
ಹೈದರಾಬಾದ್, ಅಕ್ಟೋಬರ್ 10: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಅ.24ರಂದು ಡಾ. ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೆಯ ಏಕದಿನ ಪಂದ್ಯಕ್ಕೆ ಅಭಿಮಾನಿಗಳನ್ನು ಆಕರ್ಷಿಸಲು ಆಂಧ್ರ ಕ್ರಿಕೆಟ್ ಸಂಸ್ಥೆ (ಎಸಿಎ) ಟಿಕೆಟ್ ದರಗಳನ್ನು ಕಡಿತಗೊಳಿಸಿದೆ.
ಈ ಮೊದಲು ಕ್ರಿಕೆಟ್ ಪಂದ್ಯ ಇಂಧೋರ್ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ, ಬಿಸಿಸಿಐ ಜತೆ ಕಾಂಪ್ಲಿಮೆಂಟರಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮನಸ್ತಾಪ ಉಂಟಾಗಿದ್ದರಿಂದ ವಿಜಾಗ್ ಕ್ರೀಡಾಂಗಣಕ್ಕೆ ಬಿಸಿಸಿಐ ಪಂದ್ಯವನ್ನು ಸ್ಥಳಾಂತರಿಸಿದೆ.
ಬಿಸಿಸಿಐನ ನೂತನ ಟಿಕೆಟ್ ಹಂಚಿಕೆ ಮಾರ್ಗದರ್ಶಿಗೆ ಅನುಗುಣವಾಗಿ ಶೇ 90ರಷ್ಟು ಟಿಕೆಟ್ಗಳನ್ನು ಸಾರ್ವಜನಿಕ ಮಾರಾಟಕ್ಕೆ ಇಡಲಾಗುತ್ತದೆ.
ಈ ಕ್ರೀಡಾಂಗಣದಲ್ಲಿ 24,000 ಟಿಕೆಟ್ಗಳನ್ನು ಮಾರಾಟಕ್ಕೆ ಇರಿಸಲಾಗುತ್ತಿದ್ದು, 3,500 ಟಿಕೆಟ್ಗಳನ್ನು ಕಾಂಪ್ಲಿಮೆಂಟರಿ ಪಾಸ್ಆಗಿ ಬಿಸಿಸಿಐಗೆ ಸೇರಿಕೊಳ್ಳಲಿದೆ.
ಪ್ರೀಮಿಯಂ ಟಿಕೆಟ್ ಕೋಟಾದಡಿ 6,000 ರೂ ಬೆಲೆಯ ಟಿಕೆಟ್ಗಳನ್ನು 4,000 ರೂ.ಗೆ ಮಾರಾಟ ಮಾಡಲಾಗುತ್ತಿದೆ. 3,500 ರೂ. ಮುಖಬೆಲೆಯ ಟಿಕೆಟ್ ದರವನ್ನು 2,500 ರೂ.ಗೆ ಇಳಿಸಲಾಗಿದೆ.
2,500 ಬೆಲೆಯ ಟಿಕೆಟ್ಗಳು 2,000ನಲ್ಲಿ ಮಾರಾಟವಾಗಲಿವೆ. ಉಳಿದ ಟಿಕೆಟ್ಗಳ ದರವು 1,800, 1,200, 750, 500 ಮತ್ತು 250 ರೂ. ಇರಲಿದೆ.
ಮುಂಬೈನಲ್ಲಿಯೂ ಅನುಮಾನ:
ಕಾಂಪ್ಲಿಮೆಂಟರಿ ಪಾಸ್ಗಳ ಹಂಚಿಕೆಯು ಹೊಸ ವಿವಾದ ಸೃಷ್ಟಿಸುವ ಸೂಚನೆ ನೀಡಿದೆ. ಅ.29ರಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯಲಿರುವ ನಾಲ್ಕನೆಯ ಏಕದಿನ ಪಂದ್ಯದಲ್ಲಿಯೂ ಬಿಸಿಸಿಐಗೆ ಕಾಂಪ್ಲಿಮೆಂಟರಿ ಪಾಸ್ಗಳನ್ನು ನೀಡುವ ವಿಚಾರಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ.
ಮಧ್ಯಪ್ರದೇಶ, ಬೆಂಗಾಳ ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆಗಳು ಕೂಡ ಬಿಸಿಸಿಐಅನ್ನು ನಿಯಂತ್ರಿಸುವ ಆಡಳಿತ ಸಮಿತಿಯ ಸೂತ್ರಕ್ಕೆ ಅಸಮ್ಮತಿ ಸೂಚಿಸಿವೆ.
ಬಿಸಿಸಿಐ ಮೇಲಿನ ಸಿಒಎ ನಿಯಂತ್ರಣವು ತೀವ್ರ ಗೊಂದಲ ಸೃಷ್ಟಿಸಿವೆ. ಅದರ ಆಡಳಿತವನ್ನು ಯಾರು ನಿರ್ವಹಿಸುತ್ತಿದ್ದಾರೆ ಎನ್ನುವುದೇ ಅರಿವಾಗುತ್ತಿಲ್ಲ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ದೂರಿದೆ.
ಅಧಿಕೃತ ಸಹಿ ಇಲ್ಲದ ಕಾರಣ ಕಳೆದ ತಿಂಗಳು ಸಂಸ್ಥೆಯು ತನ್ನ ಯಾವ ಸಿಬ್ಬಂದಿಗೂ ವೇತನ ನೀಡಿಲ್ಲ. ಬ್ಯಾಂಕ್ ಖಾತೆ ನಿರ್ವಹಣೆ ಮಾಡುವುದಕ್ಕೂ ಮುಂಬೈ ಸಂಸ್ಥೆ ಮೇಲೆ ನಿರ್ಬಂಧವಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಬೆಂಗಳೂರಿಗೆ ತೆರಳಿದ್ದ ಮುಂಬೈ ತಂಡದ ಆಟಗಾರರು ಉಳಿದುಕೊಂಡಿದ್ದ ಹೋಟೆಲ್ ಬಿಲ್ಅನ್ನು ಸಹ ಪಾವತಿ ಮಾಡುವುದು ಇನ್ನೂ ಸಾಧ್ಯವಾಗಿಲ್ಲ ಎಂದು ದೂರಲಾಗಿದೆ.