಳ್ಳಬೇಡಿ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಕಪ್ ಬರುತ್ತದೆ ಹೋಗುತ್ತದೆ
ಕೆಲ ವರ್ಷಗಳ ಹಿಂದೆ ಭಾರತದ ವನಿತಾ ತಂಡ ವಿಶ್ವಕಪ್ ಫೈನಲ್ಗೆ ಬರುತ್ತದೆ, ವಿಶ್ವದ ಕಣ್ಣು ಆ ಪಂದ್ಯದತ್ತ ತಿರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ನೀವು ಆ ಸಾಧನೆ ಮಾಡಿದ್ದೀರಿ. ಕಪ್ ಬರುತ್ತದೆ ಹೋಗುತ್ತದೆ. ನೀವು ಫೈನಲ್ ತಲುಪಿದ್ದೇ ಒಂದು ದೊಡ್ಡ ಗೆಲುವು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಪೀಳಿಗೆಗೆ ನೀವು ಸ್ಫೂರ್ತಿಯಾಗಿದ್ದೀರಿ
ವಿಶ್ವಕಪ್ ಟ್ರೋಫಿ ಗೆಲುವಿನ ಸಮೀಪಕ್ಕೆ ಬಂದು ಸೋತಾಗ ಎಷ್ಟು ನೋವಾಗುತ್ತದೆ ಅನ್ನೋದು ನನಗೆ ಗೊತ್ತು. ಆದರೆ ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಫಲಿತಾಂಶ ಎನೇ ಬಂದಿರಲಿ, ಆದರೆ ನೀವು ಇಡೀ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದೀರಿ ಅನ್ನೋದಂತೂ ನಿಜ,' ಎಂದು ಭಾರತದ ಜಾಂಟಿ ರೋಡ್ಸ್ ಖ್ಯಾತಿಯ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications












